|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೨೩. ಆಶ್ರಮಪ್ರಧಾನ

ಆಗ ವೆಂಕಟನಾರಾಯಣಾಚಾರರು ಆನಂದ, ಉದ್ವೇಗ, ಆಶ್ಚರ್ಯಗಳಿಂದ ಆನಂದಬಾಷ್ಪ ಸುರಿಸುತ್ತಾ “ಗುರುದೇವ ! ಈ ಮಹಾಪೀಠಕ್ಕೆ ನನ್ನ ಪುತ್ರರು ಅರ್ಹರೇ ?” ಎಂದು ಪ್ರಶ್ನಿಸಲು, ಶ್ರೀಯವರು ಮುಗುಳುನಗೆಯಿಂದ ಇವರಕ್ಕಿಂತ ಅರ್ಹರಾದವರು ಮತ್ತೊಬ್ಬರಿಲ್ಲ! ವೆಂಕಟನಾರಾಯಣ, ಇದು ಕೇವಲ ಅಭಿಮಾನಿಕವಾಗಿ ನಾವು ಮಾಡಿರುವ ತೀರ್ಮಾನವಲ್ಲ! ಶ್ರೀಮೂಲರಾಮ-ಶ್ರೀಮದಾಚಾರರ ಇಚ್ಛೆ, ಸಂಕಲ್ಪಗಳು ಮತ್ತು ಪ್ರೇರಣೆಯಂತೆ ಹೀಗೆ ನಿಶ್ಚಯಿಸಿದ್ದೇವೆ!” ಎಂದು ಹೇಳಿದರು. 

ಆನಂತರ ಶ್ರೀರಾಯರು “ನೀವೆಲ್ಲರೂ ಮಹಾಸಂಸ್ಥಾನದ ಮುಖ್ಯಾಭಿಮಾನಿಗಳು, ಆತ್ಮೀಯರೂ ಆಗಿದ್ದೀರಿ, ನಮ್ಮ ಈ ವ್ಯವಸ್ಥೆ ನೀವು ಮುಂದೆ ಮಹಾ ಸಂಸ್ಥಾನವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದು ಶ್ರೀಮೂಲರಘುಪತಿವೇದವ್ಯಾಸದೇವರ ತಥಾ ಶ್ರೀಮದಾಚಾರರ ಪರಮಾನುಗ್ರಹಕ್ಕೆ ಪಾತ್ರರಾಗಬೇಕು. ವೆಂಕಣ್ಣ, ನೀನು ನಮ್ಮಲ್ಲಿ ತೋರುತ್ತಿರುವಂತೇ ಈ ಮಹಾಸಂಸ್ಥಾನ ಮತ್ತು ಪೀಠಾಧೀಪತಿಗಳಲ್ಲಿ ಗೌರವ-ವಿಶ್ವಾಸಗಳಿಂದ ವರ್ತಿಸಬೇಕು” ಎಂದು ಆಜ್ಞಾಪಿಸಿದರು. 

ಮಹಾಸಂಸ್ಥಾನದ ಹಿತಚಿಂತನೆಯಲ್ಲಿ ಗುರುಗಳಿಗಿರುವ ದೀಕ್ಷೆ ಮುಂತಾದ ಸದ್ಗುಣಗಳನ್ನು ಕಂಡು ಮೂಕಸ್ಮಿತರಾಗಿದ್ದ ಸಕಲರೂ ಸಂತೋಷದಿಂದ ಗುರುರಾಜರಿಗೆ ನಮಸ್ಕರಿಸಿ ಗದ್ದದಕಂಠದಿಂದ ಮಹಾಸ್ವಾಮಿ, ತಮ್ಮ ಆದೇಶವನ್ನು ಶಿರಸಾವಹಿಸಿದ್ದೇವೆ. ತಮ್ಮ ಅಪ್ಪಣೆಯಂತೆ ನಡೆದು ನಮ್ಮ ಯೋಗ್ಯತಾನುಸಾರವಾಗಿ ಮಹಾಸಂಸ್ಥಾನಕ್ಕೆ ಸೇವೆಸಲ್ಲಿಸಿ ತಮ್ಮ ಆಶೀರ್ವಾದ ಅನುಗ್ರಹಗಳಿಗೆ ಪಾತ್ರರಾಗುತ್ತೇವೆ” ಎಂದು ಬಿನ್ನವಿಸಿದರು. 

ಶ್ರೀಗುರುಸಾರ್ವಭೌಮರು ಒಂದು ಶುಭಮುಹೂರ್ತದಲ್ಲಿ ತಮ್ಮ ಪೂರ್ವಾಶ್ರಮ ಅಗ್ರಜರಾದ ಗುರುರಾಜಾಚಾರರ ಪೌತ್ರರೂ, ತಮ್ಮಲ್ಲಿಯೇ ಸಕಲಶಾಸ್ತ್ರಗಳನ್ನು ಅಧ್ಯಯನ ಮಾಡಿದ, ಜ್ಞಾನ-ಭಕ್ತಿ-ವೈರಾಗ್ಯಸಂಪನ್ನರಾದ, ಪ್ರಿಯಶಿಷ್ಯ ಶ್ರೀವೆಂಕಣ್ಣಚಾರ್ಯರಿಗೆ ಸಕಲವೈದಿಕ ಲೌಕಿಕ-ವಿದ್ವಜ್ಜನರು, ಧರ್ಮಾಭಿಮಾನಿಗಳ ಸಮಕ್ಷ ಪರಮಹಂಸಾಶ್ರಮಸ್ವೀಕಾರಕ್ಕೆ ಫಲಮಂತ್ರಾಕ್ಷತೆಯನ್ನು ಕರುಣಿಸಿದರು. 

ಶ್ರೀವೆಂಕಣ್ಣಾಚಾರ್ಯರು ಮರುದಿನ ವೇದೋಕ್ತಕ್ರಮ, ಮಹಾಸಂಸ್ಥಾನ ಸಂಪ್ರದಾಯ-ಪದ್ಧತಿಗಳಂತೆ ಯತ್ಯಾಶ್ರಮವನ್ನು ಸ್ವೀಕರಿಸಬಂದು ಗುರುರಾಜರಿಗೆ ಪಾದಪೂಜೆಮಾಡಿ ವಿನೀತರಾಗಿ ನಮಸ್ಕರಿಸಿದರು. ಶ್ರೀಯವರು ಪ್ರಿಯಶಿಷ್ಯರಿಗೆ ಮಂತ್ರಮುದ್ರಾಧಾರಣೆಮಾಡಿ ಗುರೂಪದೇಶ, ಮಹಾಮಂತ್ರಗಳು ಹಾಗೂ ಚತುಃಷಷ್ಟಿಕಲೆಗಳನ್ನೂ ಉಪದೇಶಮಾಡಿ ಅವರನ್ನು ಶ್ರೀಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ ಮಂಡಿಸಿ ಸಂಪ್ರದಾಯಾನುಸಾರವಾಗಿ “ಯೋಗೀಂದ್ರತೀರ್ಥರು” ಎಂಬ ಅಭಿಧಾನದಿಂದ ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕವನ್ನು ಸ್ವಹಸ್ತದಿಂದ ನೆರವೇರಿಸಿ, ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿ ಪರಮಾನುಗ್ರಹಮಾಡಿದರು. ಅತ್ಯಂತ ವೈಭವ, ವಿಜೃಂಭಣೆಗಳಿಂದ ಜರುಗಿದ ಆ ಮಹೋತ್ಸವವನ್ನು ಕಂಡ ಸಹಸ್ರಾರು ಜನರು ಪರಮಾನಂದಭರಿತರಾದರು. ಸಭಿಕರು “ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ಜಯವಾಗಲಿ” ಎಂದು ಜಯಜಯಕಾರ ಮಾಡಿದರು.