ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೨೧. ಬೃಂದಾವನ ಶಿಲೆಯ ಮಹತ್ವ !
ಶ್ರೀರಾಘವೇಂದ್ರಸ್ವಾಮಿಗಳವರು ಯಶಸ್ವೀ ಸಂಚಾರ ಮುಗಿಸಿಕೊಂಡು ಮಂತ್ರಾಲಯಕ್ಕೆ ದಯಮಾಡಿಸುವ ವಿಚಾರತಿಳಿದು ದಿವಾನ್ ವೆಂಕಣ್ಣಪಂತನು ಗುರುರಾಜರನ್ನು ಎದುರುಗೊಂಡು ಸ್ವಾಗತಿಸಿದನು.
ಅಂದು ದೇವರಪೂಜೆ. ಭಿಕ್ಷಾಸ್ವೀಕಾರಾದಿಗಳು ಜರುಗಿದ ಮೇಲೆ ವೆಂಕಣ್ಣ ಪಂತನು ಗುರುಗಳು ತನಗೊಪ್ಪಿಸಿದ್ದ ಕಾರಭಾರದ ಬಗ್ಗೆ ವಿಜ್ಞಾಪಿಸುತ್ತಾ ತಾನು ಶ್ರೀವೆಂಕಟೇಶ್ವರನ ಗುಡಿ, ದೇವರ ವಿಗ್ರಹ, ಶ್ರೀಮಠದ ಆತ್ಮೀಯರು ಹಾಗೂ ಪಂಡಿತರು, ಪರಿವಾರದವರಿಗಾಗಿ ಮನೆಗಳನ್ನು ನಿರ್ಮಿಸಿರುವುದನ್ನು ಅರಿಕೆಮಾಡಿ ಎಲ್ಲವನ್ನೂ ಗುರುಗಳಿಗೆ ತೋರಿಸಿದನು. ಶ್ರೀಪಾದಂಗಳವರಿಗೆ ಅದನ್ನು ಕಂಡು ತೃಪ್ತಿ-ಸಮಾಧಾನಗಳುಂಟಾದವು.
ಮರುದಿನ ವೆಂಕಣ್ಣಪಂತನು ಶ್ರೀಯವರನ್ನು ಯಜ್ಞವೇದಿಕೆಯಬಳಿಗೆ ಕರೆದು ಕೊಂಡುಹೋಗಿ ಅಲ್ಲಿ ಗುರುಗಳ ಅಪ್ಪಣೆಯಂತೆ ನಿರ್ಮಾಣವಾದ ಗರ್ಭಾಲಯ, ಬೃಂದಾವನಗಳನ್ನು ತೋರಿಸಿದನು. ಗರ್ಭಾಲಯವು ಗುರುಗಳ ಮನಸ್ಸಿಗೆ ಒಪ್ಪಿತವಾಯಿತು. ವೆಂಕಣ್ಣಪಂತನು ಮಾಡಿಸಿರುವ ಸುಂದರವಾದ ಬೃಂದಾವನವನ್ನು ಕಂಡು ಆನಂದಿಸಿದ ಗುರುರಾಜರು ನಸುನಕ್ಕು “ವೆಂಕಣ್ಣ, ಬೃಂದಾವನ ಸುಂದರವಾಗಿದೆ! ಆದರೆ ಅದು ನಮಗೆ ಉಪಯೊಗವಿಲ್ಲ!” ಎಂದು ಹೇಳಿದರು. ವೆಂಕಣ್ಣನು ಕರಜೋಡಿಸಿ “ಏಕೆ ಗುರುದೇವ? ಬೃಂದಾವನವು ಚೆನ್ನಾಗಿಲ್ಲವೇ ?” ಎಂದೆನಲು ಬೃಂದಾವನವು ಬಹುಸುಂದರವಾಗಿದೆ. ಆದರೆ ನಮಗಿದುಬೇಡ. ಈ ಬೃಂದಾವನಕ್ಕೆ ಅರ್ಹರಾದವರು ಮುಂದೆಬರುತ್ತಾರೆ! ಅವರಿಗಾಗಿ ಇದು ಮೀಸಲಾಗಿರಲಿ! ನಮಗೆ ಬೇರೊಂದು ಬೃಂದಾವನವನ್ನು ಮಾಡಿಸು” ಎಂದು ರಾಯರು ಆಜ್ಞಾಪಿಸಿದರು, ವೆಂಕಣ್ಣಪಂತನು' ಸ್ವಾಮಿ, ಯಾವಶಿಲೆಯಲ್ಲಿ ಮಾಡಿಸಬೇಕು?” ಎಂದು ಪ್ರಶ್ನಿಸಿದ. ರಾಯರು “ಮಧ್ಯಾನ್ನಶಿಲೆಯನ್ನು ತೋರಿಸುತ್ತೇವೆ” ಎಂದುತ್ತರಿಸಿದರು.
ಅಂದು ಮಧ್ಯಾಹ್ನ ದೇವಪೂಜಾ, ತೀರ್ಥಪ್ರಸಾದ, ಭಿಕ್ಷಾ ಮುಂತಾದವು ನೆರವೇರಿದ ಮೇಲೆ ಮೇನೆಯಲ್ಲಿ ಕುಳಿತು ಹೊರಟ ಶ್ರೀಗಳವರು ಇಂದು ಮಹಾದ್ವಾರವೆಂದು ಹೆಸರಾಗಿರುವ ಗ್ರಾಮದ ಬಳಿ ಹರಿಯುವ ಹಳ್ಳದ ಬಳಿಗೆ ದಯಮಾಡಿಸಿ ಮೇನೆಯಿಂದಿಳಿದು ಕಾಲ್ನಡಿಗೆಯಿಂದ ಒಂದು ಜಮೀನಿನ ಬಳಿಗೆ ಬಂದರು. ಪಂತನೂ ಕುದುರೆಯಿಂದಿಳಿದು ಗುರುಗಳನ್ನು ಹಿಂಬಾಲಿಸಿದನು. ಗುರುರಾಜರು ಆ ಜಮೀನಿನಲ್ಲಿದ್ದ ಅನೇಕ ಬಂಡೆಗಳ ಮಧ್ಯಕ್ಕೆ ಬಂದು ಅಲ್ಲಿದ್ದ ಒಂದು ಕರಿಯ ಶಿಲೆಯನ್ನು ತೋರಿಸಿ “ವೆಂಕಣ್ಣ ಈ ಶಿಲೆಯಿಂದ ನಮ್ಮ ಬೃಂದಾವನವನ್ನು ತಯಾರುಮಾಡಿಸು” ಎಂದು ಹೇಳಿದರು.
ಶ್ರೀಗುರುಸಾರ್ವಭೌಮರ ಮಾತುಕೇಳಿ ವೆಂಕಣ್ಣಪಂತನಿಗೆ ಕುತೂಹಲವುಂಟಾಯಿತು. ಅವನು ವಿನಯದಿಂದ “ಮಹಾಸ್ವಾಮಿ! ತಮ್ಮ ಪ್ರತಿಯೊಂದು ನಡೆ-ನುಡಿಗಳೂ ನನಗೆ ವಿಸ್ಮಯವನ್ನುಂಟುಮಾಡುತ್ತಿವೆ! ನಾನು ಪ್ರಶ್ನಿಸುವುದಕ್ಕೆ ಕ್ಷಮಿಸಬೇಕು, ಈ ಶಿಲೆಯನ್ನೇ ತಾವೇಕೆ ಆರಿಸುವಿರಿ. ಒರಟಾಗಿರುವ ಈ ಶಿಲೆಯಲ್ಲಿ ಅದೇನಂತಹ ಮಹತ್ವವಡಗಿದೆ ?” ಎಂದು ವಿಜ್ಞಾಪಿಸಲು ಶ್ರೀರಾಯರು ನಗೆಮೊಗದಿಂದ “ವೆಂಕಣ್ಣ, ಇದು ಸಾಮಾನ್ಯ ಶಿಲೆಯಲ್ಲಪ್ಪ, ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮ-ಲಕ್ಷ್ಮಣರು ಈ ಪ್ರದೇಶವನ್ನು ತಮ್ಮ ಪಾದಧೂಳಿನಿಂದ ಪಾವನಗೊಳಿಸಿದ್ದರೆಂದು ನಿನಗೆ ಹಿಂದೆಯೇ ತಿಳಿಸಿದ್ದೇವೆ. ಶ್ರೀರಾಮಚಂದ್ರದೇವರು ಆಗ ಇವೇ ಶಿಲೆಯ ಮೇಲೆ ಏಳು ಮುಹೂರ್ತಕಾಲ ವಿಶ್ರಮಿಸಿದ್ದರು! ಇದು ಶ್ರೀರಾಮಭದ್ರನ ಚರಣಸ್ಪರ್ಶದಿಂದ ಪಾವನವಾಗಿದೆ. ಆದ್ದರಿಂದ ಈ ಶಿಲೆಯಿಂದಲೇ ಈ ಮೂಲರಾಮನ ಚರಣಸೇವಕನ ಬೃಂದಾವನವಾಗಬೇಕು ! ವೆಂಕಣ್ಣ, ಇದು ಶಾಲಿಗ್ರಾಮದಂತೆ ಪರಮ ಪವಿತ್ರವಾಗಿ ಪೂಜಾರ್ಹಶಿಲೆಯಾಗಿದೆ!” ಎಂದು ನಿರೂಪಿಸಿದರು.
ಶ್ರೀಗುರುರಾಜರ ಒಂದೊಂದು ನುಡಿಯೂ ವೆಂಕಣ್ಣ ಪಂತನಲ್ಲಿ ಭಾವೋದ್ವೇಗ, ಭಕ್ತಿ ಭಾವಗಳನ್ನು ಪುಟಿದೆಬ್ಬಿಸಿದೆವು! ಮೈ ರೋಮಾಂಚನಗೊಂಡಿತು. ಒಂದು ಕಡೆ ಆಶ್ಚರ್ಯ, ಆನಂದ, ಮತ್ತೊಂದು ಕಡೆ ಪರಮಮಂಗಳಮೂರ್ತಿಗಳನ್ನು ಹೆಚ್ಚು ಕಾಲ ಸೇವಿಸುವ ಸೌಭಾಗ್ಯದಿಂದ ವಂಚಿತನಾಗುವೆನೆಲ್ಲಾ ಎಂಬ ದುಃಖದಿಂದ ಮೈಮರೆತ ವೆಂಕಣ್ಣ ಪಂತನು ಗದ್ಗದಕಂಠದಿಂದ, ಭಕ್ತಿಪರವಶನಾಗಿ ರಾಯರ ಪಾದಗಳ ಮೇಲೆ ಶಿರವಿರಿಸಿ “ಗುರುದೇವ ! ನಿಮ್ಮ ನಡೆ, ನುಡಿ, ಆಕಾರ, ತೇಜಸ್ಸು ಅಪಾರಜ್ಞಾನ ಶ್ರೀಹರಿಭಕ್ತಿ, ವೈರಾಗ್ಯ, ತೇಜಸ್ಸು, ಭೂತ-ಭಾವಿ-ಭವಿಷ್ಯನಿರೂಪಕ ವಾಕ್ಸರಣಿಗಳನ್ನು ಕಂಡುಕೇಳಿದಂತೆಲ್ಲಾ ತಮ್ಮ ಉಪದೇಶಾಮೃತ ಪಾನಮಾಡಿದಂತೆಲ್ಲಾ ನನ್ನ ಮನಸ್ಸಿನಲ್ಲಿ ಶ್ರೀಹರಿಭಕ್ತಾಗ್ರೇಸರಾದ ಆ ಶ್ರೀಪ್ರಹ್ಲಾದರಾಜರೇ ನಿಮ್ಮ ರೂಪದಲ್ಲಿ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ ! ಮಹಾನುಭಾವ, ತಮ್ಮಂಥ ಲೋಕಪಾವನಮೂರ್ತಿಗಳನ್ನು ಗುರುಗಳಾಗಿ ಪಡೆದ ನಾವೇ ಧನ್ಯರು! ಸ್ವಾಮಿ, ತಮ್ಮ ಅನುಗ್ರಹ ವಾತ್ಸಲ್ಯಗಳಿಗೆ ಪಾತ್ರನಾದ ನಾನೆಂಥ ಭಾಗ್ಯಶಾಲಿ ? ನಿಮಗೆ ನಮೋನಮಃ ಗುರುವರ್ಯ, ನಿಮ್ಮ ಅಪ್ಪಣೆಯನ್ನು ಶಿರಸಾಧರಿಸಿದ್ದೇನೆ” ಎಂದು ವಿಜ್ಞಾಪಿಸಿದನು. ಶ್ರೀಗುರುಸಾರ್ವಭೌಮರು ವೆಂಕಣ್ಣ ಪಂತನತ್ತ ಮಂದಹಾಸಬೀರಿ ಅವನೊಡನೆ ಮಂತ್ರಾಲಯಕ್ಕೆ ಮರಳಿದರು.
ಮೇಲಿನ ಪ್ರಕರಣ ಜರುಗಿದ ಐದು ದಿನಗಳಾದ ಮೇಲೆ ಒಂದು ಶುಭಮುಹೂರ್ತದಲ್ಲಿ ವೈದಿಕವಿಧಿಪೂರ್ವಕವಾಗಿ ಶ್ರೀಗುರುರಾಜರು ವೇದಘೋಷ-ವಾದ್ಯವೈಭವಗಳಾಗುತ್ತಿರಲು, ನೂತನವಾಗಿ ನಿರ್ಮಿತವಾದ ದೇವಾಲಯದಲ್ಲಿ ತಮ್ಮ ಕುಲದೇವನಾದ ಶ್ರೀವೆಂಕಟೇಶ್ವರನನ್ನು ತಮ್ಮ ಅಮೃತಹಸ್ತದಿಂದ ಪ್ರತಿಷ್ಠಾಪಿಸಿ, ವೈಭವದಿಂದ ಮಹೋತ್ಸವವನ್ನು ನೆರವೇರಿಸಿದರು.
ಶ್ರೀವೆಂಕಟೇಶ್ವರನ ಪ್ರತಿಷ್ಠಾಪನೆಯಾದ ಮೇಲೆ ಶ್ರೀರಾಯರು ಆ ದೇವಮಂದಿರದಲ್ಲಿಯೇ ವಾಸಮಾಡಲಾರಂಭಿಸಿದರು. ಆತ್ಮೀಯರು, ಪಂಡಿತರು, ಪರಿವಾರದವರಿಗಾಗಿ ನಿರ್ಮಿತವಾದ ಮನೆಗಳ ಗೃಹಪ್ರವೇಶ ಮಹೋತ್ಸವಪಾರ್ವಕವಾಗಿ ಅವರೆಲ್ಲರೂ ಶ್ರೀಯವರು ಅನುಗ್ರಹಿಸಿದ ಮನೆಗಳಲ್ಲಿ ವಾಸಿಸುತ್ತಾ ಶ್ರೀರಾಯರ ಸೇವೆಯಲ್ಲಿ ತತ್ಪರರಾದರು.
ಕೆಲದಿನಗಳಾದ ಮೇಲೆ ಶ್ರೀರಾಯರು ಮಿತಪರಿವಾರರಾಗಿ ತುಂಗಭದ್ರಾನದಿಯ ಆಚೆಯ ದಂಡೆಗೆ ಸ್ವಲ್ಪದೂರದಲ್ಲಿರುವ ಜಾಗೃತಸ್ಥಳವೆಂದು ಪ್ರಖ್ಯಾತವಾದ ಗಣಧಾಳ್ ಎಂಬ ಗ್ರಾಮಕ್ಕೆ ದಯಮಾಡಿಸಿದರು. ಗಣಧಾಳಿನಲ್ಲಿ ಸ್ವಯಂವಕ್ತನಾಗಿ ರಾಜಿಸುವ ಪಂಚಮುಖಿ ಶ್ರೀಪ್ರಾಣದೇವರ ಸನ್ನಿಧಿಯಲ್ಲಿ ಶ್ರೀಪಾದಂಗಳವರು, ಶ್ರೀಮೂಲರಾಮ ಪೂಜಾರಾಧನೆ, ಶ್ರೀಪ್ರಾಣದೇವರ ಸೇವಾದಿಗಳನ್ನು ಮಾಡುತ್ತಾ ಒಂದು ಮಂಡಲಕಾಲ ಅಲ್ಲಿ ತಪೋನಿರತರಾಗಿದ್ದು ಶ್ರೀಪ್ರಾಣದೇವರ ಸಂಪೂಾರ್ಣಾನುಗ್ರಹವನ್ನೂ, ತಮ್ಮ ಸಂಕಲ್ಪಕ್ಕೆ ಶ್ರೀವಾಯುದೇವರ ಸಮ್ಮತಿ, ಆಶೀರ್ವಾದಗಳನ್ನೂ ಸಂಪಾದಿಸಿಕೊಂಡು ಮತ್ತೆ ಮಂತ್ರಾಲಯಕ್ಕೆ ಚಿತ್ತೆಸಿದರು.