ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೨೦. ಶ್ರೀರಾಯರ ಕೊನೆಯ ಸಂಚಾರ
ಒಂದು ದಿನ ವೆಂಕಣ್ಣ ಪಂತನನ್ನು ಕರೆಸಿಕೊಂಡು ಅವನು ಮಾಡಬೇಕಾದ ಕಾವ್ಯಗಳನ್ನೆಲ್ಲಾ ವಿವರಿಸಿ ತಮಗಾಗಿ ಒಂದು ಬೃಂದಾವನವನ್ನು ಸಿದ್ಧಪಡಿಸುವಂತೆಯೂ, ತಾವು ತೋರಿದ, ಪ್ರಹ್ಲಾದರು ಯಾಗಗಳನ್ನಾಚರಿಸಿದ ಯಜ್ಞವೇದಿಕೆಯ ಮೇಲೆ ಬೃಂದಾವನಕ್ಕೆ ತಕ್ಕಂತೆ ದ್ವಾದಶಸ್ಥಂಭಗಳಿಂದ ಯುಕ್ತವಾದ ಒಂದು ಗರ್ಭಗುಡಿಯನ್ನು ನಿರ್ಮಿಸುವಂತೆ ಆಜ್ಞಾಪಿಸಿದರು.
ಆನಂತರ ಗುರುರಾಜರು ತಮ್ಮ ಕೊನೆಯ ಲೋಕಕಲ್ಯಾಣ ಸಂಚಾರವನ್ನು ಕೈಕೊಂಡು ಮಹಾಸಂಸ್ಥಾನದೊಡನೆ ಮಂತ್ರಾಲಯದಿಂದ ದಿಗ್ವಿಜಯ ಮಾಡಿದರು.
ಶ್ರೀಗಳವರು ಸಂಚಾರಕ್ರಮದಿಂದ ಅನೇಕ ಗ್ರಾಮ-ಪಟ್ಟಣಗಳನ್ನು ತಮ್ಮ ಚರಣರಜಸ್ಸಿನಿಂದ ಪಾವನಗೊಳಿಸುತ್ತಾ ಶಿಷ್ಯ-ಭಕ್ತವರ್ಗದವರನ್ನು ಮಂತ್ರಮುದ್ರಾಧಾರಣೆ, ಗುರೂಪದೇಶ, ಶ್ರೀಮೂಲರಾಮದೇವರ ದರ್ಶನ, ತೀರ್ಥಪ್ರಸಾದ, ತತ್ವ ಧರ್ಮೋಪದೇಶಗಳಿಂದ ಅನುಗ್ರಹಿಸುತ್ತಿದ್ದರು. ಪ್ರತಿಸಲದಂತೆ ಈ ಸಂಚಾರಕಾಲದಲ್ಲಿಯೂ, ಚಾತುರ್ವಣ್ಯ್ರದ ಸಮಸ್ತಜನರೂ ಶ್ರೀಗುರುಗಳನ್ನು ಸೇವಿಸಿ, ಅನುಗೃಹೀತರಾಗುತ್ತಿದ್ದರು. ರೋಗ-ರುಜಿನ, ಮತಿವಿಭ್ರಮ, ಮಾನಸಿಕ ಚಿಂತೆ, ದಾರಿದ್ರ ಸಂತಾನ ವಿಲ್ಲದಿರುವಿಕೆ, ವಿದ್ಯಾವಿಹೀನತೆ ಮುಂತಾದ ವಿವಿಧ ಕಷ್ಟಗಳಿಂದ ನೊಂದು ಬೆಂದು ಮುಂದಿನ ದಾರಿಗಾಣದೆ ಪರಿತಪಿಸುತ್ತಿದ್ದ ಸಹಸ್ರಾರು ಜನರೂ ಶ್ರೀಗುರುಸಾರ್ವಭೌಮರಿಗೆ ಶರಣಾಗತರಾಗಿ, ಅವರ ಪಾದೋದಕ, ಆಕಜಲ, ಮಂತ್ರಾಕ್ಷತೆಗಳ ಸ್ವೀಕಾರಮಾತ್ರದಿಂದ, ಗುರುಗಳ ಕಾರುಣ್ಯಾತಿಶಯದಿಂದ ರೋಗಾದ್ಯುಪದ್ರವ ಪರಿಹಾರ, ಸಂತಾನ, ಸಂಪತ್ತು, ವಿದ್ಯೆ, ತಮ್ಮೆಲ್ಲ ವಾಂಛಿತಗಳನ್ನೂ ಪಡೆದು ಉದ್ದಾರಕ ಜಗದ್ಗುರುಗಳೆಂದು ಶ್ರೀರಾಯರನ್ನು ಭಕ್ತಿ ಶ್ರದ್ಧೆಗಳಿಂದ ಸೇವಿಸಿ ಶ್ರೇಯೋಭಾಗಿಗಳಾಗುತ್ತಿದ್ದರು. ಹೀಗೆ ಗುರುರಾಜರು ಹತ್ತೆಂಟು ತಿಂಗಳ ಕಾಲ ದೇಶಸಂಚಾರಮಾಡಿ, ಆಪಂಡಿತಪಾಮರರು, ದೀನ-ದಲಿತ ಜನರನ್ನು ಉದ್ಧರಿಸುತ್ತಾ, ಶರಣಜನ ಮಂದಾರರೆಂದು ಸಮಸ್ತರಿಂದ ಗೇಗೀಯಮಾನರಾಗಿ ಮತ್ತೆ ಶ್ರೀಮಂತ್ರಾಲಯಕ್ಕೆ ದಯಮಾಡಿಸಿದರು.