|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೧೮, ಮಂತ್ರಾಲಯದ ಇತಿಹಾಸ

ಆದವಾನಿಯಿಂದ ಹೊರಟ ಗುರುರಾಜರು ಮಂತ್ರಾಲಯಕ್ಕೆ ಆಗಮಿಸಿದರು. ದಿವಾನ್‌ ವೆಂಕಣ್ಣಪಂತನೂ ಗುರುಗಳೊಡನೆ ಬಂದನು. ವೆಂಕಣ್ಣಪಂತ ಗ್ರಾಮದ ಗೌಡಕುಲಕರ್ಣಿ ಮತ್ತು ಪ್ರಮುಖರನ್ನು ಕರೆಸಿಕೊಂಡು ನವಾಬರು ಖಾಜಿಗಳಿಗಿದ್ದ ಮಂತ್ರಾಲಯ ಗ್ರಾಮವನ್ನು ಶ್ರೀರಾಯರಿಗೆ ದಾನಮಾಡಿರುವ ವಿಚಾರವನ್ನು ತಿಳಿಸಿ ಇನ್ನು ಮುಂದೆ ಈ ಗ್ರಾಮವು ಗುರುಗಳಿಗೆ ಸೇರಿರುವುದರಿಂದ ಸರ್ವರೂ ಅವರ ಆಜ್ಞೆಯಂತೆ ವರ್ತಿಸಬೇಕೆಂದು ನವಾಬರ ಹುಕುಂ ಜಾರೀಮಾಡಿ ಗ್ರಾಮವನ್ನು ಗುರುರಾಜರಿಗೆ ಒಪ್ಪಿಸಿಕೊಟ್ಟ. 

ಗುರುರಾಜರು ಅಂದು ಸಂಜೆ ಆತ್ಮೀಯರನ್ನೂ ದಿವಾನ್ ವೆಂಕಣ್ಣಪಂತನನ್ನೂ ಕರೆಯಿಸಿಕೊಂಡು ಮುಂದಿನ ಚಟುವಟಿಕೆ- ಗಳನ್ನು ವಿವರಿಸುತ್ತಾ ಮಂತ್ರಾಲಯದಲ್ಲಿ ತಮ್ಮ ಕುಲಸ್ವಾಮಿಯಾದ ಶ್ರೀವೆಂಕಟೇಶ್ವರನನ್ನು ಪ್ರತಿಷ್ಠಾಪಿಸಿ, ಮಂತ್ರಾಲಯವು ಭಾರತದಲ್ಲಿ ಒಂದು ದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿ ಬೆಳಗುವಂತೆ ಮಾಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದರು. ತಾವು ವಾಸಿಸಲು ಅನುಕೂಲವಾಗುವಂತೆ ವಿಸ್ತಾರವಾದ ವೆಂಕಟೇಶ್ವರನ ಗುಡಿಯನ್ನೂ, ತಮ್ಮ ಆತ್ಮೀಯರು, ಪಂಡಿತರು ಪರಿವಾರದವರಾಗಿ ಅನೇಕ ಗೃಹಗಳನ್ನೂ ಆದಷ್ಟು ಶೀಘ್ರವಾಗಿ ನಿರ್ಮಿಸಬೇಕೆಂದು ವೆಂಕಣ್ಣಪಂತನಿಗೆ ಆಜ್ಞಾಪಿಸಿದರು. ಗುರುಗಳು ತನ್ನ ಮೇಲೆ ಹೊರಿಸಿದ ದೊಡ್ಡ ಹೊಣೆಯನ್ನು ಸಂತೋಷದಿಂದ ನಿರ್ವಹಿಸುವುದಾಗಿ ವಿಜ್ಞಾಪಿಸಿ ಶ್ರೀವೆಂಕಟೇಶ್ವರನ ಗುಡಿ ಮತ್ತು ಗೃಹಗಳ ನಿರ್ಮಾಣಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಿ ಅದರ ಮೇಲ್ವಿಚಾರಣೆಗಾಗಿ ಮಂತ್ರಾಲಯದಲ್ಲಿಯೇ ನಿಂತನು. 

ಮರುದಿನ ಗುರುರಾಜರು ವೆಂಕಣ್ಣಪಂತನೊಡನೆ ತುಂಗಭದ್ರಾನದಿಯ ಬಳಿಯಲ್ಲಿರುವ ವಿಸ್ತಾರವಾದ ಒಂದು ಬಯಲು ಪ್ರದೇಶಕ್ಕೆ ಬಂದು ಅಲ್ಲಿ ಒಂದು ಸ್ಥಳವನ್ನು ತೋರಿಸಿ ಅಲ್ಲಿ ಭೂಖನನಮಾಡಲು ಆದೇಶ ನೀಡಿದರು. ವೆಂಕಣ್ಣಪಂತನ ಮೇಲ್ವಿಚಾರಣೆಯಲ್ಲಿ ಭೂಮಿಯನ್ನು ಅಗೆಯುವ ಕಾರ್ಯ ಪ್ರಾರಂಭವಾಯಿತು. ನಾಲ್ಕಾರು ಅಡಿಗಳಷ್ಟು ಅಗೆತವಾದಾಗ ಅಲ್ಲಿ ಒಂದು ಅಪೂರ್ವದೃಶ್ಯ ಗೋಚರಿಸಿತು. ಮಣ್ಣನ್ನು ತೆಗೆದು ಸ್ವಚ್ಛಮಾಡಿದಾಗ ಅದೊಂದು ವಿಸ್ತಾರವಾದ ಹೋಮಕುಂಡವೆಂಬುದು ವ್ಯಕ್ತವಾಯಿತು! ಅಲ್ಲಿ ಯಜ್ಞಯಾಗಾದಿಗಳಿಗೆ ಉಪಯೋಗಿಸುವ ಅನೇಕ ಯಜ್ಞಸಾಧನಗಳು ದೊರಕಿದವು! ಶ್ರೀರಾಯರ ಅಣತಿಯಂತೆ ಭೂಖನನವನ್ನು ಅಷ್ಟಕ್ಕೇ ನಿಲ್ಲಿಸಿ, ವೆಂಕಣ್ಣಪಂತನು ಕೆಲಸಗಾರರನ್ನು ಕಳುಹಿಸಿಕೊಟ್ಟು ಶ್ರೀಯವರ ಸನಿಹಕ್ಕೆ ಬಂದು ವಿಜ್ಞಾಪಿಸಿದನು. 

ವೆಂಕಣ್ಣ : ಮಹಾಸ್ವಾಮಿ, ತಾವು ಇಲ್ಲಿ ಭೂಖನನ ಮಾಡಲು ಹೇಳಿದಿರಿ, ಈಗ ಇಲ್ಲಿಂದು ಹೋಮಕುಂಡವು ಕಂಡುಬಂದಿರುವುದು ಆಶ್ಚರಕರ ! ಇದರ ರಹಸ್ಯವೇನೋ ತಿಳಿಯಲಿಲ್ಲ. ದಯಮಾಡಿ ತಿಳಿಸಬೇಕಾಗಿ ಕೋರುತ್ತೇನೆ. 

ರಾಯರು : (ನಸುನಕ್ಕು) ವೆಂಕಣ್ಣ ! ಮಂತ್ರಾಲಯ ಗ್ರಾಮವೇ ನಮಗೆ ಬೇಕೆಂದೂ, ಅದಕ್ಕೆ ಕಾರಣವನ್ನು ಮುಂದೆ ತಿಳಿಸುವುದಾಗಿ ಆದವಾನಿಯಲ್ಲಿ ನಿನಗೆ ಹೇಳಿದ್ದು ಜ್ಞಾಪಕವಿದೆಯೇ ? 

ವೆಂಕಣ್ಣ : ಅಹುದು ಸ್ವಾಮಿ, ಚೆನ್ನಾಗಿ ನೆನಪಿದೆ. 

ರಾಯರು : ಈ ಗ್ರಾಮವನ್ನೇ ನಾವು ಅಪೇಕ್ಷಿಸಲು ಮಹತ್ತರ ಕಾರಣವಿದೆ! ಕೇಳು. ಇದೊಂದು ಕುಗ್ರಾಮವೆಂದು ನೀವೆಲ್ಲಾ ಭಾವಿಸಿರುವಿರಿ, ಆದರಿದು ಪರಮ ಪವಿತ್ರವಾದ ಕ್ಷೇತ್ರವಾಗಿದೆ! ಇದರ ಮಹಿಮೆ ಅಪಾರವಾದುದು. ಇದು ಮಂತ್ರಸಿದ್ದಿ ಕ್ಷೇತ್ರ ! ಹಿಂದೆ ಕೃತಯುಗದಲ್ಲಿ ವೈಷ್ಣವಾಗ್ರಣಿಯಾದ ಪ್ರಹ್ಲಾದರಾಜನು ಈ ಸ್ಥಳದಲ್ಲಿ ಅನೇಕ ಯಜ್ಞ-ಯಾಗಾದಿಗಳನ್ನು ಶ್ರೀಹರಿಪ್ರೀತರ್ಥವಾಗಿ ನೆರವೇರಿಸಿದ್ದಾನೆ.452 ಇದೇ ಅಂದು ಪ್ರಹ್ಲಾದನು ಯಾಗಗಳನ್ನು ಆಚರಿಸಿದ ಯಜ್ಞಕುಂಡ ! ಪ್ರಹ್ಲಾದನು ನೆರವೇರಿಸಿದ ಯಜ್ಞಗಳಿಂದ ಈ ಭೂಪ್ರದೇಶವು ಪರಮಪಾವನವೆನಿಸಿ ಜಗತ್ತಿನ ಯಾವುದೇ ಶಕ್ತಿಗೂ ಮಣಿಯದ ಅಜೇಯ ಕ್ಷೇತ್ರವಾಗಿದೆ. ಇದು ಕೃತಯುಗದ ವಿಚಾರವಾಯಿತು. ತ್ರೇತಾಯುಗದಲ್ಲಿ ದುಷ್ಟ ಶಿಕ್ಷಣ-ಶಿಷ್ಟರ ರಕ್ಷಣೆಗಾಗಿ ಶ್ರೀಮನ್ನಾರಾಯಣನು ಶ್ರೀರಾಮಚಂದ್ರನಾಗಿ ಅವತರಿಸಿದ್ದನಷ್ಟೇ ? ಆಗ ಶ್ರೀರಾಮಚಂದ್ರನು ಪಿತೃವಾಕ್ಯಪರಿಪಾಲನೆಗಾಗಿ ಸೀತಾಲಕ್ಷ್ಮಣರೊಡನೆ ವನವಾಸಕ್ಕೆ ತೆರಳಿದಾಗ ರಾವಣನು ಸೀತಾಮಾತೆಯ ಪ್ರತಿಕೃತಿಯನ್ನು 153 ಅಪಹರಿಸಿದಾಗ ರಾಮಭದ್ರನು ಲಕ್ಷ್ಮಣನೊಡನೆ ಲೋಕಮಾತೆಯಾದ ಸೀತಾಪ್ರತಿಕೃತಿಯನ್ನು ಅರಸುತ್ತಾ ಎಲ್ಲೆಡೆ ತಿರುಗುತ್ತಿರುವಾಗ ಈ ಸ್ಥಳಕ್ಕೆ ಬಂದು ಕೆಲಕ್ಷಣಗಳಕಾಲ ಇಲ್ಲಿ ವಿಶ್ರಮಿಸಿದ್ದು ಮುಂದೆ ತೆರಳಿದ್ದನು. ಅಂತೆಯೇ ಶ್ರೀರಾಮಲಕ್ಷ್ಮಣರ ಪಾದರಜಸ್ಸಿನಿಂದ ಈ ಪ್ರದೇಶವು ಪರಮಪಾವನವಾಗಿದೆ! 

ಇನ್ನು ದ್ವಾಪರಯುಗದವಿಚಾರ ವೆಂಕಣ್ಣ, ದ್ವಾಪರಯುಗದಲ್ಲಿ ಈ ಪ್ರದೇಶವು ಅನುಸಾಲ್ವನ ರಾಜ್ಯಕ್ಕೆ ಸೇರಿದ್ದಿತು. ಕುರುಕ್ಷೇತ್ರಯುದ್ಧವು ಮುಗಿದು ಪಾಂಡವರಿಗೆ ವಿಜಯವಾಗಿ, ಧರ್ಮರಾಜನ ಪಟ್ಟಾಭಿಷೇಕವಾದಮೇಲೆ ಪಾಂಡುನಂದನನಾದ ಯುಧಿಷ್ಠಿರನು ಬಂಧುಬಾಂದವರು, ಪೂಜಾರ್ಹರಾದ ಆಚಾರರುಗಳ ಹನನದಿಂದ ದುಃಖಿತನಾಗಿದ್ದಾಗ ಶ್ರೀಕೃಷ್ಣನು ಅವನಿಗೆ ಬಂಧುಹನನ ದೋಷಪರಿಹಾರ ಮತ್ತು ಮನಶ್ಯಾಂತಿಗಾಗಿ ಅಶ್ವಮೇಧಯಾಗವನ್ನು ಮಾಡುವಂತೆ ಸಲಹೆ ಮಾಡಿದನು. ಧರ್ಮನಂದನನು ಶ್ರೀಕೃಷ್ಣನ ಅಪ್ಪಣೆಯಂತೆ ಅಶ್ವಮೇಧಯಾಗ ಮಾಡಲು ದೀಕ್ಷಾ ಬದ್ಧನಾಗಿ ಯಾಗಾಶ್ವವನ್ನು ಅಲಂಕರಿಸಿ, ಪೂಜಿಸಿ ಬಿಟ್ಟನು. ಅರ್ಜುನನು ಸೈನ್ಯ ಸಮೇತನಾಗಿ ಯಾಗಾಶ್ವ ರಕ್ಷಣೆಗಾಗಿ ಹೊರಟನು. ಕುದುರೆಯು ಅನೇಕ ರಾಜ್ಯಗಳನ್ನು ಬಳಸಿ, ಸ್ವಚ್ಛಂದವಾಗಿ ತಿರುಗುತ್ತಾ ಈ ಪ್ರದೇಶಕ್ಕೆ ಬಂದಾಗ ವೀರನಾದ ಅನುಸಾಲ್ವನು ಆ ಯಾಗಾಶ್ವವನ್ನು ಕಟ್ಟಿಹಾಕಿಸಿದನು. ಇದರ ಪರಿಣಾಮವಾಗಿ ಯಾಗಾಶ್ವವನ್ನು ಹಿಂಬಾಲಿಸಿ ಬಂದ ಅರ್ಜುನನಿಗೂ ಅನುಸಾಲ್ವನಿಗೂ ಇದೇ ಸ್ಥಳದಲ್ಲಿ ಭೀಕರ ಯುದ್ಧ ನಡೆಯಿತು. ತ್ರಿಲೋಕವಿಜಯಿಯಾದ ಅರ್ಜುನನಿಗೆ ಅನುಸಾಲ್ವನನ್ನು ಗೆಲ್ಲಲಾಗಲಿಲ್ಲ. ಅಪಮಾನ-ದುಃಖಗಳಿಂದ ಬಳಲಿದ ಅರ್ಜುನನು ಶ್ರೀಕೃಷ್ಣನನ್ನು ಸ್ಮರಿಸಿದನು. “ಮಮ ಪ್ರಾಣಾಹಿ ಪಾಂಡವಾ” ಎಂದು ಸಾರಿದ್ದ ಭಗವಾನ್ ಶ್ರೀಕೃಷ್ಣನು ಅರ್ಜುನನ ಮೊರೆ ಕೇಳಿ ಕಾರುಣ್ಯದಿಂದ ತತ್‌ ಕ್ಷಣವೇ ಇಲ್ಲಿ ಪ್ರತ್ಯಕ್ಷನಾದನು. ಅರ್ಜುನನು ಕೃಷ್ಣಪರಮಾತ್ಮನಲ್ಲಿ ಸಮಸ್ತ ವೃತ್ತಾಂತವನ್ನೂ ನಿವೇದಿಸಿ ವಿಜಯ ದೊರಕಿಸಿಕೊಡುವಂತೆ ಪ್ರಭುವಿಗೆ ನಮಸ್ಕರಿಸಿದನು. ಮಂದಹಾಸಬೀರುತ್ತಾ ಶ್ರೀಕೃಷ್ಣನು ಅರ್ಜುನನನ್ನು ಸಮಾಧಾನಪಡಿಸುತ್ತಾಈ ಸ್ಥಳದ ಮಹತ್ವವನ್ನು ಹೀಗೆ ನಿರೂಪಿಸಿದನು. 

“ಅರ್ಜುನ ! ಅನುಸಾಲ್ವನನ್ನು ಜಯಿಸಲಾಗಲಿಲ್ಲವೆಂದು ಚಿಂತಿಸಬೇಡ. ಅನುಸಾಲ್ವನು, ಹಿಂದೆ ಪ್ರಹ್ಲಾದರಾಜನು ಯಜ್ಞಗಳನ್ನಾಚರಿಸದ್ದ ಪರಮಪವಿತ್ರವಾದ ಯಜ್ಞಕುಂಡವಿರುವ ಸ್ಥಳದಲ್ಲಿ ನಿಂತು ನಿನ್ನೊಡನೆ ಯುದ್ಧ ಮಾಡುತ್ತಿದ್ದಾನೆ! ಆದ್ದರಿಂದಲೇ ನೀನು ಅವನನ್ನು ಜಯಿಸಲಾಗಲಿಲ್ಲ! ಈ ಸ್ಥಳದ ಪ್ರಭಾವ ಅಂತಹುದು! ನೀನು ಮಾತ್ರವಲ್ಲ; ಜಗತ್ತಿನಲ್ಲಿ ಮತ್ತಾರಿಂದಲೂ ಅವನನ್ನು ಜಯಿಸಲು ಶಕ್ಯವಿಲ್ಲ. ಅವನು ಅಜೇಯನಾಗಿರುವುದು ತನ್ನ ಪರಾಕ್ರಮದಿಂದಲ್ಲ! ಅದು ಈ ಪಾವನಕ್ಷೇತ್ರದ ಮಹಿಮೆಯ ಫಲ! ಪಾರ್ಥ, ನೀನು ಎಷ್ಟು ಬಾರಿ ಯುದ್ಧಮಾಡಿದರೂ ಅವನು ಈ ಸ್ಥಳದಿಂದ ಕದಲುವರೆಗೆ ನೀನು ಗೆಲ್ಲಲಾರೆ! ಈಗ ಅವನನ್ನು ನಾವು ಉಪಾಯಾಂತರದಿಂದ ಜಯಿಸಬೇಕು. ಧನಂಜಯ್ ! ನೋಡೀಗ ನನ್ನ ಯೋಗಮಾಯೆಯ ಪ್ರಭಾವವನ್ನು!” 

ಹೀಗೆ ಹೇಳಿ ತನ್ನ ಯೋಗಮಾಯೆಯನ್ನು ಬೀರಿ ಕ್ಷಣಾರ್ಧದಲ್ಲಿ ಅನುಸಾಲ್ವನನ್ನು ಆ ಯಜ್ಞಕುಂಡವಿದ್ದ ಸ್ಥಳದಿಂದ ಬಹುದೂರ ಹಿಂಜರಿಯುವಂತೆ ಮಾಡಿ, ಕೂಡಲೇ ಅರ್ಜುನನ ರಥವನ್ನು ಈ ಸ್ಥಳದಲ್ಲಿ ನಿಲ್ಲಿಸಿದನು. ಜಗನ್ನಾಟಕ ಸೂತ್ರಧಾರಿಯಾದ ಶ್ರೀಕೃಷ್ಣಪರಮಾತ್ಮ ! 

ಆಗ ಮತ್ತೆ ಅರ್ಜುನಾನುಸಾಲ್ವರಲ್ಲಿ ಯುದ್ಧ ಪ್ರಾರಂಭವಾಯಿತು. ಆಶ್ಚರ್ಯ! ಅರ್ಜುನನು ಕ್ಷಣಾರ್ಧದಲ್ಲಿ ಅನುಸಾಲ್ವನನ್ನು ಪರಾಭವಗೊಳಿಸಿದನು. ಅನುಸಾಲ್ವನು ಶ್ರೀಕೃಷ್ಣಾರ್ಜುನರಿಗೆ ಅಭಿವಂದಿಸಿ, ಕಪ್ಪಕಾಣಿಕೆಗಳನ್ನರ್ಪಿಸಿ, ಯಾಗಾಶ್ವವನ್ನು ತಂದು ಲೋಕಮಾತೆಯಾದ ಸೀತಾದೇವಿಯನ್ನು ಅಗ್ನಿದೇವನು ತನ್ನ ಲೋಕಕ್ಕೆ ಕರೆದೊಯ್ದು, ಸೀತೆಯಂತೆಯೇ ಇದ್ದ ವೇದವತಿಯೆಂಬ ಸ್ತ್ರೀಯನ್ನು ಸೀತೆಯ ಸ್ಥಾನದಲ್ಲಿರಿಸಿದ್ದನು. ದೇವಮಾಯೆಯಿಂದ ಅದನ್ನು ಅರಿಯದ ರಾವಣನು ವೇದವತಿಯನ್ನೇ ಸೀತೆಯೆಂದು ಅಪಹರಿಸಿದ್ದನು ಅರ್ಜುನನಿಗೆ ಒಪ್ಪಿಸಿದನು. ಅರ್ಜುನನು ಯಾಗಾಶ್ವದೊಡನೆ ಮುಂದೆ ಹೊರಟನು. ಇಂತು ನರ-ನಾರಾಯಣರೆಂದು ಖ್ಯಾತರಾದ ಅರ್ಜುನ ಮತ್ತು ಶ್ರೀಕೃಷ್ಣ ಪರಮಾತ್ಮನ ಪಾದಧೂಳಿಯಿಂದ, ಪಾದಸ್ಪರ್ಶದಿಂದ ಈ ಸ್ಥಳವು ಪಾವನವಾಗಿದೆ' ಎಂದು ವಿವರಿಸಿದರು. 

ಗುರುರಾಜರ ವಚನವನ್ನಾಲಿಸುತ್ತಾ ವಿಸ್ಮಯದಿಂದ ಕರಮುಗಿದು ನಿಂತಿದ್ದ ವೆಂಕಣ್ಣಪಂತನನ್ನು ನೋಡಿ ದರಹಾಸಬೀರಿ ಶ್ರೀರಾಯರು ಮುಂದುವರೆದು ಮತ್ತೆ ಹೀಗೆ ಹೇಳಿದರು - 

“ಇಷ್ಟೆ ಅಲ್ಲ: ಮುಂದೆ ಕಲಿಯುಗದಲ್ಲಿ ಈ ಭಾಗವು ರಾಷ್ಟ್ರಕೂಟರಿಗೆ ಸೇರಿದ್ದು ನಂತರ ಸಾಕ್ಷಾತ್ ವಾಯುದೇವರ ಅವತಾರನಾದ ಶ್ರೀಆಂಜನೇಯನ ನಾಡೆಂದು ವಿಖ್ಯಾತವಾದ ಹಂಪೆಯಲ್ಲಿ ವಿಜಯನಗರದ ಕರ್ನಾಟಕ ಸಾಮ್ರಾಜ್ಯವು ಸ್ಥಾಪಿತವಾಗಿ ಕನ್ನಡಚಕ್ರವರ್ತಿಗಳು ಧರ್ಮದಿಂದ ರಾಜ್ಯಪರಿಪಾಲನ ಮಾಡುತ್ತಿರುವಾಗ ಈ ಪ್ರದೇಶವು ಕನ್ನಡ ಸಾಮ್ರಾಜ್ಯಕ್ಕೆ ಸೇರಿದ್ದಿತು. ಆಗ ಶ್ರೀಮನ್ಮಧ್ವಾಚಾರ್ಯರ ಮಹಾಸಂಸ್ಥಾನಾಧೀಶ್ವರರೂ, ಜ್ಞಾನನಿಧಿಗಳೂ, ನಮ್ಮ ಪೂರ್ವಾಚಾರರೂ ಆದ ಶ್ರೀವಿಭುಧೇಂದ್ರತೀರ್ಥ ಶ್ರೀಪಾದಂಗಳವರ ಜ್ಞಾನ-ಭಕ್ತಿ-ವೈರಾಗ್ಯಾದಿ ಸದ್ಗುಣಗಳಿಂದ ಪ್ರಭಾವಿತರಾದ ಕನ್ನಡಸಾಮ್ರಾಟರು ಈ ಗ್ರಾಮವನ್ನು ಶ್ರೀವಿಬುಧೇಂದ್ರ ತೀರ್ಥ ಗುರುಗಳಿಗೆ ದಾನಮಾಡಿದರು. ಈ ಸ್ಥಳದ ಮಹತ್ವವನ್ನು ತಿಳಿದು ಜ್ಞಾನಿಗಳಾದ ಶ್ರೀವಿಬುಧೇಂದ್ರತೀರ್ಥರು ಯಜ್ಞವೇದಿಕೆಯಿರುವ ಈ ಪವಿತ್ರ ಸ್ಥಳದಲ್ಲಿ ಬಹುಕಾಲ ತಪಸ್ಸನ್ನಾಚರಿಸಿ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾದರು. ಆದರೆ, ಮುಂದೆ ವಿಜಯನಗರ ಪತನವಾದ ಮೇಲೆ ಈ ಪ್ರಾಂತ್ಯವು ವಿಜಾಪುರದ ಸುಲ್ತಾನರ ವಶವಾದ್ದರಿಂದ ಈ ಗ್ರಾಮವು ಶ್ರೀಮಹಾಸಂಸ್ಥಾನದ ಕೈತಪ್ಪಿಹೋಯಿತು. ಈ ಗ್ರಾಮವು ಪರಮಪವಿತ್ರವೂ, ಮಂಗಳಕರವೂ ಮಹಿಮೋಪೇತವೂ ಆಗಿದ್ದು ಒಂದು ಕಾಲದಲ್ಲಿ ನಮ್ಮದೇ ಆಗಿದ್ದುದರಿಂದಲೇ ನಾವು ನಮ್ಮದಾಗಿದ್ದ ಈ ಗ್ರಾಮವನ್ನು ಸಂಪಾದಿಸಲೆಂದೇ ಆದವಾನಿಗೆ ಬಂದು ನವಾಬನಿಂದ ಮತ್ತೆ ದಾನವಾಗಿ ಪಡೆದೆವು ! 

ವೆಂಕಣ್ಣ ! ಹೀಗೆ ಪ್ರಹ್ಲಾದರ ಯಜ್ಞ, ಯಾಗಗಳಿಂದಲೂ, ಶ್ರೀರಾಮಲಕ್ಷ್ಮಣರ ಹಾಗೂ ಶ್ರೀಕೃಷ್ಣಾರ್ಜುನರ ಪಾದಸ್ಪರ್ಶಗಳಿಂದಲೂ ಪರಮಪಾನವಾಗಿ ಶ್ರೀವರಾಹನಂದಿನಿಯಾದ ತುಂಗಭದ್ರೆಯ ಮಂಗಳ ತರಂಗಗಳಿಂದ ಪೂತವಾಗಿ ಇದು ಮಹಾಮಂತ್ರಸಿದ್ಧಿ ಕ್ಷೇತ್ರವೆನಿಸಿದೆ. ಅಂತೆಯೇ ನಾವು ಈ ಸ್ಥಳದಲ್ಲಿಯೇ ಬೃಂದಾವನ ಪ್ರವೇಶಮಾಡಿ, ಬಹುಕಾಲ ಲೋಕಕಲ್ಯಾಣಕ್ಕಾಗಿ ತಪೋನಿರತರಾಗಬೇಕೆಂದು ನಿಶ್ಚಯಿಸಿದ್ದೇವೆ! ಇದು ಹರಿಯ ಸಂಕಲ್ಪ! ವೆಂಕಣ್ಣ, ಈಗ ತಿಳಿಯಿತೇ ಈ ಮಂತ್ರಾಲಯ ಗ್ರಾಮದ ಮಹತ್ವ? ಇದು ರಹಸ್ಯ ವಿಚಾರ, ನೀನಿದನ್ನು ರಹಸ್ಯವಾಗಿಟ್ಟಿರಬೇಕು. ನಮ್ಮ ಮುಂದಿನ ಕಾರ್ಯಗಳಲ್ಲಿ ನೀನು ಪ್ರಧಾನಪಾತ್ರವಹಿಸಿ ಶ್ರೀಹರಿವಾಯುಗಳ ವಿಶೇಷಾನುಗ್ರಹಕ್ಕೆ ಪಾತ್ರಾನಾಗು! 

ಶ್ರೀಗುರುರಾಜರ ಮಾತನ್ನಾಲಿಸಿ ವೆಂಕಣ್ಣಪಂತ ರೋಮಾಂಚಿತನಾದನು. ಭಕ್ತತಿಶಯದಿಂದ ಅವನ ಕಣ್ಣುಗಳಿಂದ ಆನಂದಾಶ್ರು ಹರಿಯಿತು. ಗುರುರಾಜರು ಬೃಂದಾವನ ಪ್ರವೇಶಮಾಡುವರೆಂದರಿತು ಅವನಿಗೆ ಅತೀವ ದುಃಖವಾಯಿತು. ಏನು ಹೇಳಲೂ ತೋಚದೆ ವಿಷಣ್ಣವದನನಾಗಿ ನಿಂತ ವೆಂಕಣ್ಣಪಂತನನ್ನು ಕಂಡು, ನಸುನಗುತ್ತಾ ಶ್ರೀರಾಯರು “ವೆಂಕಣ್ಣ, ಕಳವಳಪಡಬೇಡ, ನಿನ್ನ ಮನದ ದುಗುಡವನ್ನು ನಾವು ಬಲ್ಲೆವು. ಇದು ನಮ್ಮ ಇಚ್ಛೆ ಮಾತ್ರವಲ್ಲಪ್ಪಾ, ಹೀಗಾಗಬೇಕೆಂಬುದು ವಿಧಿ ನಿಯಮ, ಶ್ರೀಹರಿಯಸಂಕಲ್ಪ, ಶ್ರೀವಾಯುದೇವರ ಆದೇಶ! ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ನಾವು ಬೃಂದಾವನ ಪ್ರವೇಶಮಾಡುತ್ತೇವೆಂದಾಕ್ಷಣ ನೀನು ವಿಪರೀತ ಕಲ್ಪನೆ ಮಾಡಿಕೊಂಡಿರುವಂತಿದೆ! ನಾವು ದೇಹತ್ಯಾಗ ಮಾಡುವುದಿಲ್ಲವಪ್ಪಾ, ಸಶರೀರರಾಗಿಯೇ ಬೃಂದಾವನ ಪ್ರವೇಶಮಾಡಿ ಏಳನೂರು ವರ್ಷಗಳ ಕಾಲ ಬೃಂದಾವನಾಂತರ್ಗತರಾಗಿದ್ದು ಜಗತ್ಕಲ್ಯಾಣ ಮಾಡಬೇಕಾಗಿದೆ! ಈ ಗ್ರಾಮವು ಶ್ರೀ ಮಂತ್ರಾಲಯಕ್ಷೇತ್ರವೆಂದು ಜಗತ್ನಸಿದ್ದವಾಗಿ, ಆಪಂಡಿತಪಾಮರರು, ವಿವಿಧ ದೈಹಿಕ-ಮಾನಸಿಕ ರೋಗಾರ್ತರು, ಸಂತಾನ, ಸಂಪತ್ತು, ವಿದ್ಯೆ, ವಿಜ್ಞಾನ, ಆರೋಗ್ಯ, ಆಯುಷ್ಯ, ಸನ್ಮಂಗಳಾದಿ ವಿವಿಧ ಮನೋರಥಗಳನ್ನು ಬಯಸುವ ಕೋಟ್ಯಂತರ ಭಕ್ತಜನರ ಯಾತ್ರಾಸ್ಥಳವಾಗಿ ಲೋಕವಿಖ್ಯಾತವಾಗುವುದು. ಅದು ಹಾಗಾಗಬೇಕೆಂಬುದೂ.

ಶ್ರೀಹರಿವಾಯುಗಳ ಚಿತ್ತ ! ಅದಕ್ಕಾಗಿ ಚಿಂತಿಸಬಾರದು” ಎಂದು ಹೇಳಿ ವೆಂಕಣ್ಣ ಪಂತನನ್ನು ಸಾಂತ್ವನಗೊಳಿಸಿ ಅವನೊಡನೆ ಬಿಡಾರಕ್ಕೆ ದಯಮಾಡಿಸಿದರು.