ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೧೭, ಮಂತ್ರಾಲಯ ಗ್ರಾಮಸಂಪಾದನೆ
ವೆಂಕಣ್ಣ ಪಂತರೊಡನೆ ಅರಮನೆಗೆ ತೆರಳಿದ ನವಾಬನು ತಾನು ಗುರುಗಳನ್ನು ಪರೀಕ್ಷಿಸಲು ಮಾಡಿದ ಪ್ರಯತ್ನವನ್ನು ವಿವರವಾಗಿ ವೆಂಕಣ್ಣಪಂತನಿಗೆ ತಿಳಿಸಿ “ದಿವಾನ್ಜೀ, ಗುರುಗಳು ದೊಡ್ಡ ಜ್ಞಾನಿಗಳು, ಮಹಾತ್ಮರು, ನಾನು ಅವರನ್ನು ಪರೀಕ್ಷಿಸಿ ಅಪರಾಧ ಮಾಡಿದೆ. ಆದರೂ ಆ ಮಹನೀಯರು ನನ್ನನ್ನು ಗೌರವಿಸಿ ಸಂತೋಷದಿಂದಲೇ ಆಶೀರ್ವದಿಸಿದರು. ನಾಳೆ ಅರಮನೆಯಲ್ಲಿ ಗುರುಗಳಿಗೆ ವೈಭವದಿಂದ ಸತ್ಕಾರ ನೆರವೇರಿಸಿ ಅವರ ಅನುಗ್ರಹ ಪಡೆಯಲಾರಿಸಿದ್ದೇನೆ. ಈ ಕಾವ್ಯವನ್ನು ನೀವೇ ಖುದ್ದು ನಿಂತು ಯಶಸ್ವಿಗೊಳಿಸಬೇಕು” ಎಂದು ಹೇಳಿದನು. ಅದರಿಂದ ವೆಂಕಣ್ಣಪಂತನಿಗೆ ಅಪಾರ ಸಂತೋಷವಾಯಿತು. ಅವನು ನವಾಬನ ಕೋರಿಕೆಯಂತೆ ಮರುದಿನ ಗುರುಗಳಿಗೆ ಸಂಭ್ರಮದ ಆತಿಥ್ಯನೀಡಲು ಸಮಸ್ತ ವ್ಯವಸ್ಥೆಯನ್ನು ಆದರದಿಂದ ಮಾಡತೊಡಗಿದನು.
ವೆಂಕಣ್ಣ ಪಂತನನ್ನು ಕಳುಹಿಸಿದ ಮೇಲೆ ಮತ್ತೆ ಚಿಂತೆಯು ನವಾಬನನ್ನಾಕ್ರಮಿಸಿತು. ಶ್ರೀಯವರಿಂದ ಫಲಮಂತ್ರಾಕ್ಷತೆ ಪಡೆದು ಬಂದಲಾಗಾಯಿತು ಅವನ ಮನದ ನೆಮ್ಮದಿಯೇ ಕದಡಿಹೋಗಿತ್ತು. ಆವುದೋ ಅವಕ್ತಭಯ ಅವನ ಮನವನ್ನಾಕ್ರಮಿಸಿತು. ತಾನು ಮಾಡಿದ ತಪ್ಪಿಗಾಗಿ ನವಾಬ ಬಹುವಾಗಿ ಪರಿತಪಿಸಿದ. ಗುರುಗಳು ತಪಸ್ವಿಗಳು, ಮಂತ್ರಸಿದ್ದರು, ಮಹಾತ್ಮರು ಎಂಬುದು ಅವನಿಗೆ ಪ್ರತ್ಯಕ್ಷವಾಗಿ ಮನವರಿಕೆಯಾಗಿತ್ತು. ಇಂಥಾ ಜ್ಞಾನಿಗಳನ್ನು ಪರೀಕ್ಷಿಸಿದೆನಲ್ಲಾ ಎಂಬ ಚಿಂತೆ ಅವನನ್ನು ಬಾಧಿಸಹತ್ತಿತ್ತು. ಹೇಗಾದರೂ ಅವರನ್ನು ಒಲಿಸಿಕೊಳ್ಳಬೇಕು. ಅವರು ಸುಪ್ರಸನ್ನರಾಗುವಂತೆ ಸಂತೋಷಪಡಿಸಿ ಅವರ ಪೂರ್ಣಾನುಗ್ರಹಕ್ಕೆ ಪಾತ್ರನಾಗಬೇಕೆಂದು ಕಾತರಿಸಿದನು. ಏನನ್ನೋ ಯೋಚಿಸಿ ನವಾಬನು ಪುನಃ ದಿವಾನ್ ವೆಂಕಣ್ಣಪಂತನನ್ನು ಕರೆಯಿಸಿಕೊಂಡು “ದಿವಾನ್ಜೀ, ನಾನು ಗುರುಮಹಾರಾಜರಿಗೆ ಒಂದು ಗ್ರಾಮವನ್ನು ಗುರುಕಾಣಿಕೆಯಾಗಿ ಕೊಡಬೇಕೆಂದಿದ್ದೇನೆ. ಮಹಾತ್ಮರಾದ ಅವರು ನನಗೂ ಗುರುಗಳೇ ! ಆದ್ದರಿಂದ ನೀವು ಹೇಗಾದರೂ ಗುರುಗಳ ಮನಸ್ಸು ಒಲಿಸಿಕೊಂಡು ಗ್ರಾಮದಾನವನ್ನು ತೆಗೆದುಕೊಳ್ಳುವಂತೆ ಒಪ್ಪಿಸಿ, ನನ್ನಲ್ಲಿ ಕೃಪೆ ಬೀರುವಂತೆ ಮಾಡಬೇಕು. ಹಾಗಾದರೆ ಮಾತ್ರ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾದಂತಾಗಿ ನನಗೆ ನೆಮ್ಮದಿ-ಸಂತೋಷಗಳುಂಟಾಗುವುದು” ಎಂದು ಕಳಕಳಿಯಿಂದ ಹೇಳಿದನು.
ನವಾಬರ ಕೋರಿಕೆಯಿಂದ ಸಂತೋಷ-ಸಮಾಧಾನ ತಾಳಿದ ವೆಂಕಣ್ಣ ಪಂತನು ಗುರುಸನ್ನಿಧಿಗೆ ಬಂದು ನವಾಬನ ಇಚ್ಛೆಯನ್ನು ನಿವೇದಿಸಿದನು. ರಾಯರು ನಸುನಕ್ಕು “ವೆಂಕಣ್ಣ, ನಿಮ್ಮ ನವಾಬನು ನಿಜವಾಗಿ ದೈವಭಕ್ತನಾಗಿದ್ದಾನೆ. ಜ್ಞಾನಿಗಳು-ಸಾಧುಸಂತರಲ್ಲಿ ಅವನಿಗೆ ಅಪಾರ ಗೌರವವಿದೆ. ಇಲ್ಲದಿದ್ದರೆ ಅವನಿಗಿಂತಹ ಸದ್ಭುದ್ಧಿಯುಂಟಾಗುತ್ತಿರಲಿಲ್ಲ. ಶ್ರೀಮೂಲರಾಮ್ ಅವನ ಸೇವೆಯನ್ನು ಸ್ವೀಕರಿಸಲು ನಮಗೆ ಪ್ರೇರಿಸುತ್ತಲೂ ಇರಲಿಲ್ಲ! ಅವನಲ್ಲಿ ನಮಗೂ ವಾತ್ಸಲ್ಯವುಂಟಾಗಿದೆ. ಅವನು ಕೊಡುವ ಗ್ರಾಮದಾನವನ್ನು ಆನಂದದಿಂದ ತೆಗೆದುಕೊಳ್ಳುತ್ತೇವೆ. ಇದು ಶ್ರೀಹರಿವಾಯುಗಳ ಸಂಕಲ್ಪ. ಒಂದು ವಿಧದಿಂದ ನಾವಿಲ್ಲಿಗೆ ಬಂದ ಕಾರಣವೂ ಅದೇ ಆಗಿದೆಯೆಂದು ತಿಳಿ!” ಎಂದರು. ವೆಂಕಣ್ಣಪಂತನು ತಾನು ಆರಿಸಿದ ನಾಲ್ಕಾರು ಗ್ರಾಮಗಳ ಹೆಸರುಗಳನ್ನು ಹೇಳಿ ಅವೆಲ್ಲವೂ ಸಂಪದ್ಭರಿತವಾದ ಉತ್ತಮಗ್ರಾಮಗಳೆಂದೂ, ಅವುಗಳಲ್ಲಿ ಬೇಕಾದ ಗ್ರಾಮವನ್ನು ಆರಿಸಿಕೊಳ್ಳಬಹುದೆಂದೂ ವಿಜ್ಞಾಪಿಸಿದನು.
ರಾಯರು : ವೆಂಕಣ್ಣ, ನೀನು ಹೇಳಿದ ಯಾವ ಗ್ರಾಮದಿಂದಲೂ ನಮಗೆ ಪ್ರಯೋಜನವಿಲ್ಲ. ನಮಗೊಂದು ಗ್ರಾಮ ಇಷ್ಟವಾಗಿದೆ. ಅದನ್ನು ನವಾಬನಿಂದ ಕೊಡಿಸು. ಶ್ರೀಮೂಲರಾಮನು ಪ್ರೀತನಾಗುವನು.
ವೆಂಕಣ್ಣ : ಗುರುವರ್ಯ ! ತಮಗಾದ ಗ್ರಾಮ ಬೇಕು ? ಅಪ್ಪಣೆಯಾಗಲಿ,
ರಾಯರು : ಇಲ್ಲಿಗೆ ಸ್ವಲ್ಪದೂರದಲ್ಲಿ ತುಂಗಭದ್ರಾನದಿಯ ತೀರದಲ್ಲಿರುವ ಮಂತ್ರಾಲಯ ಎಂಬ ಗ್ರಾಮ ನಮಗಿಷ್ಟವಾಗಿದೆ.
ವೆಂಕಣ್ಣ : ಗುರುದೇವ, ಮಂತ್ರಾಲಯ ಒಂದು ಬೇಚವಾಕ್ ಗ್ರಾಮ. ಅದರಿಂದ ಮಹಾಸಂಸ್ಥಾನಕ್ಕೆ ಪ್ರಯೋಜನ ವಾಗುವುದಿಲ್ಲ. ನವಾಬನು ಈಗ ತಮಗೆ ಏನಾಗಬೇಕಾದರೂ ಸಮರ್ಪಿಸಲು ಸಿದ್ಧನಾಗಿದ್ದಾನೆ! ತಾವು ಯಾವುದಾದರೊಂದು ದೊಡ್ಡ ಜಹಗೀರಿಯನ್ನು ಕೇಳೋಣವಾಗಲಿ.
ರಾಯರು : (ನಕ್ಕು) ವೆಂಕಣ್ಣ, ದೊಡ್ಡ ಜಹಗೀರಿಯಿಂದ ನಮಗೇನೂ ಪ್ರಯೋಜನವಿಲ್ಲ ! ನಮಗೆ ಮಂತ್ರಾಲಯವೇ ಬೇಕು ! ಅದನ್ನು ಸಂಪಾದಿಸಲೆಂದೇ ನಾವಿಲ್ಲಿಗೆ ಬಂದಿದ್ದೇವೆ. ಹಿಂದೆ ಕಂದನಾತಿಯಲ್ಲಿನಿನಗೆ ನಾವು ಹೇಳಿದ್ದು ಮರೆತೆಯಾ ? ಶ್ರೀಮೂಲರಾಮ ನಿನ್ನಿಂದ ಮುಂದೆ ದೊಡ್ಡ ಸೇವೆಯನ್ನು ಸ್ವೀಕರಿಸಲಿದ್ದಾನೆ - ಎಂದು ನಾವು ಹೇಳಿರಲಿಲ್ಲವೇ ? ಈ ಮಂತ್ರಾಲಯವನ್ನೇ ಮೂಲರಾಮನು ನಿನ್ನ ದ್ವಾರಾ ಪಡೆಯಲಿರುವ ಸೇವೆಯೆಂದು ತಿಳಿ. ಆ ಗ್ರಾಮವನ್ನೇ ನಾವೇಕೆ ಬಯಸುತ್ತಿದ್ದೇವೆ ಎಂಬುದನ್ನು ನಿನಗೆ ಮುಂದೆ ತಿಳಿಸುತ್ತೇವೆ. ಮಂತ್ರಾಲಯ ಗ್ರಾಮವನ್ನು ನಮಗೆ ನವಾಬನಿಂದ ಕೊಡಿಸಿ ಸಾಕು.
ರಾಯರ ಮಾತನ್ನಾಲಿಸಿ ವಿಸ್ಮಿತನಾದ ವೆಂಕಣ್ಣನು ಗುರುಗಳಿಗೆ ಪ್ರತಿಹೇಳಲು ಧೈರ್ಯವಿಲ್ಲದೆ ಗುರುಚಿತ್ತ” ಎಂದು ವಿಜ್ಞಾಪಿಸಿ, ನವಾಬರ ಅರಮನೆಗೆ ತೆರಳಿ ಗುರುಗಳ ಅಭಿಪ್ರಾಯವನ್ನು ತಿಳಿಸಿದನು. ನವಾಬನು ಮಂತ್ರಾಲಯ ಗ್ರಾಮವನ್ನು ಈಗಾಗಲೇ ತನ್ನ ಗುರುಗಳಾಗಿದ್ದ ಖಾಜೀಸಾಹೇಬರಿಗೆ ಕೊಟ್ಟುಬಿಟ್ಟಿದ್ದನು! ಈಗ ಶ್ರೀಗುರುರಾಜರೂ ಆ ಗ್ರಾಮವನ್ನೇ ಬಯಸುತ್ತಿದ್ದಾರೆ. ಈಗೇನು ಮಾಡುವುದೆಂದು ತೋರದೆ ಉಭಯಸಂಕಟದಲ್ಲಿ ಶಿಲುಕಿದ ನವಾಬನು ವೆಂಕಣ್ಣ ಪಂತನ ಸಲಹೆಯನ್ನು ಕೇಳಿದನು. ವೆಂಕಣ್ಣ ಪಂತನು “ಹುಜೂರ್, ಖಾಜೀಸಾಹೇಬರಿಗೆ ಮಂತ್ರಾಲಯ ಗ್ರಾಮಕ್ಕೆ ಬದಲಾಗಿ ಬೇರೆ ಎರಡು ಗ್ರಾಮಗಳನ್ನು ಕೊಟ್ಟು ಮಂತ್ರಾಲಯವನ್ನು ಗುರುದೇವರಿಗೆ ಸಮರ್ಪಿಸಬಹುದು” ಎಂದು ತಿಳಿಸಲು ಸಂತಸದಿಂದ ನವಾಬನು ಖಾಜೀಸಾಹೇಬರನ್ನು ಕರೆಯಿಸಿಕೊಂಡು ಎಲ್ಲ ವಿಚಾರಗಳನ್ನೂ ಅವರಿಗೆ ನಿವೇದಿಸಿದನು. ಖಾಜೀಸಾಹೇಬರು ಒಂದು ಗ್ರಾಮಕ್ಕೆ ಬದಲಾಗಿ ಎರಡು ಗ್ರಾಮಗಳು ದೊರಕುವುದೆಂದು ಆನಂದದಿಂದ ಅವರು ಮಂತ್ರಾಲಯವನ್ನು ಗುರುರಾಜರಿಗೆ ಒಪ್ಪಿಸಿಕೊಡಲು ಸಮ್ಮತಿಸಿದರು. ಸಮಾಧಾನದ ನಿಟ್ಟಿಸಿರುಬಿಟ್ಟ ನವಾಬರು ಖಾಜೀಸಾಹೇಬರಿಗೆ “ವಗರೂರು, ನಿಮ್ಮಾಪುರ ಎಂಬ ಎರಡು ಗ್ರಾಮಗಳನ್ನು ದಾನವಾಗಿ ಕೊಟ್ಟು, ಅದಕ್ಕೆ ತಕ್ಕಂತೆ ಸನದು-ಕಾಗದ ಪತ್ರಗಳನ್ನು ಬರೆಯಿಸಿ ಶೀಲುನಿಶಿ ಮಾಡಿಕೊಟ್ಟು ತನ್ನ ಗುರುಗಳಾದ ಖಾಜೀಸಾಹೇಬರನ್ನು ಗೌರವಿಸಿ ಕಳುಹಿಸಿದನು.
ಮರುದಿನ ಗುರುರಾಜರಿಗೆ ಅರಮನೆಯಲ್ಲಿ ವಿಜೃಂಭಣೆಯಿಂದ ಸತ್ಕಾರ ಮಾಡಿದ ನವಾಬನು ಗುರುಗಳಿಗೆ ವೆಂಕಣ್ಣಪಂತನಿಂದ ಪಾದಪೂಜೆ ಮಾಡಿಸಿ, ಆನಂತರ ಗುರುರಾಜರಿಗೆ ಮಂತ್ರಾಲಯ ಗ್ರಾಮವನ್ನು ದಾನಮಾಡಿ, ಧನಕನಕಾಭರಣವಸ್ತ್ರಗಳನ್ನು ಕಾಣಿಕೆಯಾಗಿ ಸಮರ್ಪಿಸಿ ನಮಸ್ಕರಿಸಿದನು. ಮತ್ತು ಶ್ರೀಮಠದ ಹೆಸರಿಗೆ ಮಂತ್ರಾಲಯ ಗ್ರಾಮವು ಶಾಶ್ವತವಾಗಿ ನಡೆದುಬರುವಂತೆ ಸನದು, ಕಾಗದ ಪತ್ರಗಳನ್ನು ಬರೆಯಿಸಿ, ರಾಜಮುದ್ರೆ ಹಾಕಿ, ಶ್ರೀಗುರುರಾಜರಿಗೆ ಮಂತ್ರಾಲಯ ಗ್ರಾಮವನ್ನು ಖುದ್ದಾಗಿ ಹೋಗಿ ಸ್ವಾಧೀನಕ್ಕೆ ಒಪ್ಪಿಸಿಕೊಡಬೇಕೆಂದು ತನ್ನ ಪ್ರತಿನಿಧಿ ದಿವಾನ್ ವೆಂಕಣ್ಣಪಂತನಿಗೆ ಹುಕುಂಮಾಡಿ ಕಳಿಸಿದನು. ನವಾಬನ ಭಕ್ತಾದರ-ಸೇವಾ ಮನೋಭಾವಗಳಿಂದ ಅತ್ಯಂತ ಪ್ರಸನ್ನರಾದ ಶ್ರೀರಾಯರು ನವಾಬನಿಗೂ, ಅವನ ಪರಿವಾರಕ್ಕೂ ಫಲಮಂತ್ರಾಕ್ಷತೆಯನ್ನು ಕರುಣಿಸಿ “ನವಾಬರೇ, ನಿಮ್ಮ ಸೇವೆಯಿಂದ ನಮ್ಮ ಮೂಲರಾಮದೇವರು ಪ್ರೀತರಾಗಿರುತ್ತಾರೆ. ನಿಮಗೆ ಉತ್ತರೋತ್ತರ ಶ್ರೇಯಸ್ಸು, ಸನ್ಮಂಗಳಗಳಾಗುವುವು” ಎಂದು ಹೇಳಿ ಆಶೀರ್ವದಿಸಿ ಶ್ರೀಮಠಕ್ಕೆ ದಯಮಾಡಿಸಿದರು.