|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೧೬. ನಿಷಿದ್ಧ ವಸ್ತುಗಳು ಫಲ-ಪುಷ್ಪಗಳಾದವು !

ಸಿದ್ದೀಮಸೂದ್‌ ಖಾನನು ರಾಯರ ಅನುಗ್ರಹಕ್ಕೆ ಪಾತ್ರನಾಗುವಂತೆ ಮಾಡಬೇಕೆಂದು ವೆಂಕಣ್ಣಪಂತನ ಅಭಿಲಾಷೆಯಾಗಿತ್ತು. ಅಂತೆಯೇ ರಾಯರು ಆದವಾನಿಗೆ ಚಿತೈಸಿದ ನಾಲೈದು ದಿನಗಳಾದ ಮೇಲೆ ಒಂದು ದಿನ ನವಾಬನನ್ನು ಭೇಟಿಮಾಡಿದನು. ಮಸೂದ್ ಖಾನನು ಅವನನ್ನು “ಆಯಿಯೇ ದಿವಾನ್‌ಜೀ, ಗುರುಮಹಾರಾಜರಿಗೆ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿರುವಿರಾ? ಎಂದು ಪ್ರಶ್ನಿಸಿದನು. ವೆಂಕಣ್ಣಪಂತನು ದರ್ಬಾರಿನ ನಿಯಮದಂತೆ ಟೊಂಕಬಗ್ಗಿಸಿ ವಂದಿಸಿ ಜೀಹುಜೂರ್, ಖಾವಂದರ ಹುಕುಂ ಪ್ರಕಾರವಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ. ಗುರುಮಹಾರಾಜರು ತುಂಬಾ ಸಂತೋಷಪಟ್ಟಿದ್ದಾರೆ. ಖಾವಂದರು ನಮ್ಮ ಗುರುಗಳದರ್ಶನ ಮಾಡಿ ಅವರ ಆಶೀರ್ವಾದ ಪಡೆಯಬೇಕೆಂದು ನನ್ನ ಆಶೆ” ಎಂದು ವಿಜ್ಞಾಪಿಸಿದನು. 

ಸಿದ್ದೀಮಸೂದ್ ಖಾನನಿಗೆ ಈ ಹಿಂದೆಯೇ ವಿಜಾಪುರದ ಮಹಾಸೇನಾನಿ ರಣದುಲ್ಲಾಖಾನ್‌ನಿಂದ ಶ್ರೀರಾಯರ ಮಹಿಮೆ, ವಿಜಾಪುರದ ಸುಲ್ತಾನರಾದ ಆಲಿ ಆದಿಲ್‌ ಷಹರು ಗುರುಗಳಿಗೆ ಅಸಾಧಾರಣರೀತಿಯಿಂದ ಗೌರವಮಾಡಿ “ಜಗದ್ಗುರು” ಎಂಬ ಪ್ರಶಸ್ತಿ, ಶ್ವೇತಛತ್ರ, ಹಸಿರುನಿಶಾನಿ, ಚೌರಿ, ಮುಂತಾದ ಶ್ರೇಷ್ಠ ಬಿರುದಾವಳಿಗಳನ್ನು ಸಮರ್ಪಿಸಿ ಸನ್ಮಾನಿಸಿದ ವಿಚಾರ, ಗುರುಗಳು ವಿಜಾಪುರ ರಾಜ್ಯದ ಜನರನ್ನು ಕ್ಷಾಮದ ದುರಂತದಿಂದ ಕಾಪಾಡಿದ ವಿಷಯಗಳೆಲ್ಲವೂ ತಿಳಿದಿತ್ತು. ಅದರಿಂದ ಪ್ರಭಾವಿತನಾಗಿದ್ದ. ತನಗೆ ಪ್ರಭುವಾದ ಆದಿಲ್ ಷಹನೇ ಭಕ್ತಿಶ್ರದ್ಧೆಗಳಿಂದ ಗೌರವಿಸಿದ ಗುರುಗಳನ್ನು ತಾನೂ ಗೌರವಿಸಬೇಕು. ಅವರ ದರ್ಶನಮಾಡಿ, ಅನುಗ್ರಹ ಸಂಪಾದಿಸಬೇಕೆಂಬ ಮನೀಷೆಯು ನವಾಬನಿಗೂ ಇದ್ದಿತು. ಮೇಲಾಗಿ ಗುರುಗಳು ನನ್ನ ಪ್ರೀತಿಯ ದಿವಾನ್ ವೆಂಕಣ್ಣ ಪಂತನ ಕುಲಗುರುಗಳಾಗಿದ್ದರಿಂದ ಅವರ ಕಾರುಣ್ಯ ತನಗೂ ದೊರಕಬೇಕೆಂದು ಆಶಿಸಿದ್ದನು, ಇದರ ಜೊತೆಗೆ ಅವರ ಮಹಿಮೆಯನ್ನು ತಾನೂ ಪರೀಕ್ಷಿಸಬೇಕೆಂಬ ಹಂಬಲವೂ ಅವನಲ್ಲುಂಟಾಯಿತು. ಅಂತೆಯೇ ನವಾಬನು “ದಿವಾನ್‌ ಜೀ, ನನ್ನ ಮನಸ್ಸಿನಲ್ಲಿರುವುದನ್ನೇ ನೀವೂ ಹೇಳಿರುವಿರಿ. ಬಹುತ್‌ ಖೂಬ್, ದಿವಾನ್‌ ಜೀ, ಅಚ್ಚಾ, ನಾವು ನಾಳೆ ಸಂಜೆ ಗುರುದರ್ಶನಕ್ಕೆ ಬರುತ್ತೇವೆ. ಆಗಬಹುದೇ ?” ಎಂದನು. ವೆಂಕಣ್ಣಪಂತನಿಗೆ ಸಂತೋಷವಾಯಿತು. “ಆಗಬಹುದು ಹುಜೂರ್, ಗುರುಗಳ ಭೇಟಿಗೆ ವ್ಯವಸ್ಥೆಮಾಡುತ್ತೇನೆ” ಎಂದು ವಿಜ್ಞಾಪಿಸಿ ಮನೆಗೆ ಬಂದು ರಾಯರಲ್ಲಿ ವಿಷಯ ನಿವೇದಿಸಿದನು, ಶ್ರೀರಾಯರು ಮಂದಹಾಸಬೀರಿ “ಬಹಳ ಸಂತೋಷ” ಎಂದಪ್ಪಣೆಕೊಡಿಸಿದರು. ನವಾಬನ ಸ್ವಾಗತಕ್ಕೆ ಮಹಾಸಂಸ್ಥಾನ ಸಂಪ್ರದಾಯದಂತೆ ಸಕಲ ಸಿದ್ಧತೆಗಳಾದವು. 

ಸೂರ್ಯಾಸ್ತಸಮಯಕ್ಕೆ ಸ್ವಲ್ಪ ವೇಳೆಯಿರುವಾಗ ಸಿದ್ಧಿಮಸೂದ್‌ ಖಾನನು ದಿವಾನ್ ವೆಂಕಣ್ಣಪಂತನೊಡನೆ ಮಿತಪರಿವಾರನಾಗಿ ಜೋಡುಕುದುರೆ ರಥದಲ್ಲಿ ಶ್ರೀಯವರ ದರ್ಶನಕ್ಕೆ ಬಂದನು. ಬಾಗಿಲುಬಳಿ ಪಂಡಿತಮಂಡಲಿ, ಪೂರ್ಣಕುಂಭ, ವೇದಘೋಷ ಮಂಗಳವಾದ್ಯಗಳೊಡನೆ ಲಕ್ಷ್ಮೀನಾರಾಯಣಾಚಾರರು ನವಾಬನನ್ನು ಗೌರವದಿಂದ ಸ್ವಾಗತಿಸಿ ಕರೆತಂದರು. ಶ್ರೀರಾಯರು ಭದ್ರಾಸನದಲ್ಲಿ ಅಲಂಕೃತರಾಗಿದ್ದರು. ವೆಂಕಣ್ಣಪಂತ ನವಾಬರನ್ನು ಶ್ರೀಯವರ ಸನ್ನಿಧಿಗೆ ಕರೆದುಕೊಂಡು ಬಂದನು ಅನಿರ್ವಚನೀಯ ತೇಜಸ್ಸು, ಭವ್ಯಾಕೃತಿಯಿಂದ ಕಂಗೊಳಿಸುವ ಗುರುವರ್ಯರನ್ನು ಕಂಡು ನವಾಬ ಚಕಿತನಾದ. ಮಂದಹಾಸಮುಕುಳಿತ ವದನಾರವಿಂದರಾದ ಆ ತೇಜೋನಿಧಿಗಳ ದರ್ಶನಮಾತ್ರದಿಂದ ನವಾಬ ಪುಳಕಿತನಾದ. ಗುರುಗಳಲ್ಲಿ ಅವನಿಗೆ ಶ್ರದ್ಧಾಭಕ್ತಿ- ಗಳುಂಟಾದವು. ಸಿದ್ದೀಮಸೂದ್ ಖಾನನು ಗುರುರಾಜರ ಭವ್ಯ ವ್ಯಕ್ತಿತ್ವದಿಂದ ಪರವಶನಾದ. 'ಇವರು ಸಾಮಾನ್ಯರಲ್ಲ! ಜಗತ್ತನ್ನೇ ಆಕರ್ಷಿಸುವ ತೇಜೋ ವಿಭೂಷಿತರಾದ ಈ ಮಹಾಮಹಿಮರಲ್ಲಿ ಜಗತ್ತನ್ನೇ ಪಾದಾಂಕಿತಗೊಳಿಸಿಕೊಳ್ಳುವ ಧೈರ್ಯ-ಸ್ಥೆರ್ಯಗಳಿವೆ! ನಾನು ಇವರನ್ನು ಪರೀಕ್ಷಿಸಲು ಸಿದ್ಧನಾಗಿ ಬಂದುದು ತಪ್ಪಾಯಿತೇನೋ!' ಎಂದು ಅವನ ಮನಸ್ಸು ಅಳುಕಿತು. ಆದರೆ ಆ ಭಾವನೆ ಅವನಲ್ಲಿ ಮೂಡುವ ವೇಳೆಗಾಗಲೇ ಕಾಲ ಮಿಂಚಿಹೋಗಿತ್ತು. 

ನವಾಬನು ಗುರುಗಳ ಮುಂದೆ ಬಾಗಿ ಮೂರುಬಾರಿ ವಂದಿಸಿ “ಗುರುಮಹಾರಾಜ್ ! ತಮ್ಮ ದರ್ಶನದಿಂದ ಕೃತಾರ್ಥನಾದೆ!” ಎಂದು ಬಿನ್ನವಿಸಿದನು. ನವಾಬರಿಗಾಗಿ ಸಿದ್ಧಪಡಿಸಿದ್ದರತ್ನಕಂಬಳಿಯ ಮೇಲೆ, ಶ್ರೀಯವರಿಗೆ ಸಮೀಪದಲ್ಲಿ ನವಾಬ ಕುಳಿತ. ರಾಯರು ನಸುನಗುತ್ತಾ ನವಾಬರ ಕುಶಲಪ್ರಶ್ನೆ ಮಾಡಿದ ಮೇಲೆ ಅವನ ಅಪ್ಪಣೆಯಂತೆ ಅವನ ಖಾಸಾಸೇವಕನು ಕಿಂಕಾಪಿನ ಜರೀವಸ್ತ್ರದಿಂದ ಮುಚ್ಚಿದ್ದ ಒಂದು ರಜತ ತಾಂಬಾಣವನ್ನು ಗುರುಗಳ ಮುಂದಿಟ್ಟ. ಅದನ್ನು ಕಂಡು ರಾಯರ ಮುಖದಲ್ಲಿ ವಿಲಕ್ಷಣ ಮಂದಹಾಸ ಮಿನುಗಿತು! 

ಆಗ ಸಿದ್ದೀಮಸೂದ್‌ ಖಾನನು “ಗುರುಮಹಾರಾಜ್ ! ತಮ್ಮ ಮಹಿಮೆಯನ್ನು ನಮ್ಮ ದಿವಾನ್‌ ಜೀಯವರಿಂದ ತಿಳಿದು ಬಹಳ ಖುಷ್ ಆಗಿದ್ದೇವೆ. ದೊಡ್ಡವರಾದ ನಿಮ್ಮ ದೇವರ ಸೇವೆಗೆಂದು ಕಾಣಿಕೆಯಾಗಿ ಇದನ್ನು ತಂದಿದ್ದೇವೆ. ಗುರೂಜಿಯವರು ಸ್ವೀಕರಿಸಬೇಕು” ಎಂದು ತಟ್ಟೆಯತ್ತ ಕೈತೋರಿದ. 

ಭೂತಭವಿಷದ್ದರ್ತಮಾನ ವಿಷಯಗಳು ಕರತಲಾಮಲಕವಾಗಿದ್ದಗುರು ರಾಜರಿಗೆ ನವಾಬನ ಹಾರ್ದ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿತ್ತು! ವಿಧರ್ಮೀಯನೂ, ವಿಮತೀಯನೂ ಆದ ನವಾಬನಿಗೆ ಭಗವಂತನ ಅಚಿಂತ್ಯಾದ್ಭುತಶಕ್ತಿ ವೈದಿಕಸನಾತನ ಧರ್ಮದ, ಭಗವದ್ಭಕ್ತರಾದ, ಹಿಂದೂಮತದ ಸಾಧುಸಂತರ ಮಹಿಮೆಗಳನ್ನು ತೋರಿಕೊಡಲು ಇದೀಗ ಸರಿಯಾದ ಸಂದರ್ಭ ಒದಗಿತೆಂದು ಗುರುಗಳು ಯೋಚಿಸಿ ಮುಗುಳುನಗೆ ಬೀರಿದರು. ಪಾಪ, ವೆಂಕಣ್ಣಪಂತನಿಗೆ ಇದಾವುದೂ ತಿಳಿಯದು. ಗುರುಸಾರ್ವಭೌಮರನ್ನು ಗೌರವಿಸಲು ನವಾಬನು ವಿಶೇಷ ಧನಕನಕಾಭರಣಗಳನ್ನು ತಂದಿರುವನೆಂದೇ ಅವನು ಭಾವಿಸಿದ್ದನು. ಆದರೆ ನವಾಬನು ತಂದಿರುವ ವಸ್ತುಗಳೇ ಬೇರೆಯಾಗಿತ್ತು! ಅವನು ರಾಯರ ಸತ್ವಪರೀಕ್ಷೆಮಾಡಲು ಹಿಂದೂಧರ್ಮದಲ್ಲಿ ನಿಷಿದ್ಧವಾದ ಮದ್ಯ-ಮಾಂಸಾದಿಗಳನ್ನು ತಟ್ಟೆಯಲ್ಲಿಟ್ಟು ಕಿಂಕಾಪಿನ ವಸ್ತ್ರ ಹೊದ್ದಿಸಿ ಖಾಸಾಸೇವಕನೊಡನೆ ತೆಗೆಸಿಕೊಂಡು ಬಂದಿದ್ದನು! 

ರಾಯರು “ಸಂತೋಷ ನವಾಬರೇ! ನಮ್ಮ ದೇವರು “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ ! ತದಹಂ ಭಕ್ಷುಪಹೃತಂ ಅಶ್ಚಾಮಿ ಪ್ರಯತಾತ್ಮನಾಮ್ '- ಯಾರು ಭಕ್ತಿಯಿಂದ ನನಗೆ ಫಲ-ಪುಷ್ಪ, ಹಾಲು, ನೀರುಗಳನ್ನು ಸಮರ್ಪಿಸಿದರೂ, ಅವರಿತುದನ್ನು ನಾನು ಸ್ವೀಕರಿಸುತ್ತೇನೆ! ಎಂದು ಅಪ್ಪಣೆ ಕೊಡಿಸಿದ್ದಾನೆ. ನೀವು ತಂದಿರುವುದನ್ನು ನಮ್ಮ ಶ್ರೀಹರಿಯು ಯಾವ ರೀತಿ ಸ್ವೀಕರಿಸಬೇಕೆಂದು ಇಚ್ಛಿಸುವನೋ, ಅದರಂತೆಯೇ ಸ್ವೀಕರಿಸುವನು !” ಎಂದು ಹೇಳಿ ಕಮಂಡಲುವನ್ನು ತರುವಂತೆ ದ್ವಾರಪಾಲಕನಿಗೆ ಆಜ್ಞಾಪಿಸಿದರು. 

ದ್ವಾರಪಾಲಕನು ಕಮಂಡಲವನ್ನು ತಂದು ಗುರುಗಳ ಪಕ್ಕದಲ್ಲಿದ್ದ ಪೀಠದ ಮೇಲಿಟ್ಟು ಹಿಂದೆ ಸರಿದನು. ಶ್ರೀಪಾದಂಗಳವರು ಧ್ಯಾನಿಸಿ ಕಮಂಡಲೋದಕವನ್ನು ನವಾಬನು ತಂದಿದ್ದ ತಾಂಬಾಣದಮೇಲೆ ಪ್ರೋಕ್ಷಿಸಿ ವಸ್ತ್ರವನ್ನು ತೆಗೆಯುವಂತೆ ದ್ವಾರಪಾಲಕನಿಗೆ ಸೂಚಿಸಿದರು. ದ್ವಾರಪಾಲಕನು ತಟ್ಟೆಯ ಮೇಲಿದ್ದ ವಸ್ತ್ರವನ್ನು ತೆಗೆದನು. ಸಿದೀಮಸೂದ್ ಖಾನನು ಅಳುಕುತ್ತಲೇ ಒಮ್ಮೆ ತಟ್ಟೆಯತ್ತ ದೃಷ್ಟಿಹರಿಸಿದ, ಅಲ್ಲಿ ಅವನು ಕಂಡ ದೃಶ್ಯ ಅವನನ್ನು ದಂಗುಗೊಳಿಸಿತು. ಪರಮಾಶ್ಚರ ! ಗುರುಗಳನ್ನು ಪರೀಕ್ಷಿಸಲು ತಾನು ತಂದ ಮದ್ಯ-ಮಾಂಸಾದಿ ನಿಷಿದ್ಧಪದಾರ್ಥಗಳು 15 ಹಾಲು, ಹಣ್ಣು, ಹೂವುಗಳಾಗಿ ಮಾರ್ಪಟ್ಟಿವೆ! ಅದ್ಭುತ ಇದೆಂತಹ ಮಾಯೆ ಎಂದವನು ಹೌಹಾರಿದ! ಭಯದಿಂದ ಅವನು ತತ್ತರಿಸಿದ, ಗುರುಗಳು ಮಹಾತ್ಮರೆಂದು ತಿಳಿದಿದ್ದರೂ ತಾನೂ ಅವರನ್ನು ಪರೀಕ್ಷಿಸಲು ಹೋಗಿ ದೊಡ್ಡವರಿಗೆ ಅಪಚಾರವೆಸಗಿದೆನಲ್ಲ ಎಂದು ನವಾಬ ಖತಿಗೊಂಡ.

ಶ್ರೀಗಳವರು “ನವಾಬರೇ ! ನಿಮಗೀಗ ತೃಪ್ತಿಯಾಯಿತೆ ! ನಾವು ಹೇಳಿರಲಿಲ್ಲವೆ, ನಮ್ಮ ದೇವರು ನೀವು ಅರ್ಪಿಸಿದ್ದನ್ನು ತನಗೆ ಇಷ್ಟವಾದ ರೀತಿಯಲ್ಲಿ ಸ್ವೀಕರಿಸುವನೆಂದು?” ಎಂದರು. ಗುರುಗಳ ಮಾತು ನವಾಬನಿಗೆ ಚಾಟಿಯ ಏಟಿನಂತೆ ಅಪ್ಪಳಿಸಿತು. 

ದುಃಖ, ಪಶ್ಚಾತ್ತಾಪಗಳಿಂದ ಬೆಂದುಹೋದ ನವಾಬನು ಮನದಲ್ಲಿಯೇ “ಹಾಯ್ ಹಾಯ್, ಪರವರ್ದಿಗಾರ್, ನಾನೆಂಥ ಅವಿವೇಕದ ಕಾರ್ಯ ಮಾಡಿದೆ ? ಮಹಾತ್ಮರನ್ನು ಪರೀಕ್ಷಿಸುವ ಆತುರದಲ್ಲಿ ದುಡುಕಿ ಮೂರ್ಖನಾದೆನಲ್ಲಾ ನನಗೇನು ವಿಪತ್ತು ಕಾದಿದೆಯೋ ಕಾಣೆ. ಅನಾಥನನ್ನು ದಿವಾನನ್ನಾಗಿ ಮಾಡಿದ ಮಹನೀಯರಿಗೆ, ನವಾಬನನ್ನು ಜವಾನನ್ನಾಗಿ ಮಾಡುವುದೊಂದು ಮಹತ್ಕಾರವೇ ? ಅ ಮಹನೀಯರು ನೊಂದು ಶಪಿಸಿದರೆ ನನ್ನ ಗತಿಯೇನು?” ಎಂದು ಬೆದರಿ ಚಿಂತಾಕ್ರಾಂತನಾಗಿ ಮೇಲೆದ್ದು ಗುರುರಾಜರಿಗೆ ಹಿಂದೂಮತದ ಪದ್ದತಿಯಂತೆ ಸಾಷ್ಟಾಂಗ ನಮಸ್ಕಾರಮಾಡಿ, “ಖುದಾವಂದ್ ಗುರುಮಹಾರಾಜ್ ನನ್ನನ್ನು ಮಾಫ್ ಮಾಡಬೇಕು. ಮಹಾತ್ಮರಾದ ನಿಮ್ಮನ್ನು ಪರೀಕ್ಷಿಸಹೋಗಿ ಅಪರಾಧ ಮಾಡಿದ್ದೇನೆ. ತಾವು ದಿವಾನ್‌ ಜೀಯವರನ್ನು ಶಿಷ್ಯನೆಂದು ಕಾಪಾಡಿದಂತೆ ಈ ಗುಲಾಮನನ್ನೂ ಕ್ಷಮಿಸಿ ಕಾಪಾಡಬೇಕು” ಎಂದು ಪ್ರಾರ್ಥಿಸಿದನು. 

ರಾಯರು “ಏಕೆ ಚಿಂತಿಸುವಿರಿ ನವಾಬರೆ ? ನಮ್ಮ ವೆಂಕಣ್ಣ ಪಂತನು ನಮ್ಮ ವಿಚಾರವಾಗಿ ನಿಮಗೆ ಬಹುವಾಗಿ ಹೇಳಿಬಿಟ್ಟಿದ್ದಾನೆಂದು ತೋರುವುದು. ಆದ್ದರಿಂದಲೇ ನೀವು ನಮ್ಮನ್ನು ಪರೀಕ್ಷಿಸಿ ಗೌರವಿಸಬೇಕೆಂದು ಹೀಗೆ ಮಾಡಿದ್ದೀರಿ ! ಇದರಿಂದ ನಮಗೇನೂ ಅಸಮಾಧಾನವಿಲ್ಲ ! ನಿಮ್ಮಂಥವರು ಪರೀಕ್ಷಿಸಿದ್ದರಿಂದಲೇ ಅಲ್ಲವೇ ನಮ್ಮ ದೇವರ ಮಹಿಮೆ, ಸನಾತನ ಧರ್ಮ, ಮಂತ್ರಶಕ್ತಿಗಳ ಹಿರಿಮೆ-ಗರಿಮೆಗಳು, ಹಿಂದೂ ಭಕ್ತರ ಮಹಿಮೆಗಳು ಪ್ರಕಟವಾಗಲು ಕಾರಣವಾಯಿತು ? ಹಿಂದೆ ವಿಜಾಪುರದ ಬಾದಷಹರು ವಿಧರ್ಮಿಯಾಗಿದ್ದರೂ ನಮ್ಮ ಗುರುಗಳನ್ನೂ, ನಮ್ಮನ್ನೂ ಆದರದಿಂದ ಗೌರವಿಸಿದರು. ಆದರೆ ನಮ್ಮವರೇ ಆಗಿದ್ದ ವಿಜಾಪುರದ ಮಹಾಮಂತ್ರಿ ಘನಶ್ಯಾಮರಾಯರು ನಮ್ಮ ಗುರುಗಳನ್ನು ಪರೀಕ್ಷಿಸಿದರು. ದೇವರ ದಯದಿಂದ ಆ ಪರೀಕ್ಷೆಯಲ್ಲಿ ಜಯಗಳಿಸಿದ ನಮ್ಮ ಗುರುಗಳು ಘನಶ್ಯಾಮರಾಯರನ್ನು ಕ್ಷಮಿಸಿ ಶಿಷ್ಯರನ್ನಾಗಿ ಮಾಡಿಕೊಂಡು ಅವರೆಲ್ಲರೂ ಕೃಪೆದೋರಿದರು. ಹೀಗೆ ಆಗಾಗ್ಗೆ ಪರೀಕ್ಷೆಗಳಾದರಷ್ಟೆ, ಭಗವಂತನ ಭಕ್ತರ ಅಗಾಧ ಸಾಮರ್ಥ್ಯ, ಭಾರತೀಯ ತತ್ವ, ಧರ್ಮ, ಸಂಸ ತಿಗಳ ಮಹತ್ವ ಬಳಕೆಗೆ ಬರುವುದು !” ಎಂದರು.

ನವಾಬನು ಮತ್ತೆ ಗುರುಗಳಿಗೆ ನಮಿಸಿ, ವಿನೀತನಾಗಿ “ಗುರು ಮಹಾರಾಜ್, ತಮ್ಮ ಮಹಿಮೆಯನ್ನು ಕಣ್ಣಾರೆ ಕಂಡು ಧನ್ಯನಾದೆ. ಇಂದಿನಿಂದ ನಾನೂ ತಮ್ಮ ಭಕ್ತನೆಂದು ಸ್ವೀಕರಿಸಿ, ನನ್ನ ಅಪರಾಧವನ್ನು ಕ್ಷಮಿಸಿ, ನಾಳೆ ನನ್ನ ಸೇವೆಯನ್ನು ಸ್ವೀಕರಿಸಿ ಕೃಪೆಯಿಂದ ಆಶೀರ್ವದಿಸಬೇಕು” ಎಂದು ಬೇಡಿದನು. ಶ್ರೀಗುರುರಾಜರು ಅವನ ಭಕ್ತಿ-ವಿನಯದಿಂದ ಸುಪ್ರೀತರಾಗಿ, ನವಾಬರ ಪ್ರಾರ್ಥನೆಯನ್ನು ಒಪ್ಪಿ, ರಾಜೋಚಿತ ರೀತಿಯಲ್ಲಿ ನವಾಬನನ್ನು ಗೌರವಿಸಿ ಫಲಮಂತ್ರಾಕ್ಷತೆಯನ್ನಿತ್ತು ಕಳುಹಿಸಿಕೊಟ್ಟರು.