ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೧೫, ಆದವಾನಿಯಲ್ಲಿ ಶ್ರೀರಾಯರು
ಕುಂಭಕೋಣದಿಂದ ಹೊರಟ ಶ್ರೀರಾಯರು ಮಿಂಚಿನ ಸಂಚಾರ ಕೈಗೊಂಡು ಹಂಪಿಗೆ ದಯಮಾಡಿಸಿದರು. ಅಲ್ಲಿ ಪದ್ಮನಾಭಾದಿ ಪ್ರಾಚೀನಾಚಾರ್ಯರ ದರ್ಶನ ಮಾಡಿ, ಹಸ್ತೋದಕ ಸಮರ್ಪಿಸಿ, ಶ್ರೀವಿರೂಪಾಕ್ಷ, ರಾಮದೇವ, ಪ್ರಾಣದೇವರುಗಳ ಸಂದರ್ಶನಮಾಡಿ, ಸೇವೆಸಲ್ಲಿಸಿ ಅಲ್ಲಿಂದ ಹೊರಟು ಬಳ್ಳಾರಿಗೆ ಬಂದು ಮುಕ್ಕಾಂಮಾಡಿದರು. ನಾಲ್ಕಾರು ದಿನಗಳಾದ ಮೇಲೆ ಆದವಾನಿ ನವಾಬರು, ಪ್ರಿಯಶಿಷ್ಯ ದಿವಾನ್ ವೆಂಕಣ್ಣಪಂತ, ಮತ್ತಿತರ ಗಣ್ಯವ್ಯಕ್ತಿಗಳಿಗೆ ಮಹಾಸಂಸ್ಥಾನದೊಡನೆ ಆದವಾನಿಗೆ ಚಿತೈಸುವ ಬಗ್ಗೆ ಶ್ರೀಮುಖಗಳನ್ನು ಶ್ರೀಪಾದಪುತ್ರರೂ ಮತ್ತು ಮಠೀಯಪಂಡಿತರೊಡನೆ ಫಲಮಂತ್ರಾಕ್ಷತೆಸಹಿತ ಕಳುಹಿಸಿಕೊಟ್ಟರು. ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾಚಾರ್ಯ-ಪಂಡಿತರುಗಳು ದಿವಾನರ ಭೇಟಿಮಾಡಿ ಗುರುಗಳ ಶ್ರೀಮುಖ-ಫಲ ಮಂತ್ರಾಕ್ಷತೆ ನೀಡಿದರು. ರಾಯರ ಶ್ರೀಮುಖ-ಮಂತ್ರಾಕ್ಷತೆ ಸ್ವೀಕರಿಸಿದ ವೆಂಕಣ್ಣ ಪಂತನ ದೇಹ ರೋಮಾಂಚನಗೊಂಡಿತು, ಭಕ್ತಿನಮಾಂಗನಾಗಿ ದಿವಾನ್ ವೆಂಕಣ್ಣಪಂತನು “ಆಹಾ, ನನ್ನ ಉದ್ದಾರಕ ಗುರುಗಳು ದಯಮಾಡಿಸುವರೇ ? ಬಹುವರ್ಷಗಳ ಮೇಲೆ ರಾಯರು ಈ ಬಡಶಿಷ್ಯನ ಮೇಲೆ ಕೊನೆಗೊಮ್ಮೆ ಕಾರುಣ್ಯಬೀರಿದರು! ಧನ್ಯನಾದೆ” ಎಂದು ಆನಂದಪರವಶನಾಗಿ ನುಡಿದನು. ಅದನ್ನಾಲಿಸಿ ಶ್ರೀಪಾದಪುತ್ರರು ಪಂಡಿತರಿಗೆ ವಿಸ್ಮಯವಾಯಿತು.
ಅದನ್ನು ಗಮನಿಸಿದ ವೆಂಕಣ್ಣಪಂತನು ರಾಯರು ತನ್ನಲ್ಲಿ ಮಾಡಿದ ಅನುಗ್ರಹ. ಓದಲುಬಾರದ ತನಗೆ ನವಾಬರೊಡನೆ ಜರುಗಿದ ಪ್ರಥಮ ಭೇಟಿ, ಆ ತನಗಾದ ಭಯ, ಶ್ರೀರಾಯರನ್ನು ಸ್ಮರಿಸಿದೊಡನೆ ಅವಿದ್ಯಾವಂತನಾದ ತಾನು ಪತ್ರಗಳನ್ನು ಓದಿದ್ದು, ನವಾಬನ ಪ್ರೀತಿಸಂಪಾದನೆ, ಕೊನೆಗೆ ಈ ರಾಜ್ಯದ ದಿವಾನಗಿರಿಯ ಪ್ರಾಪ್ತಿ, ಮುಂತಾದ ವಿಚಾರಗಳನ್ನು ಭಕ್ತಿಯಿಂದ ವಿವರಿಸಿ, “ಕಸವಾಗಿ ಬಿದ್ದಿದ್ದ ನನ್ನನ್ನು ಇಂದು ಈ ಮಹಾಸ್ಥಾನಕ್ಕೇರಿಸಿದ್ದು ರಾಯರ ಮಹಿಮೆಯ ಪ್ರಭಾವ” ಮುಂತಾಗಿ ಹೇಳಿ ಗುರುಗಳ ಕಾರುಣ್ಯವನ್ನು ಕೊಂಡಾಡಿದನು. ಅದನ್ನಾಲಿಸುತ್ತಿದ್ದ ಸರ್ವರ ಮೈಯಲ್ಲಿ ವಿದ್ಯುತ್ತಂಚಾರವಾದಂತಾಯಿತು. ಆಶ್ಚರ್ಯಾನಂದದಿಂದ ಅವರು ನಿಬ್ಬೆರಗಾದರು.
ಆನಂತರ ವೆಂಕಣ್ಣ ಪಂತ ಶ್ರೀಪಾದಪುತ್ರರು, ಪಂಡಿತರಿಗೆ ನವಾಬನ ದರ್ಶನ ಮಾಡಿಸಿ, ಶ್ರೀಮುಖ-ಮಂತ್ರಾಕ್ಷತೆ ಕೊಡಿಸಿ, “ಹುಜೂರ್, ನನ್ನ ಗುರುದೇವರು ದಯಮಾಡಿಸಲಿದ್ದಾರೆ. ಇದು ನಿಮಗೂ ರಾಜ್ಯಕ್ಕೂ ಬಹುಶ್ರೇಯಸ್ಸಿಗೆ ಮುನ್ಸೂಚನೆ” ಎಂದರುಹಿದನು. ತನ್ನ ಪ್ರೀತ್ಯಾಸ್ಪದನಾದ ದಿವಾನ್ ವೆಂಕಣ್ಣಪಂತನಿಂದ ಗುರುಗಳಜ್ಞಾನ-ಭಕ್ತಿ-ವೈರಾಗ್ಯ,ಮಹಿಮಾದಿಗಳನ್ನು ಕೇಳಿ ತಿಳಿದಿದ್ದ ಸಿದ್ದೀಮಸೂದಖಾನನಿಗೆ ಅತ್ಯಂತ ಸಂತೋಷವಾಯಿತು. ನಸುನಗುತ್ತಾ ಶ್ರೀಪಾದಪುತ್ರರನ್ನು ನೋಡಿ “ಪಂಡಿತ್ಜೀ, ನಮ್ಮ ದಿವಾನ್ ಜಿಯವರ ಗುರುಗಳೆಂದ ಮೇಲೆ ಆ ಮಹನೀಯರು ನನಗೂ ಗುರುಗಳೇ ! ಅವರು ಬರುವುದು ಬಹುತ್ ಖುಷೀ ಕೀ ಬಾತ್ ಹೈ” ಎಂದು ಹೇಳಿ ವೆಂಕಣ್ಣಪಂತನತ್ತತಿರುಗಿ “ದಿವಾನ್ ಜೀ ಗುರುಮಹಾರಾಜರನ್ನು ಸ್ವಾಗತಿಸಿ ಬಹುತ್ ಗೌರವಮಾಡಬೇಕು. ಆ ಹೊಣೆಯನ್ನು ನೀವೇ ವಹಿಸಬೇಕು” ಎಂದು ಹೇಳಿದನು.
ನವಾಬರ ಮಾತು ಕೇಳಿ ವೆಂಕಣ್ಣಪಂತನಿಗೆ ಪರಮಹರ್ಷವಾಯಿತು, “ಜೀ ಹುಜೂರ್, ಎಲ್ಲ ವ್ಯವಸ್ಥೆ ಮಾಡುತ್ತೇನೆ” ಎಂದು ವಿಜ್ಞಾಪಿಸಿ ಶ್ರೀಪಾದಪುತ್ರಾದಿಗಳೊಡನೆ ತನ್ನ ಮಂದಿರಕ್ಕೆ ಬಂದನು. ಅಂದು ರಾತ್ರಿ ರಾಜಧಾನಿಯ ಪ್ರಮುಖರಿಗೆ ಶ್ರೀಮುಖಮಂತ್ರಾಕ್ಷತೆಗಳನ್ನು ಕೊಡಿಸಿ, ಸರ್ವರೂ ಗುರುರಾಜರನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧರಾಗಬೇಕೆಂದು ಆಜ್ಞಾಪಿಸಿದನು, ರಾಜ್ಯದ ದಿವಾನರ ಅಪ್ಪಣೆಯಂತೆ ಸರ್ವರೂ ಉತ್ಸಾಹದಿಂದ ನಗರ-ಮನೆಮಠಗಳನ್ನು ಶೃಂಗರಿಸಿದರು. ಅನೇಕ ಹಸರುವಾಣಿ ಚಪ್ಪರಗಳನ್ನು ಅಲಂಕರಿಸಲಾಯಿತು. ರಾಜ್ಯದ ಸಮಸ್ತಗೌರವ ಬಿರುದಾವಳಿ, ಪೂರ್ಣಕುಂಭ, ವೇದಘೋಷ, ಮಂಗಳವಾದ್ಯ, ಸಹಸ್ರಾರುಜನ ರಾಜಕೀಯ ಅಧಿಕಾರಿಗಳು, ಪೌರಜಾನಪದರು, ಶಿಷ್ಯ-ಭಕ್ತಜನರೊಡನೆ ವೆಂಕಣ್ಣಪಂತ ಊರಿನ ಎಲ್ಲೆಯಲ್ಲಿ ಗುರುಗಳ ಆಗಮನವನ್ನು ಪ್ರತೀಕ್ಷಿಸುತ್ತಾ ಕಾದುನಿಂತನು.
ಸರಿಯಾದ ಸಮಯಕ್ಕೆ ಶ್ರೀಗುರುಸಾರ್ವಭೌಮರ ಸವಾರಿಯು ಚಿತೈಸಿತು. ಗುರುಗಳ ದರ್ಶನವಾದೊಡನೆ ವೆಂಕಣ್ಣಪಂತನ ಮುಖ ಅರಳಿತು. ಧಾವಿಸಿಬಂದು ಪೂರ್ಣಫಲವನ್ನು ಗುರುಗಳ ಚರಣದಡಿಯಲ್ಲಿಟ್ಟು ಸಾಷ್ಟಾಂಗವೆರಗಿ “ಗುರುದೇವ! ಬಹುವರ್ಷಗಳ ನಂತರ ತಮ್ಮ ಪಾದದರ್ಶನವಾಯಿತು. ಧನ್ಯನಾದೆ!” ಎಂದು ವಿಜ್ಞಾಪಿಸಿದನು. ರಾಯರು ಮಂದಹಾಸದಿಂದ ಕುಶಲಪ್ರಶ್ನೆ ಮಾಡಿದರು. ತರುವಾಯ ದಿವಾನ್ ಪಂತನ ಪ್ರಾರ್ಥನೆಯಂತೆ ಅಲಂಕೃತ ಸುವರ್ಣಪಾಲಕಿಯಲ್ಲಿ ಮಂಡಿಸಿದರು, ಆನಂತರ ವೆಂಕಣ್ಣಪಂತನು ಸಕಲಗೌರವದಿಂದ ಗುರುಗಳನ್ನು ರಾಜಧಾನಿಯ ಪ್ರಮುಖ ಬೀದಿಗಳನ್ನು ಬಳಸಿ ಮೆರವಣಿಗೆಯಿಂದ ತನ್ನ ಮಂದಿರಕ್ಕೆ ಕರೆತಂದನು. ಅಂದಿನ ಆ ಅಭೂತಪೂರ್ವ ಉತ್ಸವ, ಸಂಭ್ರಮ, ಜನರ ಉತ್ಸಾಹ, ಭಕ್ತಿ ಪ್ರಕರ್ಷಗಳು ಅವಿಸ್ಮರಣೀಯ, ದಿವಾನ್ ವೆಂಕಣ್ಣಪಂತನ ದ್ವಾರಾ ಊರಿನ ಪ್ರಮುಖರ ಪರಿಚಯಮಾಡಿಕೊಂಡು ಗುರುರಾಜರು, ನಗುಮುಖದಿಂದ ಸಕಲರ ಕುಶಲಪ್ರಶ್ನೆಮಾಡಿ ಫಲಮಂತ್ರಾಕ್ಷತೆ ಕರುಣಿಸಿದರು. ವೆಂಕಣ್ಣಪಂತ, ಗುರುಗಳು, ಶ್ರೀಪಾದಪುತ್ರರು ಮತ್ತು ಪ್ರಮುಖಪಂಡಿತರನ್ನು ತನ್ನ ಮಂದಿರದಲ್ಲೇ ಬಿಡಾರಮಾಡಿಸಿದ. ಉಳಿದ ನೂರಾರು ಜನ ಪರಿವಾರ, ಪಂಡಿತ-ವಿದ್ಯಾರ್ಥಿಗಳು, ಕುಟುಂಬ ಸಹಿತರಾದ ಕೆಲಸಗಾರರುಗಳಿಗೆ ಹತ್ತಾರು ಮನೆಗಳನ್ನು ವ್ಯವಸ್ಥೆಮಾಡಿ ಮರುದಿನ ತನ್ನ ಮನೆಯಲ್ಲಿ ರಾಯರಿಗೆ ವೈಭವದ ಭಿಕ್ಷೆಮಾಡಿಸಿದನು.
ಮಾರನೆಯ ದಿನ ವೆಂಕಣ್ಣಪಂತನ ಮನೆಯಲ್ಲಿ ಗುರುಗಳಿಗೆ ಅದ್ದೂರಿಯ ಸತ್ಕಾರ ನೆರವೇರಿತು. ಪ್ರಾತಃಕಾಲ ಗುರುರಾಜರಿಗೆ ವೆಂಕಣ್ಣಪಂತ ಪಾದಪೂಜೆಮಾಡಿ, ಪತ್ನಿ, ಪುತ್ರ, ಪರಿವಾರದೊಡನೆ, ಮಂತ್ರಮುದ್ರಾಧಾರಣೆ ಮಂತ್ರಾಕ್ಷತೆ ಸ್ವೀಕರಿಸಿ ಧನಕನಕ ವಸ್ತ್ರಾಭರಣಗಳನ್ನು ಸಮರ್ಪಿಸಿ ಕೃತಾರ್ಥನಾದನು.
ವೆಂಕಣ್ಣಪಂತನು ದೊಡ್ಡರಾಜ್ಯದ ದಿವಾನನಾಗಿದ್ದರೂ, ಸ್ಥಾನಮಾನಗಳ ಬಲದಿಂದ ಮದಿಸದೆ, ಮೈಮರೆಯದೆ ಮೊದಲಿನಂತೆಯೇ ಗುರುಭಕ್ತನಾಗಿ ಉಳಿದಿರುವುದನ್ನು ಕಂಡು ಮುದಗೊಂಡ ಶ್ರೀಪಾದಂಗಳವರು ನಸುನಗುತ್ತಾ “ಏನು ದಿವಾನ್ ಸಾಹೇಬರೇ! ಈ ಗುರುಗಳನ್ನು ಇನ್ನೂ ಮರೆಯದಿರುವುದು ತುಂಬಾ ಸಂತೋಷ!” ಎಂದರು.
ಗುರುರಾಜರವಚನವನ್ನಾಲಿಸಿ ವೆಂಕಣ್ಣಪಂತ ಧರೆಗಿಳಿದುಹೋದ. ತನ್ನಿಂದೇನು ಅಪರಾಧವಾಯಿತೋ ಗಾಬರಿಯಾದ. ಅವನ ಕಣ್ಣುಗಳಿಂದ ಬಳಬಳನೆ ನೀರು ಹರಿಯತೊಡಗಿತು. ಕಂಠ ತುಂಬಿಬಂತು. ದುಃಖಾರ್ತನಾಗಿ ಗುರುಗಳ ಚರಣಗಳಮೇಲೆ ಶಿರವಿರಿಸಿ, “ಮಹಾಸ್ವಾಮಿ, ಜಗತ್ತಿನ ಜನತೆಯ, ಜ್ಞಾತಿಗಳ ಅನಾದರ-ನಿಂದೆ-ಉದಾಶೀನಗಳಿಂದ ಮೂಲೆಗುಂಪಾಗಿಬಿದಿದ್ದ ಈ ಅನಾಥನನ್ನು ಕರಪಿಡಿದು ಪೊರೆದ ನನ್ನ ಸ್ವರೂಪೋದ್ಧಾರಕಗುರುಗಳಾದ ತಮ್ಮನ್ನು ಮರೆಯುವುದೇ ? ಕಸವನ್ನು ರಸವಾಗಿಸಿ, ಅದಕ್ಕೊಂದು ಸ್ವರೂಪಕೊಟ್ಟು ಜಗತ್ತಿನಲ್ಲಿ ಗೌರವ-ಕೀರ್ತಿ-ಪ್ರತಿಷ್ಠೆಗಳು ದೊರೆತು ಬಾಳುವಂತೆ ಮಾಡಿದ ತಮ್ಮನ್ನು ಮರೆಯವಷ್ಟು ಮತಿಹೀನನೇ ನಾನು! ಅದನ್ನು ಯೋಚಿಸಿದರೂ ಮೈಕಂಪಿಸುವುದು. ಇನ್ನೇನಾದರೂ ಆ ಭಾವನೆ ನನಗುಂಟಾದರೆ, ಜಗತ್ತಿನ ಅದಾವ ಶಕ್ತಿಯೂ ನನ್ನನ್ನು ಕಾಪಾಡಲಾರದು. ಸ್ವಾಮಿ, ನಾನು ಕೃತಘ್ನನಲ್ಲ, ಇಂದಿನ ಈ ವೈಭವ, ಸ್ಥಾನ, ಸಂಪತ್ತು, ಲೋಕಮಾನ್ಯತೆ-ಇವೆಲ್ಲವೂ ತಮ್ಮ ಪಾದಾನುಗ್ರಹದ ಫಲ! ಗುರುವರ್ಯ, ದಾಸನಾದ ನನ್ನಲ್ಲಿ ಎಂದಿನಂತೆಯೇ ಕೃಪಾದೃಷ್ಟಿಯಿಟ್ಟು ಸಲಹಬೇಕು. ಮಹಾನುಭಾವ, ನನ್ನ ದೇಹದ ರಕ್ತಕಣ ಕಣಗಳೂ, ಉಸಿರು ತಮ್ಮ ದಯಾಮೃತ ಪೋಷಿತವಾಗಿದೆ. ನನ್ನದೆಂಬುದಾವುದೂ ಇಲ್ಲ. ಎಲ್ಲವೂ ತಮ್ಮದೇ ಆಗಿದೆ. ಶಿಷ್ಯನನ್ನು ಅನುಗ್ರಹಿಸಬೇಕು” ಎಂದು ದೀನನಾಗಿ ಪ್ರಾರ್ಥಿಸಿದನು.
ವೆಂಕಣ್ಣಪಂತನ ಉದ್ವೇಗ, ಕಳಕಳಿ, ದೈನ್ಯಭಾವಗಳನ್ನು ಕಂಡು ರಾಯರು “ವೆಂಕಣ್ಣ! ನಾವು ವಿನೋದಕ್ಕಾಗಿ ಆಡಿದ ಮಾತಿಗೆ ಇಷ್ಟೇಕೆ ದುಃಖಿಸುವೆ ? ನಿನ್ನನ್ನು ನಾವು ಅರಿತಿಲ್ಲವೇ? ನೀನು ನಮ್ಮ ಪ್ರಿಯಶಿಷ್ಯನೇ ಆಗಿದ್ದೀಯೆ” ಎಂದು ವೆಂಕಣ್ಣಪಂತನನ್ನು ಹತ್ತಿರ ಕರೆದು ಶಿರದ ಮೇಲೆ ಕರವಿರಿಸಿ ಸಮಾಧಾನಪಡಿಸಿದರು. ಗುರುಗಳ ಕರಸ್ಪರ್ಶದಿಂದ ಪುಳಕಿತನಾದ ವೆಂಕಣ್ಣಪಂತ ಆನಂದದಿಂದ ಮೈಯುಬ್ಬಿ ರಾಯರಿಗೆ ಮತ್ತೆ ಮತ್ತೆ ನಮಸ್ಕರಿಸಿದನು. ಅವನ ಗುರುಭಕ್ತಿ, ಕೃತಜ್ಞತೆಗಳನ್ನೂ, ಗುರುರಾಜರಿಗೆ ಅವನಲ್ಲಿರುವ ಪ್ರೀತಿವಾತ್ಸಲ್ಯಗಳನ್ನು ನೋಡಿ ಸಕಲರೂ ವಿಸ್ಮಿತರಾದರು.