ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೧೪, ಕುಂಭಕೋಣದಿಂದ ನಿರ್ಗಮನ
ಶ್ರೀಪಾದಂಗಳವರು ಕುಂಭಕೋಣಕ್ಕೆ ಬಂದ ಎರಡು-ಮೂರು ವರ್ಷಗಳಾದ ಮೇಲೆ, ತಮ್ಮ ಅವತಾರದ ಉದ್ದಿಶ್ರವಾದ, ಮುಂದೆ ಕೈಗೊಳ್ಳಬೇಕಾದ ಕಾರಕ್ರಮ, ಚಟುವಟಿಕೆಗಳಿಗೆ ಒಂದು ಕಾರ್ಯರಂಗವನ್ನು ನಿರ್ಧರಿಸಬೇಕಾಗಿತ್ತು. ಅಂತೆಯೇ ಶ್ರೀರಾಯರು ಆ ಬಗ್ಗೆ ಚಿಂತನಮಂಥನಮಾಡುತ್ತಿದ್ದು ಕೊನೆಗೊಮ್ಮೆ ತಮ್ಮ ಕಾವ್ಯನಿರ್ವಹಣೆಗೆ ಭವಿಷ್ಯದಲ್ಲಿ ಕುಂಭಕೋಣವು ಅಷ್ಟು ಪ್ರಶಸ್ತವಾಗಲಾರದೆಂದು ನಿರ್ಧರಿಸಿದರು. ಆದ್ದರಿಂದಲೇ ತಮ್ಮ ಭಾವೀ ಕಾರ್ಯಚಟುವಟಿಕೆಗಳಿಗೆ ಶ್ರೀಮಠದ ಮೂಲಸ್ಥಳವಾದ ಕರ್ನಾಟಕವೇ ಸರಿಯಾದ ಕಾರ್ಯರಂಗವೆಂದು ನಿಶ್ಚಯಿಸಿ ಅದಕ್ಕೆ ತಕ್ಕವ್ಯವಸ್ಥೆ ಮಾಡುವುದರಲ್ಲಿ ಮಗ್ನರಾದರು.
ಕುಂಭಕೋಣದ ಸರ್ವದೇವಾಲಯಾಧಿಪತ್ಯ, ಆಡಳಿತದ ಜವಾಬ್ದಾರಿಗಳು ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರ ಕಾಲದಿಂದ ಶ್ರೀಮಹಾಸಂಸ್ಥಾನಕ್ಕೆ ಸೇರಿದ್ದು ಈಗ ಅದು ಯಶಸ್ವಿಯಾಗಿ ನೆರವೇರುವಂತೆ ಮಾಡಲು ಸೂಕ್ತಕ್ರಮ ಕೈಗೊಳ್ಳಬೇಕಾಗಿದ್ದಿತು. ಜೊತೆಗೆ ಕುಂಭಕೋಣದ ಸಂಸ ತ ವಿದ್ಯಾಪೀಠ, ವಿಜಯೀಂದ್ರ ಗುರುಪಾದರ ಬೃಂದಾವನ ಪೂಜಾರಾಧನೆಗಳ ವ್ಯವಸ್ಥೆಯೂ ಆಗಬೇಕಾಗಿದ್ದಿತು. ಶ್ರೀಪಾದಂಗಳವರು ಇವೆಲ್ಲ ವಿಚಾರವನ್ನೂ ಆತ್ಮೀಯರೊಡನೆ ವಿಚಾರವಿನಿಮಯ ಮಾಡಿ, ಶ್ರೀಕಂಚಿಕಾಮಕೋಟಿ ಪೀಠದ ಅಧಿಕಾರಿಗಳು, ಶ್ರೀವೈಷ್ಣವ ಮತದ ಶ್ರೀಜೀಯರ್ರವರನ್ನು ಕರೆಸಿಕೊಂಡು, ಅವರೊಡನೆ ಮಾತುಕತೆ ನಡೆಸಿ, ಕುಂಭೇಶ್ವರ ದೇವಾಲಯಾಧಿಪತ್ಯವನ್ನು ಶ್ರೀಕಂಚೀಕಾಮಕೋಟಿ ಪೀಠಕ್ಕೂ, ಶ್ರೀಸಾರಂಗಪಾಣಿ, ಶ್ರೀಚಕ್ರಪ್ರಾಣದೇವರು ಮುಂತಾದ ದೇವಾಲಯಾಧಿಪತ್ಯವನ್ನು ಶ್ರೀಜೀಯರ್ರವರಿಗೂ ವಹಿಸಿಕೊಟ್ಟು, ಸಂಸ ತವಿದ್ಯಾಪೀಠ, ಶ್ರೀವಿಜಯೀಂದ್ರಸ್ವಾಮಿಗಳ ಬೃಂದಾವನ, ಶ್ರೀನೃಸಿಂಹದೇವರಗುಡಿಗಳ ಪೂಜಾರಾಧನೆ, ಹಾಗೂ ಶ್ರೀಮಠದ ಆಸ್ತಿಪಾಸ್ತಿಗಳ ನಿರ್ವಹಣೆಗಳನ್ನು ತಮ್ಮ ಪೂರ್ವಾಶ್ರಮ ವಂಶೀಕರೂ, ಆತ್ಮೀಯರೂ ಆದ ವೆಂಕಟನಾರಾಯಣಾಚಾರ್ಯ, ನಾರಾಯಣಚಾರ, ಗೋವಿಂದಾಚಾರ ಮುಂತಾದವರಿಗೆ ವಹಿಸಿಕೊಟ್ಟರು.
ಶ್ರೀಗಳವರು ಕುಂಭಕೋಣವನ್ನು ತ್ಯಜಿಸಿ ಕರ್ನಾಟಕಕ್ಕೆ ದಯಮಾಡುವ ವಿಚಾರತಿಳಿದು ಕುಂಭಕೋಣದ ಗಣ್ಯವ್ಯಕ್ತಿಗಳು, ತಂಜಾಪುರದ ರಾಜಪ್ರತಿನಿಧಿಗಳು ಬಂದು ಶ್ರೀಯವರ ಮನಸ್ಸು ಬದಲಾಯಿಸುವಂತೆ ಮಾಡಲು ಬಹುವಾಗಿ ಯತ್ನಿಸಿದರು. ಶ್ರೀಗುರುರಾಜರು ಸರ್ವರನ್ನೂ ಸಮಾಧಾನಪಡಿಸಿ ಒಂದು ಶುಭಮುಹೂರ್ತದಲ್ಲಿ ಸಮಸ್ತ ಸಿರಿಸಂಪತ್ತು, ಬಿರುದುಬಾವಲಿ, ವೈಭವಗಳೊಡನೆ ಮಹಾಸಂಸ್ಥಾನ ಸಮೇತರಾಗಿ ಕುಂಭಕೋಣದಿಂದ ದಿಗ್ವಿಜಯಯಾತ್ರೆ ಕೈಕೊಂಡು ಹೊರಟರು.
ಅಂದು ಕುಂಭಕೋಣದ ಜನತೆ ಶ್ರೀಯವರಿಗೆ ನೀಡಿದ ಬೀಳ್ಕೊಡುಗೆಯ ದೃಶ್ಯ ಅಭೂತಪೂರ್ವವಾಗಿದ್ದು, ಅದು ಶ್ರೀರಾಯರ ಮೇಲಿನ ಭಕ್ತಿಗೌರವಗಳಿಗೆ ಜೀವಂತಸಾಕ್ಷಿಯಾಗಿತ್ತು.