|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೧೩. ಅನಾಥ ವೆಂಕಣ್ಣ ದಿವಾನನಾದ

ಚಾತುರ್ಮಾಸ್ಯವ್ರತವನ್ನು ಮುಗಿಸಿಕೊಂಡು ಶ್ರೀರಾಯರು ಸಂಚಾರಕ್ರಮದಿಂದ ರಾಯಚೂರಿಗೆ ಸಮೀಪದಲ್ಲಿದ್ದ ಕಂದನಾತಿ ಎಂಬ ಗ್ರಾಮಕ್ಕೆ ಬಿಜಯಂಗೈದರು. ಅಲ್ಲಿ ಜಹಗೀರುದಾರರು ಮಠದ ಮುಖ್ಯ ಶಿಷ್ಯರು. ನಿಜವಾದ ಜಹಗೀರುದಾರರು ಮೃತರಾದಮೇಲೆ ಅವರ ಜ್ಞಾತಿಗಳು ತಾವೇ ಹಕ್ಕುದಾರರೆಂದು ಬಿಜಾಪುರದ ಸುಲ್ತಾನರ ಮನ ಒಲಿಸಿ ಜಹಗೀರಿಯ ಯಜಮಾನ್ಯವನ್ನು ಸಂಪಾದಿಸಿ, ನಿಜವಾದ ಹಕ್ಕುದಾರನಾದ ವೆಂಕಣ್ಣ ಎಂಬ ಬಾಲಕನನ್ನು ಮೂಲೆಗುಂಪಾಗಿಸಿದ್ದರು.

ಕಂದನಾತಿಯಲ್ಲಿ ಜಹಗೀರದಾರರ ಮನೆಯಲ್ಲಿ ಗುರುಗಳಿಗೆ ಒಳ್ಳೆ ಅತಿಥ್ಯ ನಡೆಯಿತು. ಆ ಹೊತ್ತಿಗೆ ಅನಾಥ ವೆಂಕಣ್ಣ ಯುವಾವಸ್ಥೆಗೆ ಬಂದಿದ್ದು, ಗುರುಗಳ ಮಹಿಮೆಯನ್ನು ಕೇಳಿ ತಿಳಿದಿದ್ದನು. ಗುರುಗಳ ಅನುಗ್ರಹವಾದರೆ ತನ್ನೆಲ್ಲಾ ಕಷ್ಟಗಳು ಪರಿಹಾರವಾಗುವುದೆಂದು ಅವನು ಗುರುಗಳ ಆಗಮನವಾದಲಾಗಾಯಿತು ಅವರನ್ನು ವಿಶೇಷಭಕ್ತಿಶ್ರದ್ಧೆಗಳಿಂದ ಸೇವಿಸಿ ತನ್ನ ಕಷ್ಟನಷ್ಟಗಳನ್ನು ಹೇಳಿಕೊಂಡು ವರ್ಧಿಷ್ಟುವಾಗುವಂತೆ ಆಶೀರ್ವದಿಸಬೇಕೆಂದು ಪ್ರಾರ್ಥಿಸಿದನು. ಕರುಣಾಕರರಾದ ಗುರುರಾಜರಿಗೆ ವೆಂಕಣ್ಣನಲ್ಲಿ ದಯೆ ಉಂಟಾಯಿತು. ಅವನ ನಿಷ್ಕಲ್ಮಶ ಮನಸ್ಸು, ಸೇವೆ, ಭಕ್ತಿ ವಿನಯಗಳಿಂದ ಸುಪ್ರೀತರಾದ ರಾಯರು “ವೆಂಕಣ್ಣ! ನಿನ್ನ ಸೇವೆಯಿಂದ ಸುಪ್ರೀತರಾಗಿದ್ದೇವೆ. ಶ್ರೀಮೂಲರಾಮನು ನಿನ್ನಲ್ಲಿ ಪ್ರಸನ್ನನಾಗಿದ್ದಾನೆ. ನಿನಗೆ ಸಂಕಟಬಂದಾಗ ನಮ್ಮನ್ನು ಸ್ಮರಿಸು. ಆ ಕ್ಷಣದಿಂದ ನೀನು ಅಭಿವೃದ್ಧಿಗೆ ಬಂದು ಕೀರ್ತಿಗಳಿಸುವೆ. ಮುಂದೆ ನಿನ್ನಿಂದ ಮಹಾಸಂಸ್ಥಾನಕ್ಕೆ ಶ್ರೀಮೂಲರಾಮನಿಗೆ ಅಪಾರಸೇವೆಯಾಗಿ, ನಿನ್ನ ಹೆಸರು ಶಾಶ್ವತವಾಗಿ ನಿಲ್ಲುವಂತಾಗುವುದು” ಎಂದು ಫಲಮಂತ್ರಾಕ್ಷತೆಯನ್ನು ಕರುಣಿಸಿ ಆಶೀರ್ವದಿಸಿ, ಅಲ್ಲಿಂದ ಕುಂಭಕೋಣದ ಕಡೆಗೆ ಸಂಚಾರ ಬೆಳೆಸಿದರು. 

ವೆಂಕಣ್ಣನು ವಿಜಾಪುರ ಸುಲ್ತಾನರ ದರ್ಬಾರಿನಲ್ಲಿ ಖ್ಯಾತಿಗಳಿಸಿ “ಸ‌ದೇಸಾಯಿ” ಪ್ರಶಸ್ತಿ, ಜಹಗೀರುಗಳನ್ನು ಪಡೆದು ಹೆಸರುವಾಸಿಯಾಗಿದ್ದ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದನು. ಅವನು ಬಾಲಕನಾಗಿರುವಾಗ ಅವನ ತಂದೆ-ತಾಯಿಗಳು ಮೃತರಾದ್ದರಿಂದ ಜಹಗೀರನ್ನು ಜ್ಞಾತಿಗಳು ಆಕ್ರಮಿಸಿದ್ದರು ಮತ್ತು ಹಕ್ಕುದಾರನಾದ ವೆಂಕಣ್ಣನನ್ನು ಮೂಲೆಗುಂಪುಮಾಡಿದ್ದರು. ಜ್ಞಾತಿಗಳ ಮಾತ್ಸರ್ಯ, ಅನಾದರದಲ್ಲಿ ಬೆಳೆದ ಅವನು ಬುದಿಯಿಲ್ಲದೆ ದನಗಾಹಿಯಾಗಿ ಬಾಳಬೇಕಾಗಿ ಬಂದಿತು. ವೆಂಕಣ್ಣನಿಗೆ ಎಲ್ಲರಂತೆ ತಾನೂ ವಿದ್ಯಾವಂತನಾಗಿ, ಯೋಗ್ಯನಾಗರಿಕನಾಗಿ ಸಮಾಜದಲ್ಲಿಗೌರವದಿಂದ ಬಾಳಬೇಕೆಂಬ ಆಕಾಂಕ್ಷೆ ಬಹಳವಾಗಿತ್ತು. ಆದರೆ ಸರಿಯಾದ ರಕ್ಷಕರು, ಮಾರ್ಗದರ್ಶಕರು ಯಾರೂ ಇಲ್ಲದೆ ಬಂಧುಗಳ ಅಸೂಯೆ, ಅನಾದರಗಳಿಂದಾಗಿ ಅನಾಥನಾಗಿ ಬೆಳೆಯಬೇಕಾಯಿತು. ಅವನನ್ನು ಜನರು ಉಡಾಳನೆಂದು ಅಸಡ್ಡೆಯಿಂದ ಕಾಣುತ್ತಿದ್ದರು. ಅಂತೆಯೇ ಓದು-ಬರಹವನ್ನು ಕಲಿಯಲೂ ಆಗದೆ ದುಃಖದಿಂದ ಬಾಳ್ವೆ ಸಾಗಿಸುತ್ತಿದ್ದನು. 

ವೆಂಕಣ್ಣನ ಭಾಗ್ಯದ ಬಾಗಿಲು ತೆರೆಯಿತೋ ಎಂಬಂತೆ ಮಹಾನುಭಾವರಾದ ರಾಯರು ಕಂದನಾತಿಗೆ ಬಂದರು. ವೆಂಕಣ್ಣನು ಗುರುಗಳ ಅಗಾಧ ಮಹಾತ್ಮವನ್ನು ಕೇಳಿ ಪ್ರಭಾವಿತನಾಗಿದ್ದನಾದ್ದರಿಂದ ಗುರುಗಳ ಅನುಗ್ರಹವಾದರೆ ತಾನೂ ಒಬ್ಬ ಸದ್ಧ ಸ್ಥನಾಗಿ ಬಾಳಬಹುದೆಂಬ ಆಸೆಯಿಂದ, ಉತ್ಸಾಹದಿಂದ ಗುರುಗಳ ಸೇವೆ ಮಾಡಿ ಅವರ ಕೃಪಾದೃಷ್ಟಿಗೆ ಪಾತ್ರನಾದನು. ರಾಯರು ಬಂದು ಫಲಮಂತ್ರಾಕ್ಷತೆ ಕರುಣಿಸಿ ಆಶೀರ್ವದಿಸಿದ ಮೇಲೆ ಅವನಲ್ಲಿ ಏನೋ ಒಂದು ಶಕ್ತಿಯು ಮೈಯಲ್ಲಿ ಸಂಚರಿಸುತ್ತಿರುವಂತೆ ಭಾಸವಾಗಹತ್ತಿತು. ವಿವಿಧ ಭಾವನೆಗಳು ಮನದಲ್ಲಿ ಬರತೊಡಗಿದ್ದವು. ಅದುವರೆಗೆ ಶೋಬಚನಾಗಿದ್ದ ವೆಂಕಣ್ಣ ತನಗಿದ್ದ ಬಟ್ಟೆ-ಬರೆಗಳನ್ನೆಲ್ಲ ಸ್ವಚ್ಛವಾಗಿ ಒಗೆದು ಉಡಹತ್ತಿದನು. ಪ್ರತಿದಿನ ಸ್ನಾನ ಮಾಡಿ ದೇವರಿಗೆ, ಗುರುಗಳಿಗೆ ನಮಸ್ಕರಿಸಿ ಮುಂದಿನ ಕಾರದಲ್ಲಿ ತೊಡಗುತ್ತಿದ್ದನು. ಅವನಲ್ಲಿಈ ಪರಿವರ್ತನೆಯನ್ನು ಕಂಡು ಊರಿನವರಿಗೆ ಅಚ್ಚರಿ, ಗುರುಗಳು ಬಂದು ಹೋದಮೇಲೆ ಅವನಲ್ಲಿ ಈ ಪರಿವರ್ತನೆಯಾಗಿರುವುದನ್ನು ಗಮನಿಸಿ, ಅವನ ಭಾಗ್ಯದ ದಿನಗಳು ಹತ್ತಿರವಾಗುತ್ತಿದೆಯೆಂದು ಜನ ಭಾವಿಸಿದರು; ಕಾಲಚಕ್ರ ಉರುಳಿತು. 

ಅಂದು ಆದವಾನಿಯ ಪ್ರಾಂತ್ಯವು ವಿಜಾಪುರದ ಸುಲ್ತಾನರಿಗೆ ಸೇರಿದ್ದ ಮಾಂಡಲಿಕ ರಾಜ್ಯವಾಗಿತ್ತು. ಆದವಾನಿಯೇ ಅದರ ರಾಜಧಾನಿ, ವಿಜಾಪುರದ ಆಲಿ ಆದಿಲ್‌ ಷಹನ ಭಾವನಾದ ಸಿದ್ದೀಮಸೂದ್‌ ಖಾನ್ ಎಂಬ ವೀರ ಸರದಾರನು (ಕ್ರಿ.ಶ. ೧೬೬೨-೧೬೮೭) ಅದಕ್ಕೆ ಮಾಂಡಲೀಕನೂ, ರಾಜ್ಯಪಾಲನೂ ಆಗಿದ್ದನು. ವಿಜಾಪುರದ ಸುಲ್ತಾನರಿಗೆ ಅಧೀನನಾಗಿದ್ದರೂ ಸುಲ್ತಾನನ ಭಾವನಾದ ಸಿದ್ದಿ ಮಸೂದ್ ಖಾನನು ಸ್ವತಂತ್ರನಾಗಿದ್ದನು. ರಾಜ್ಯವನ್ನು ವಿಸ್ತರಿಸುತ್ತಲೂ ಇದ್ದನು. ಆಗ ರಾಯಚೂರ ಪ್ರಾಂತ್ಯವೆಲ್ಲವೂ ಅವನ ಸ್ವಾಧೀನದಲ್ಲಿತ್ತು. ಕಂದಾಯ ವಸೂಲಿಗೆ ಮಸೂದ್ ಖಾನನು ಆಗಾಗ್ಗೆ ಸ್ವತಃ ಹೊರಡುವ ವಾಡಿಕೆಯಿದ್ದಿತು. ಹೀಗೊಂದು ಸಲ ಸಿದ್ಧಿಮಸೂದ್ಯಾನನು ತೆರಿಗೆ ವಸೂಲಿಗಾಗಿ ಹೊರಟವನು ಕಂದನಾತಿ ಮಾರ್ಗವಾಗಿ ಬಂದನು, ಅಂದು ಕೊಲೆ, ಸುಲಿಗೆ, ದರೋಡೆಗಳು ಯವನರಿಗೆ ಸ್ವಾಭಾವಿಕವಾಗಿದ್ದುದರಿಂದ ಹಿಂದೂಜನರು. ಗೌರವಸ್ಥರು ಖಾನನನ್ನು ನೋಡಲೂ ಹೆದರುತ್ತಿದ್ದರು. ಸಿದ್ಧಿಮಸೂದ್ ಖಾನನು ಆನೆಯನ್ನೇರಿ, ಸೈನಿಕರೊಡನೆ ಕಂದನಾತಿಗೆ ಬರುತ್ತಿರುವಾಗ ಊರಿನ ಸಮೀಪದಲ್ಲಿ ಈರ್ವರು ಕುದುರೆ ಸವಾರರು ಬಂದು ಖಾನನಿಗೆ ರಾಜಗೌರವ ಸಲ್ಲಿಸಿ ಎರಡು ಪತ್ರಗಳನ್ನು ಅರ್ಪಿಸಿದರು. ನವಾಬನೊಡನೆ ಈ ಬಾರಿ ಖಾಸಾಪತ್ರವಾಚಕನು ಬಂದಿಲ್ಲವಾದ್ದರಿಂದ ಪತ್ರದಲ್ಲಿದ್ದ ವಿಷಯವರಿಯಲು, ಪತ್ರವನ್ನೋದುವವರಿಗಾಗಿ ಸುತ್ತಲೂ ದೃಷ್ಟಿಹಾಯಿಸಿದನು. ನವಾಬನ ವೈಭವದ ಮೆರವಣಿಗೆಯನ್ನು ನೋಡುತ್ತಾ ಒಂದು ಮರದಡಿಯಲ್ಲಿ ನಿಂತಿದ್ದ ವೆಂಕಣ್ಣನು ಖಾನನ ದೃಷ್ಟಿಗೆ ಬಿದ್ದನು. ಅವನು ನಿಂತಿದ್ದ ಠೀವಿ, ವರ್ಚಸ್ಸುಗಳನ್ನು ಕಂಡು ಬ್ರಾಹ್ಮಣನೆಂದೂಹಿಸಿ ಅವನನ್ನು ಹತ್ತಿರ ಕರೆಯಿಸಿ ಎರಡು ಪತ್ರಗಳನ್ನಿತ್ತು ಓದುವಂತೆ ಆಜ್ಞಾಪಿಸಿದನು. 

ಓದಲು ಬಾರದ ವೆಂಕಣ್ಣನಿಗೆ ಭಯವಾಯಿತು. ಆದರೂ ಧೈರ್ಯವಾಗಿ “ಖಾವಂದ್, ನನಗೆ ಓದಲು ಬರುವುದಿಲ್ಲ” ಎಂದು ಬಿನ್ನವಿಸಿದನು. ಅದನ್ನು ಕೇಳಿ ನವಾಬನಿಗೆ ಕೋಪ ಉಂಟಾಯಿತು. ನವಾಬನು “ಸುಳ್ಳು ಹೇಳುವಿಯಾ ಬೊಮ್ಮನ್ ! (ಬ್ರಾಹ್ಮಣನೇ) ಬ್ರಾಹ್ಮಣನಾಗಿ ಓದಲು ಬರುವುದಿಲ್ಲವೆಂದು ಸುಳ್ಳು ಹೇಳುವೆಯಾ? ಈಗ ನೀನು ಈ ಪತ್ರಗಳನ್ನು ಓದಿ ಹೇಳದಿದ್ದರೆ ಆನೆಯ ಕಾಲಿಗೆ ಕಟ್ಟಿಸಿ ಎಳೆಸಿ ಬಿಡುತ್ತೇನೆ! ಹೂಂ ಓದು” ಎಂದು ಗರ್ಜಸಿದನು. ವೆಂಕಣ್ಣನಿಗೆ ಮೈ ನಡುಗಹತ್ತಿತ್ತು. ಭಯದಿಂದ ದೀನನಾಗಿ “ಇಲ್ಲ ಜನಾಬ್, ನನಗೆ ಖಂಡಿತ ಓದಲು ಬರುವುದಿಲ್ಲ” ಎಂದು ವಿಜ್ಞಾಪಿಸಿದರೂ ಫಲವಾಗಲಿಲ್ಲ. ನವಾಬನ ಸಿಟ್ಟು ನೆತ್ತಿಗೇರಿತು, “ಬ್ರಾಹ್ಮಣನಾಗಿ ಸುಳ್ಳು ಬೇರೆ ಹೇಳುವಿಯಾ ? ನಾನಾರು ಗೊತ್ತೆ? ಓದಿದರೆ ಬಹುಮಾನ. ಓದದಿದ್ದರೆ ಮರಣ!” ಎಂದು ಆರ್ಭಟಿಸಿದನು. ನವಾಬನ ಮಾತು ಕೇಳಿ ವೆಂಕಣ್ಣನಿಗೆ ದಿಕ್ಕು ತೋಚದಾಯಿತು. ಕಣ್ಣಿನಿಂದ ನೀರು ಹರಿಯುತ್ತಿತ್ತು. ಪ್ರಾಣಾಪಾಯದಲ್ಲಿ ಸಿಲುಕಿದ ಅವನಿಗೆ ಶ್ರೀರಾಘವೇಂದ್ರಗುರುಗಳು “ವೆಂಕಣ್ಣ, ನಿನಗೆ ಸಂಕಟ ಬಂದಾಗ ನಮ್ಮನ್ನು ಸ್ಮರಿಸು, ಆ ಕ್ಷಣದಿಂದ ನೀನು ಅಭಿವೃದ್ಧಿ ಪಡೆದು ಕೀರ್ತಿ ಗಳಿಸುವೆ” ಎಂದು ಅಪ್ಪಣೆಕೊಡಿಸಿದ ಮಾತು ಸ್ಮರಣೆಗೆ ಬಂದಿತು. ಇದೀಗ ತನಗೆ ದೊಡ್ಡ ಸಂಕಟ ಪ್ರಾಪ್ತವಾಗಿದೆ! ಇದರಿಂದ ಗುರುಗಳೇ ತನ್ನನ್ನು ಕಾಪಾಡಬೇಕೆಂದು ಯೋಚಿಸಿದ ವೆಂಕಣ್ಣ, ಮನಸ್ಸಿನಲ್ಲಿಯೇ “ಶ್ರೀರಾಘವೇಂದ್ರ! ಕಾಪಾಡು” ಎಂದು ಪ್ರಾರ್ಥಿಸಿ ಪತ್ರಗಳನ್ನು ಬಿಚ್ಚಿ ಅದರ ಮೇಲೆ ದೃಷ್ಟಿ ಹರಿಸಿದನು, ಅಷ್ಟೇ ಅವನಿಗೆ ಗೊತ್ತು. ವೆಂಕಣ್ಣನು ತನಗರಿಯದಂತೆಯೇ ಗಡಗಡನೆ ಪತ್ರಗಳನ್ನು ಓದಲಾರಂಭಿಸಿದನು! 

ಏನಾಶ್ಚರ್ಯ! ವೆಂಕಣ್ಣ ಸುಸಂಸ ತ ವಿದ್ಯಾವಂತನಂತೆ ಓದಲಾರಂಭಿಸಿದ. ಗಡಗಡನೆ ಓದುತ್ತಿದ್ದವೆಂಕಣ್ಣನ ಗಾಂಭೀರ್ಯ, ಠೀವಿ, ಓದುವ ಕ್ರಮಗಳನ್ನು ಕಂಡು ನವಾಬನು ಮುಗ್ಧನಾದ. ವೆಂಕಣ್ಣನ ಸೌಭಾಗ್ಯದಿಂದ ಅವೆರಡೂ ಪತ್ರಗಳಲ್ಲಿ ಸಂತೋಷದ ವಿಚಾರಗಳೇ ಇದ್ದವು. ಒಂದರಲ್ಲಿ ಶತ್ರುಗಳು ಶರಣಾಗತರಾಗಿ ತಮಗೆ ವಿಜಯವಾದ ವಾರ್ತೆ ಇದ್ದರೆ; ಇನ್ನೊಂದರಲ್ಲಿ ನವಾಬನಿಗೆ ಪುತ್ರೋತ್ಸವವಾದ ಸಂತೋಷ ಸಮಾಚಾರವಿದ್ದಿತು! ಎರಡು ಪತ್ರಗಳ ಸಂತೋಷವಾರ್ತೆಯನ್ನಾಲಿಸಿ ಸಿದ್ದೀಮಸೂದ್ ಖಾನನಿಗೆ ಪರಮಾನಂದವಾಯಿತು. ಮುಗುಳುನಗೆಯಿಂದ ನವಾಬ “ಏನಪ್ಪ, ಇಷ್ಟು ಸೊಗಸಾಗಿ ಓದಲು ಬಂದರೂ ಅನಕ್ಷರಸ್ಥನಂತೆ ನಟಿಸಿದೆಯಲ್ಲ! ಏಕೆ, ನನ್ನನ್ನು ಕಂಡು ಭಯವಾಗಿ ಹಾಗೆ ಹೇಳಿದೆಯಾ?” ಎಂದು ಪ್ರಶ್ನಿಸಿದನು. ಆಗ ವೆಂಕಣ್ಣನಿಗೆ ಶ್ರೀಗುರುರಾಜರು ತನ್ನಲ್ಲಿ ಮಾಡಿದ ಅನುಗ್ರಹದ ಅರಿವಾಯಿತು. ರಾಯರ ಕೃಪಾಕವಚವನ್ನು ತೊಟ್ಟ ವೆಂಕಣ್ಣ ಧೈರ್ಯವಾಗಿ “ಇಲ್ಲ ಹುಜೂರ್ ! ನಿಜವಾಗಿಯೂ ನಾನು ಈವರೆಗೂ ಅನಕ್ಷರಸ್ಥನಾಗಿಯೇ ಇದ್ದೆ! ಆದರೆ, ಖಾದಂದ್ ಮಹಾತ್ಮರಾದ ನನ್ನ ಗುರುಗಳ ಅನುಗ್ರಹದಿಂದ ಈಗ ನಿಮ್ಮೆದುರು ಈ ಪತ್ರಗಳನ್ನೊದತ್ತಿರುವಾಗಲೇ ನಾನು ಓದಬಲ್ಲೆನೆಂಬುದನ್ನು ತಿಳಿದೆನು. ಇದು ಸತ್ಯ” ಎಂದು ಬಿನ್ನವಿಸಿದನು. 

ವಿಸ್ಮಿತನಾದ ನವಾಬ “ಅದೆಂತು ಸಾಧ್ಯ?” ಎಂದೆನಲು ವೆಂಕಣ್ಣನು ತಾನು ಶ್ರೀಗುರುರಾಜರನ್ನು ದರ್ಶನಮಾಡಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದು, ಗುರುಗಳು ಕಾರುಣ್ಯದಿಂದ ತನಗೆ ಆಭಯವಿತ್ತು ಸಂಕಟದ ಕಾಲದಲ್ಲಿ ನಮ್ಮನ್ನು ಸ್ಮರಿಸು ಎಂದು ಆಜ್ಞಾಪಿಸಿದ್ದು, ಈಗ ನವಾಬರು ಪತ್ರ ಓದಲೇಬೇಕೆಂದು ಹೆದರಿಸಿದ್ದು ತಾನು ಸಂಕಟದಲ್ಲಿ ಸಿಕ್ಕಿದ್ದರಿಂದ ಗುರುಗಳನ್ನು ಸ್ಮರಿಸಿದ್ದು, ತನಗೆ ಅರಿವಾಗದಂತೆ ಪತ್ರಗಳನ್ನು ಓದಿದ್ದು-ಎಲ್ಲವಿಚಾರಗಳನ್ನೂ ಹೇಳಿ “ಹುಜೂರ್, ಇದು ನಮ್ಮ ಗುರುಗಳ ಮಹಿಮೆ ಎಂದು ತಿಳಿಸಿದನು. 

ನವಾಬನು ಪರಮಾಶ್ಚರ್ಯಚಕಿತನಾಗಿ ನಿಮ್ಮ ಹಿಂದೂಗಳಲ್ಲಿ ಇಂಥ ಮಹಾತ್ಮರಿರುವುದನ್ನು ಕೇಳಿದ್ದೆ. ಇಂದು ಅದು ನನ್ನ ಅನುಭವಕ್ಕೆ ಬಂದಿತು. ತುಂಬಾ ಸಂತೋಷ! ನೀನು ಎರಡು ಪ್ರಿಯವಾದ ಸಮಾಚಾರವನ್ನು ಓದಿ ಹೇಳಿದ್ದೀಯೆ. ನಿನಗೇನು ಬೇಕು ಕೇಳು, ಕೊಡುತ್ತೇನೆ” ಎಂದನು. ವೆಂಕಣ್ಣನು ನಯ-ವಿನಯಗಳಿಂದ “ಖಾವಂದ್, ತಾವು ಸಂತುಷರಾದದು ನನ್ನ ಪುಣ್ಯ ! ಹೂಜೂರ್ ನಿಮ್ಮ ಪ್ರೀತಿಯೊಂದು ಸಾಕು, ಬೇರೇನೂ ನನಗೆ ಬೇಡ” ಎಂದು ವಿಜ್ಞಾಪಿಸಲು, ನವಾಬನು ವೆಂಕಣ್ಣನ ನಿಸ್ವಾರ್ಥಬುದ್ದಿ, ಭವ್ಯಾಕೃತಿ, ವರ್ಚಸ್ಸು, ವಾಗ್ಲೆ ಭವಗಳಿಂದ ಪ್ರಭಾವಿತನಾದನು. ಅವನಲ್ಲಿ ವಿಶೇಷ ಪ್ರೀತ್ಯಾದರಗಳುಂಟಾದವು. ಸಿದ್ಧಿಮಸೂದ್‌ ಖಾನನು ವೆಂಕಣ್ಣನನ್ನು ತನ್ನ ಜೊತೆಗೆ ಆದವಾನಿಗೆ ಕರೆದುಕೊಂಡು ಹೋಗಿ ಒಂದು ಉದ್ಯೋಗವನ್ನು ಕೊಟ್ಟನು. ಶ್ರೀಗುರುರಾಜರ ಅನುಗ್ರಹದಿಂದ ವೆಂಕಣ್ಣನು ಅಂದಿನಿಂದ ಹತ್ತಾರು ವರ್ಷಕಾಲ ವ್ಯಾಸಂಗಮಾಡಿ ನುರಿತ ವಿದ್ಯಾವಂತನಾದನು. ತನ್ನ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ, ರಾಯರ ಕಾರುಣ್ಯಬಲದಿಂದ ನವಾಬನ ಪ್ರೀತಿವಿಶ್ವಾಸಗಳಿಂದ ಪಾತ್ರನಾದನು. 

ವೆಂಕಣ್ಣನ ಪಾರ್ವಿಕರು, ತಂದೆಯೂ ಸಹ ಉತ್ತಮ ಪ್ರತಿಭಾಶಾಲಿಗಳಾದ ರಾಜಕಾರಣಿಗಳಾಗಿದ್ದರು. ವಂಶಪಾರಂಪರವಾಗಿ ಹರಿದು ಬಂದ ಆ ಎಲ್ಲ ಚಾಣಾಕ್ಷತನ, ರಾಜ್ಯಕಾರ್ಯದೌರೇಯತೆ, ಪ್ರತಿಭಾದಿಗಳು ವೆಂಕಣ್ಣನಲ್ಲಿಯೂ ಸುಪ್ತವಾಗಿದ್ದಿತು. ಅದೀಗ ಶ್ರೀಗುರುರಾಜರ ಕೃಪಾಕಟಾಕ್ಷದಿಂದಲೂ ಅಭಿವಕ್ತವಾಯಿತು! ವೆಂಕಣ್ಣನು ಅತ್ಯಲ್ಪಕಾಲದಲ್ಲೇ ಸಕಲರಾಜತಂತ್ರ, ನೀತಿ ಕ್ಲಿಷ್ಟವಿಚಾರಗಳನ್ನು ಸುಲಭವಾಗಿ ಪರಿಹರಿಸುವ ಸಾಮರ್ಥ್ಯ ಮತ್ತು ಕಾರ ದಕ್ಷತೆಗಳಿಂದ ನವಾಬನಿಗೆ ಪ್ರಿಯವಾದ ರೀತಿಯಲ್ಲಿ ವರ್ತಿಸುತ್ತಾ, ನಿಜವಾಗಿಯೂ ಅವನಿಗೆ ಹಿತಕರವಾದಕಾರಮಾಡುತ್ತಾ, ಸಕಾಲಿಕ ಸಲಹೆಗಳನ್ನು ನೀಡುತ್ತಾ ಎಲ್ಲರಕ್ಕಿಂತ ನವಾಬನಿಗೆ ಅಚ್ಚುಮೆಚ್ಚಾದನು. ನವಾಬನಿಗೆ ವೆಂಕಣ್ಣನ ಕಾವ್ಯದಕ್ಷತೆ, ನಿಷ್ಠೆ, ನಿಸ್ಪೃಹತೆ, ರಾಜಭಕ್ತಿಗಳನ್ನು ಕಂಡು ಪರಮಾನಂದವಾಯಿತು, ವೆಂಕಣ್ಣನು ನವಾಬರ ಖಾಸಾಭಕ್ತಿಯಾಗಿ, ಮುಂದೆ ಕೆಲ ದಿನಗಳಲ್ಲೇ ಆದವಾನಿಯ ದಿವಾನ್ ಪದವಿಗೇರಿದನು! 

ಅನಾಥನಾಗಿದ್ದ ಉಡಾಳ ವೆಂಕಣ್ಣ ಈಗ ಸರ್‌ ದೇಸಾಯಿ ದಿವಾನ್ ವೆಂಕಣ್ಣ ಪಂತನಾದ! ಅಂದಿನಿಂದ ದಿವಾನ್ ವೆಂಕಣ್ಣ ಪಂತನೆಂದು ಖ್ಯಾತನಾಗಿ ನವಾಬರ ಪರಮ ಆಪ್ತನಾದನು. ಅನಾಥನಾಗಿದ್ದ ತನ್ನನ್ನು ದಿವಾನನನ್ನಾಗಿ ಮಾಡಿ ಪೊರೆದ ಶ್ರೀಗುರುರಾಜರ ಕಾರುಣ್ಯವನ್ನು ವೆಂಕಣ್ಣ ಪಂತ ಸರ್ವದಾ ಸ್ಮರಿಸುತ್ತಾ ಆ ಮಹಾನುಭಾವರ ಸೇವೆಮಾಡುವ ಸದವಕಾಶ, ಭಾಗ್ಯ ಯಾವಾಗ ದೊರಕಿತೋ ಎಂದು ಕಾಲ ನಿರೀಕ್ಷಣೆಮಾಡುತ್ತಾ ಆದವಾನಿಯ ದಿವಾನಗಿರಿಯಲ್ಲಿ ಕೀರ್ತಿ-ಪ್ರತಿಷ್ಠೆ, ಅಸದೃಶ ಶ್ರೀಮಂತಿಕೆಗಳನ್ನು ಗಳಿಸಿ ಕಾಲಕಳೆಯಹತ್ತಿದನು. 

ಇತ್ತ ವೆಂಕಣ್ಣನಿಗೆ ಅನುಗ್ರಹಮಾಡಿ ಹೊರಟ ಗುರುರಾಜರು ಸಂಚಾರಕ್ರಮದಿಂದ ಕುಂಭಕೋಣಕ್ಕೆ ದಿಗ್ವಿಜಯಮಾಡಿದರು. ರಾಯರ ಆಗಮನದಿಂದ ಹರ್ಷಭರಿತರಾದ ಕುಂಭಕೋಣದ ನಾಗರಿಕರು ಶ್ರೀಪಾದಂಗಳವರಿಗೆ ವೈಭವದ ಸ್ವಾಗತ ನೀಡಿದರು. ಗುರುರಾಜರು ವಿದ್ಯಾಮಠದಲ್ಲಿ ಎಂದಿನಂತೆ ಪಾಠಪ್ರವಚನ, ವಿದ್ಯಾಪೀಠದ ಮೇಲ್ವಿಚಾರಣೆ, ಲೋಕಕಲ್ಯಾಣ, ಶಿಷ್ಯ-ಭಕ್ತಜನೋದ್ಧಾರ ಕಾರ್ಯಾಸಕ್ತರಾಗಿ ವಿರಾಜಿಸಿದರು.