ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೧೧, ಅಂತ್ಯಜರಾಗಿದ್ದ ಕನಕದಾಸರಿಗೆ ಸದ್ಗತಿ !
ಶ್ರೀರಾಯರು ಪ್ರಾಣದೇವರ ಸನ್ನಿಧಿಯಲ್ಲಿ ಚಾತುರ್ಮಾಸ್ಯವ್ರತ ಸಂಕಲ್ಪಕ್ಕೆ ಕುಳಿತರು. ಮಹಾನುಭಾವರಾದ ಶ್ರೀಗಳವರ ಚಾತುರ್ಮಾಸ್ಯದ ವ್ರತವೆಂದರೆ ಅದೊಂದು ಜ್ಞಾನಸತ್ರವೇ ಆಗಿತ್ತು.
ಒಂದು ದಿನ ಶ್ರೀಗಳವರು ದೇವರ ಗುಡಿಯ ಹೊರಭಾಗದಲ್ಲಿರುವ ಧ್ವಜಸ್ತಂಭದ ಸಮೀಪದಲ್ಲಿ ಕರಮುಗಿದು ವಿನಯದಿಂದ ನಿಂತಿದ್ದ ಅಂತ್ಯಜನೊಬ್ಬನನ್ನು ಕಂಡು ಹೊರಗೆಬಂದರು. ಆ ಅಂತ್ಯಜನು ಗುರುಗಳಿಗೆ ನಿಂತಲ್ಲಿಂದಲೇ ನಮಸ್ಕರಿಸಿ “ಒಡೆಯ” ಎಂದನು. ಅವನನ್ನು ನೋಡಿ ರಾಯರು ಮಂದಹಾಸಬೀರಿ “ಇದೇನೋ ಕನಕ! ನಿನ್ನ ಅವಸ್ಥೆ ಹೀಗೇಕಾಯಿತೋ” ಎಂದು ಪ್ರಶ್ನಿಸಿದರು. ಆಗ ಅಂತ್ಯಜನು ನಿಟ್ಟುಸಿರುಬಿಟ್ಟು ದೀನನಾಗಿ 'ಹೂಂ, ವಿಧಿ! ಇದೆಲ್ಲಾ ನನ್ನ ಪ್ರಭು ಕೇಶವನ ಲೀಲೆ ವ್ಯಾಸಪ್ಪ ! ಅಂದು ನೀವು 'ನೀನೂ ಮತ್ತೆ ಹುಟ್ಟಿಬರಬೇಕು, ಬಿಟ್ಟಿದ್ದಲ್ಲ! ಆಗಲೇ ನಿನಗೆ ಸದ್ಗತಿ' ಎಂದು ಹೇಳಿದ್ದನ್ನು ಮರೆತುಬಿಟ್ಟಿರಾ ನನ್ನೊಡೆಯಾ ? ಇಕೋ ಕೇಶವನ ಸಂಕಲ್ಪ, ನಿಮ್ಮ ಅಪ್ಪಣೆಯಂತೆ ಬಂದಿದ್ದೇನೆ ! ಸಾಕಪ್ಪ, ಈ ಭವದ ಜಂಜಾಟ. ಗುರುದೇವ ಈಗ ನೀವೇ ನನಗೊಂದು ದಾರಿತೋರಿ ಸದ್ಗತಿ ದೊರಕಿಸಿಕೊಟ್ಟು ಉದ್ಧಾರಮಾಡಬೇಕು” ಎಂದು ಪ್ರಾರ್ಥಿಸಿದ. ಶ್ರೀರಾಯರು “ಆಗಲಿ ಕನಕ! ಹಿಂದಿನ ಸಂಬಂಧವನ್ನು ಮರೆಯಲು ಸಾಧ್ಯವೇ! ನೋಡು, ಶ್ರೀಮೂಲರಾಮದೇವರಿಗೆ ನಾಳೆ ಏನಾದರೂ ಕಾಣಿಕೆ ತಂದು ಸಮರ್ಪಿಸು. ಮೂಲರಘುಪತಿಯು ನಿನ್ನ ಅಭಿಲಾಷೆಯನ್ನು ಖಂಡಿತ ಪೂರೈಸುವನು” ಎಂದು ಕರುಣಾದ್ರ್ರ ಹೃದಯರಾಗಿ ಅಪ್ಪಣೆಮಾಡಿದರು.
ಹಿಂದೆ ಕನಕದಾಸರಾಗಿದ್ದವರೇ ಈಗ ಅಂತ್ಯಜರಾಗಿ ಜನಿಸಿದ್ದರು. ಶ್ರೀಗುರುರಾಜರು ಹಿಂದೆ ವ್ಯಾಸರಾಜರಾಗಿ ಅವತರಿಸಿದಾಗ ಕನಕದಾಸರಲ್ಲಿ ಅಪಾರ ವಾತ್ಸಲ್ಯ ಮಾಡುತ್ತಿದ್ದರು. ಮುಂದೆ ತಾವು ತಮ್ಮ ಕೊನೆಯ ಅವತಾರ ತಾಳಿದಾಗ ಕನಕದಾಸರೂ ಜನಿಸಿ ತಮ್ಮ ಸೇವೆ ಮಾಡಬೇಕೆಂದು ಆಜ್ಞಾಪಿಸಿದರು. ಅದನ್ನು ಬಲ್ಲವರಾಗಿದ್ದರಿಂದಲೇ ದೈವಸಂಕಲ್ಪದಂತೆ ಅಂತ್ಯಜರಾಗಿ ಹುಟ್ಟಿಬಂದಿರುವ ಅವರಲ್ಲಿ ಶ್ರೀಗುರುರಾಜರು ಅನುಗ್ರಹೋನ್ಮುಖರಾದರು. ಇನ್ನೇನು ಗುರ್ವನುಗ್ರಹವಾಯಿತು, ತನಗೆ ಸದ್ಧತಿಯಾಗುವುದರಲ್ಲಿ ಸಂದೇಹವಿಲ್ಲವೆಂದು ಹರ್ಷಿಸಿ ಆ ಅಂತ್ಯಜನು 'ಸರಿ, ವ್ಯಾಸಪ್ಪಾ' ಎಂದರುಹಿ ನಮಸ್ಕರಿಸಿ ತೆರಳಿದನು.
ಮರುದಿನ ಸುಜನರಿಗೆ ಒಡೆಯರೂ, ಪತಿತಪಾವನರೂ, ಕರುಣಾಸಮುದ್ರರೂ ಆದ ರಾಯರು ಅಂತ್ಯಜನ ಆಗಮನವನ್ನೇ ನಿರೀಕ್ಷಿಸುತ್ತಾ ಧ್ವಜಸ್ತಂಭದ ಬಳಿ ನಿಂತಿರುವಾಗ, ಅಂತ್ಯಜನು ಬಂದು ಸ್ವಲ್ಪ ಸಾಸುವೆಯನ್ನು ಒಂದು ಪೊಟ್ಟಣದಲ್ಲಿ ಕಟ್ಟಿ ಗುರುಗಳಿಗೆ ಸ್ವಲ್ಪ ದೂರದಲ್ಲಿ ಮುಂದಿಟ್ಟು, ಭಯ-ಭಕ್ತಿಗಳಿಂದ ಸಾಷ್ಟಾಂಗವೆರಗಿದನು. ಗುರುರಾಜರು ನಸುನಗುತ್ತಾ ಅಂತ್ಯಜನು ಆದರದಿಂದ ಸಮರ್ಪಿಸಿದ ಸಾಸುವೆಯನ್ನು ಸ್ವೀಕರಿಸಿ ಆಶೀರ್ವದಿಸಿದರು. ಶ್ರೀಮಠದ ಪಾರುಪತ್ತೇದಾರರನ್ನು ಕರೆದು ಆ ಸಾಸುವೆಯನ್ನು ಅಂದಿನ ಅಡಿಗೆಗೆ ಉಪಯೋಗಿಸುವಂತೆ ಆಜ್ಞಾಪಿಸಿದರು.
ಪಾರುಪತ್ತೇದಾರರು ಚಾತುರ್ಮಾಸ್ಯವ್ರತಕಾಲದಲ್ಲಿ ಸಾಸುವೆಯನ್ನು ಅಡಿಗೆಗೆ ಬಳಸುವುದು ನಿಷಿದ್ದವೆಂದು ತಿಳಿದಿದ್ದರಿಂದ - ಆ ವಿಚಾರವಾಗಿ ಗುರುಗಳನ್ನು ಪ್ರಶ್ನಿಸಲು ಧೈರ್ಯವೂ ಇಲ್ಲದೆ ಸಂದಿಗ್ಧಮನಸ್ಕರಾಗಿ ಹಾಗೆಯೇ ನಿಂತರು. ಅವರ ಮನದ ತಾಕಲಾಟ ಗುರುಗಳಿಗೆ ಅರಿವಾಯಿತು. ಶ್ರೀಯವರು ನಗುತ್ತಾ “ಪಾರುಪತ್ತೇದಾರರೇ ಸಾಸುವೆಯು ಹೋಮದ್ರವ್ಯ! ಧಾರಾಳವಾಗಿ ನೀವು ಸಾಸುವೆಯನ್ನು ಅಡಿಗೆಗೆ ಉಪಯೋಗಿಸಲು ವ್ಯವಸ್ಥೆಮಾಡಬಹುದು. ಅದರಲ್ಲಿ ಯಾವ ದೋಷವೂ ಇಲ್ಲ. ಶ್ರೀಹರಿವಾಯುಗಳು ಅದನ್ನು ಸ್ವೀಕರಿಸುತ್ತಾರೆ! ಈದಿನ ಮಾತ್ರವಲ್ಲ; ಮುಂದೆಯೂ ಈ ವ್ರತಕಾಲದಲ್ಲಿ ಸಾಸುವೆಯನ್ನು ಸರ್ವದಾ ಉಪಯೋಗಿಸತಕ್ಕದ್ದು ! ಇದು ಮೂಲರಾಮನ ಚಿತ್ರ !” ಎಂದು ಆದೇಶ ನೀಡಿದರು. ರಾಯರ ಆಜ್ಞೆಯಂತೆ ಅಂದಿನ ಅಡಿಗೆಗೆ ಸಾಸುವೆಯನ್ನು ಬಳಸಲಾಯಿತು, ಶ್ರೀಮೂಲರಾಮದೇವರ ಪೂಜಾರಾಧನೆ, ನೈವೇದ್ಯ, ಹಸ್ತೋದಕ-ತೀರ್ಥಪ್ರಸಾದ ವಿತರಣ, ಭಿಕ್ಷಾಸ್ವೀಕಾರಾದಿಗಳು ಪೂರೈಸಿದ ಮೇಲೆ ಶ್ರೀಗಳವರು ಪಾರುಪತ್ತೇದಾರರ ಮೂಲಕ ಪ್ರಿಯಭಕ್ತನಾದ ಅಂತ್ಯಜನಿಗೆ ತೀರ್ಥಪ್ರಸಾದ, ಫಲಮಂತ್ರಾಕ್ಷತೆ, ಶ್ರೀಭಗವನ್ನಿವೇದಿತ ಪ್ರಸಾದಗಳನ್ನು ಕಳುಹಿಸಿದರು. ಅಂತ್ಯಜನು ತೀರ್ಥ-ಪ್ರಸಾದಗಳನ್ನು ಸ್ವೀಕರಿಸಿ ಧ್ವಜಸ್ತಂಭದ ಬಳಿ ಬಂದು ನಿಂತ.
ಶ್ರೀರಾಯರು ಹೊರಬಂದು “ಶ್ರೀಹರಿಗುರು ಪ್ರಸಾದವನ್ನು ಸ್ವೀಕರಿಸಿದ ನೀನು ಧನ್ಯನಾದೆ. ನಿನ್ನ 'ರ್ಮಗಳೆಲ್ಲಾ ತೀರಿದವು. ಶ್ರೀಹರಿಯ ಪಾದಸ್ಮರಣೆಯನ್ನು ಮಾಡುತ್ತಾ ತನುವನೀಗಯ್ಯಾ, ಕನಕ! ನಿನಗೆ ಸದ್ಧತಿಯಾಗುವುದು, ಸಂದೇಹವಿಲ್ಲ!” ಎಂದು ಅಪ್ಪಣೆಕೊಡಿಸಿದರು. ಅಂತ್ಯಜನು ಆನಂದಬಾಷ್ಪಸುರಿಸುತ್ತಾರಾಯರಿಗೆ ನಿಂತಲ್ಲಿಯೇ ಮತ್ತೆ ಮತ್ತೆ ನಮಿಸಿ “ಧನ್ಯನಾದೆ, ಗುರುದೇವ” ಎಂದು ಗುರುರಾಜರ ಪರಮಪಾವನ ಸ್ವರೂಪವನ್ನು ಮನದಣಿಯ ನೋಡುತ್ತಾ, ಹರಿಧ್ಯಾನಮಾಡುತ್ತಾತನುವನ್ನು ತ್ಯಜಿಸಿದನು. ಶ್ರೀಹರಿವಾಯು-ಗುರುಗಳ ಅನುಗ್ರಹದಿಂದ ಮರುಕ್ಷಣದಲ್ಲಿ ಅಂತ್ಯಜನು ದೇವವಿಮಾನದಲ್ಲಿ ವೈಕುಂಠಪುರಿಗೆ ತೆರಳಿದನು! ಈ ವಿಚಿತ್ರವನ್ನು ನೋಡುತ್ತಾ ಜನರು ನಿಂತಿರುವಾಗ ಆಕಾಶದಲ್ಲಿ ಘಂಟಾನಿನಾದವಾಯಿತು! ಅದನ್ನಾಲಿಸಿ ಸಕಲರೂ ವಿಸ್ಮಿತರಾಗಿ ವೆಂಕಣ್ಣನ ಪ್ರಸಂಗವನ್ನು ನೆನೆಯುತ್ತಾ ಅಂತ್ಯಜನಾಗಿದ್ದ ಕನಕದಾಸರ ಭಾಗ್ಯವನ್ನೂ, ಗುರುರಾಜರ ತಪಃಶಕ್ತಿ, ಕಾರುಣ್ಯ, ಭಕ್ತ ವಾತ್ಸಲ್ಯಗಳನ್ನೂ ಕೊಂಡಾಡಿ, ಅಂತ್ಯಜನಿಗೆ ಸದ್ಧತಿಕೊಡಿಸಿದ ಮಹಾತ್ಮರೆಂದು ರಾಯರ ಗುಣಗಾನ ಮಾಡಿದರು.