ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೧೦. ಮಂತ್ರಶಕ್ತಿಯ ಪ್ರಭಾವ
ಶ್ರೀರಾಯರು ಮಹಾಮಹಿಮರೆಂದು ಎಲ್ಲಕಡೆ ಶ್ರೀಯವರ ಕೀರ್ತಿ ಬೆಳಗತೊಡಗಿತು, ಇದರಿಂದಾಗಿ ಸ್ವಾಮಿಗಳಿಗೆ ಇರದಿದ್ದರೂ, ಅನಿವಾರವಾಗಿ ಹಲ ಕೆಲಸಂದರ್ಭಗಳಲ್ಲಿ, ತಮಗೆ ಸಿದ್ದಿಸಿದ್ದ ಮಂತ್ರಶಕ್ತಿ, ಯೋಗಶಕ್ತಿಗಳನ್ನು ತೋರಬೇಕಾಗುತ್ತಿತ್ತು. ಪೂರ್ವಾಶ್ರಮದಲ್ಲಿಯೇ ಅವರಿಗೆ ಮಂತ್ರಸಿದ್ಧಿಯಾಗಿದ್ದು, ಒಮ್ಮೆ ಅದನ್ನು ಪ್ರದರ್ಶಿಸಿ ಭೂಸುರರ ತಾಪಪರಿಹಾರಮಾಡಿದ್ದರು. ಆಗಲೇ ಅವರು ಭಗವದನುಗ್ರಹದಿಂದ ದೊರೆತ ಸಿದ್ದಿಯನ್ನು ಸ್ವಾರ್ಥಕ್ಕೆ ವಿನಿಯೋಗಿಸಬಾರದು - ಎಂದು ಸಂಕಲ್ಪಿಸಿದರು. ಆದರೂ ಅದನ್ನು ತೋರಬೇಕಾಗಿ ಬಂದ ಸಂದರ್ಭಗಳು ಅನೇಕ. ಗುರುಗಳು ಪರಮಾತ್ಮನ ಅಸ್ತಿತ್ವ, ಅವನ ಅಚಿಂತ್ಯಾದ್ಭುತ ಶಕ್ತಿ, ವೇದಗಳ ಮಹತ್ವ, ಸನಾತನಧರ್ಮ, ಯೋಗಶಕ್ತಿಗಳ ಹಿರಿಮೆಗಳನ್ನು ಎತ್ತಿ ತೋರಿ ಜನರಲ್ಲಿ ದೇವರು ಧರ್ಮಗಳಲ್ಲಿ ನಂಬಿಕೆಯನ್ನು ಒಡಮೂಡಿಸಲು ವೈದಿಕ ಮತದ ಗೌರವವನ್ನು ಕಾಪಾಡಲೂ, ತಮ್ಮ ಮಹಿಮೆಯನ್ನು ಬೀರಬೇಕಾಗಿಬರುತ್ತಿತ್ತು. ಭಗವಂತನ ಸಾಕ್ಷಾತ್ಕಾರ ಪಡೆದ ಶ್ರೀಯವರಿಗೆ ಈ ಮಹಿಮಾಪ್ರದರ್ಶನ ಒಂದು ಮಹತ್ಕಾರವಾಗಿರಲಿಲ್ಲ. ಇಂತಹ ಒಂದು ಪ್ರಸಂಗವು ಹುಬ್ಬಳ್ಳಿಯಿಂದ ಹೊರಡುವಾಗ ಅವರಿಗೆ ಸವಾಲಿನಂತೆ ಬಂದೊದಗಿತು.
ಶ್ರೀಸ್ವಾಮಿಗಳು ಮುಂದೆ ಸಂಚಾರ ಹೊರಡಲು ಸಿದ್ಧರಾದಾಗ ಸಿರಸಂಗಿಯಿಂದ ಕೆಲಬ್ರಾಹ್ಮಣರು ಬಂದು ರಾಯರದರ್ಶನ ಮಾಡಿದರು. ಕುಶಲಪ್ರಶ್ನೆಯಾದ ಮೇಲೆ ಆ ಬ್ರಾಹ್ಮಣರ ಮುಖಂಡರು - “ಮಹಾಸ್ವಾಮಿ. ಈಗ ವೇದಮಂತ್ರದ ಇರುವಿಕೆ - ಅಳಿಯುವಿಕೆಯ ಪ್ರಶ್ನೆಯೊಂದು ಒಂದೊದಗಿದೆ. ನಮ್ಮದು 'ಶಿರಸಂಗಿ ಗ್ರಾಮ. ಅಲ್ಲಿನ ಈಗಿನ ಜಹಗೀರಿದಾರರ ಮುತ್ತಾತಂದಿರು ಬಹಳ ಧಾರ್ಮಿಕರೂ, ಉದಾರಿಗಳೂ ಆಗಿದ್ದರು, ಅವರು ವೀರಶೈವರಾದರೂ ಬ್ರಾಹ್ಮಣ-ವೀರಶೈವ ಎರಡು ಮತದವರನ್ನೂ ಗೌರವದಿಂದ ಕಾಣುತ್ತಿದ್ದರು. ಮಾತ್ರವಲ್ಲ: ಹತ್ತಾರು ಜನ ಭೂಸುರರಿಗೆ ಭೂದಾನಮಾಡಿ ವಂಶಪಾರಂಪರವಾಗಿ ಅದನ್ನು ಅನುಭವಿಸುತ್ತಾ ತಮ್ಮ ವಂಶದ ಶ್ರೇಯಃಪ್ರಾರ್ಥನೆ ಮಾಡಿಕೊಂಡು ಬರುವಂತೆ ಕೋರಿದ್ದರು. ಅದರಂತೆ ಈವರೆಗೂ ನಡೆದುಬಂದಿತ್ತು. ಈಗ ಶಿರಸಂಗಿ ಜಹಗೀರುದಾರರು ತಮ್ಮ ಪೂರ್ವಿಕರು ಕೊಟ್ಟಿದ್ದ ಜಮೀನುಗಳನ್ನು ಕಸಿದುಕೊಂಡು ನಮಗೆ ಜೀವನಕ್ಕೆ ತೊಂದರೆಯನ್ನುಂಟುಮಾಡಿದ್ದಾರೆ.
ದೇಶಾಯರಿಗೆ ವೇದಗಳಲ್ಲಿ, ಮಂತ್ರ-ಶಾಸ್ತ್ರಗಳಲ್ಲಿ ನಂಬಿಕೆಯಿಲ್ಲ. ಅವೆಲ್ಲ ಜೀವನೋಪಾಯಕ್ಕಾಗಿ ಬ್ರಾಹ್ಮಣರು ಕಲ್ಪಿಸಿ ಬರೆದ ಗ್ರಂಥಗಳೆಂದೂ, ಅವು ಸತ್ಯವೇ ಆಗಿದ್ದಲ್ಲಿ, ಅದನ್ನು ತೋರಿಸಿಕೊಡಬೇಕೆಂದೂ, ತಮಗೆ ನಂಬಿಕೆಯುಂಟಾದಲ್ಲಿ ಜಮೀನುಗಳನ್ನು ವಾಪಸ್ಸು ಕೊಡುವುದಾಗಿ ಹೇಳುತ್ತಿದ್ದಾರೆ. ನೀವೇ ನಮಗೀಗ ರಕ್ಷಕರೆಂದು ನಂಬಿ ನಿಮಗೆ ಶರಣಾಗಿದ್ದೇವೆ. ತಾವು ನಮ್ಮ ಜಮೀನುಗಳು ಮತ್ತೆ ದೊರಕುವಂತೆ ಮಾಡಿ ಕಾಪಾಡಬೇಕು” ಎಂದು ಪ್ರಾರ್ಥಿಸಿದರು.
ಬ್ರಾಹ್ಮಣರ ಗೋಳು ಕೇಳಿ ಗುರುಗಳ ಮನಸ್ಸು ಕರಗಿತು. ಅವರನ್ನು ಸಮಾಧಾನ ಪಡಿಸುತ್ತಾ ನಿಮ್ಮ ಕೋರಿಕೆಯನ್ನು ಪೂರೈಸಲು ಪರಮಾತ್ಮ ಸಮರ್ಥನಿದ್ದಾನೆ. ಚಿಂತಿಸಬೇಡಿ, ನಾವು ದೇಶಾಯರನ್ನು ಕಂಡು ಮಾತನಾಡುತ್ತೇವೆ” ಎಂದು ಅಭಯವಿತ್ತು ಭೂಸುರರನ್ನು ಕಳಿಸಿಕೊಟ್ಟು ನವಿಲುಗುಂದಕ್ಕೆ ಕೆಲ ಪರಿವಾರದೊಡನೆ ದಯಮಾಡಿಸಿ, ಅಲ್ಲಿದ್ದ ದೇವರ ಗುಡಿಯಲ್ಲಿ ಮುಕ್ಕಾಮು ಮಾಡಿದರು.
ಶ್ರೀಯವರು ಬಂದೊಡನೆ ದೇಶಾಯಿಯ ಮನೆಗೆ ಮೇನೆಯಲ್ಲಿ ಮಂಡಿಸಿ ಹೊರಟರು. ಗುರುಗಳು ತಮ್ಮ ಮನೆಗೇ ಬರುತ್ತಿರುವುದನ್ನು ಕೇಳಿ ಕೌತುಕದಿಂದ ದೇಶಾಯಿಯು ನಾಲ್ಕಾರು ಜನ ಆತ್ಮೀಯರೊಡನೆ ಮನೆಯ ಹೊರಗೆ ಬಂದು ನಿಂತ. ಮೇನೆಯಿಂದಿಳಿದು ಬಂದ ಶ್ರೀರಾಯರು “ಶಿರಸಂಗಿಯ ದೇಶಾಯಿಗಳಾರು ? ನಾವು ಅವರನ್ನು ಕಾಣಬೇಕಾಗಿದೆ” ಎಂದು ಹೇಳಿದಾಗ ದೇಶಾಯಿ ಮುಂದೆ ಬಂದು ಗುರುಗಳಿಗೆ ಕರಮುಗಿದು “ನಾನೇ ಶರಸಂಗಿಯ ದೇಶಾಯಿ, ನನ್ನಿಂದ ತಮಗೇನಾಗಬೇಕು? ಎಂದು ಪ್ರಶ್ನಿಸಿದ. ರಾಯರು ಎಳೆನಗೆಯನ್ನು ಬೀರಿ ದೇಶಾಯರೇ, ನಿಮ್ಮಿಂದ ನಮಗೇನೂ ಆಗಬೇಕಾಗಿಲ್ಲ! ಆದರೆ ಕೆಲ ಭೂಸರಿಗಾಗಿರುವ ಅನ್ಯಾಯವನ್ನು ತಿಳಿಸಿ ಅವರಿಗೆ ಅನುಕೂಲಮಾಡಿ ಕೊಡಲು ಬಂದಿದ್ದೇವೆ” ಎಂದರು.
ದೇಶಾಯಿ : (ನಗುತ್ತಾ) ಓಹೋ, ಈವೂರಿನ ಹಾರವರ ಪರವಾಗಿ ಮಾತಾಡಲು ಬಂದಿದ್ದೀರಾ ? ಸರಿ ಸರಿ. ಹೊಟ್ಟೆಪಾಡಿಗಾಗಿ ಸುಳ್ಳು ಮಂತ್ರಗಳನ್ನು ಹೇಳಿ ಕಾಲಕಳೆಯುವ ಅವರ ಮಾತು ಕೇಳಿ ನಿಮ್ಮಂಥ ದೊಡ್ಡ ಮಠಾಧಿಪತಿಗಳು ಬಂದಿರುವುದು ಆಶ್ಚರ್ಯ ! ವಿಚಾರವೇನು ಹೇಳಿರಿ.
ಶ್ರೀಗಳವರು : ದೇಶಾಯಿಗಳೇ ನಿಮ್ಮನ್ನು ನೋಡಿದರೆ ಧಾರ್ಮಿಕರಂತೆ ಕಾಣುವಿರಿ. ದೇವರಲ್ಲೂ ಶ್ರದ್ಧೆಯಿರುವಂತಿದೆ. ನಿಮ್ಮಂಥವರು, ನಿಮ್ಮ ಪೂರ್ವಜರು ದಾನಮಾಡಿದ ಭೂಮಿಯನ್ನು ಕಸಿದುಕೊಂಡು, ನಿಮ್ಮ ಆಶ್ರಯದಲ್ಲಿ ಜೀವಿಸುತ್ತಿದ್ದ ಬ್ರಾಹ್ಮಣರಿಗೆ ತೊಂದರೆ ಕೊಡುವುದು ಯುಕ್ತವೇ ? ಜಮೀನು ಕಿತ್ತುಕೊಂಡದ್ದರಿಂದ ನಿಮಗೆ ದತ್ತಾಪಹಾರ ದೋಷ ಬರುವುದಿಲ್ಲವೇ ? ನೋಡಿ, ದೇಶಾಯಿಗಳೇ, “ಸ್ಟೇ ಸ್ಟೇ ಕರ್ಮಣ್ಯಭರತಃ ಸಂಸಿದ್ಧಿಂ ಲಭತೇ ನರಃ” ಎಂದು ಶ್ರೀಕೃಷ್ಣನು ಉಪದೇಶಿಸಿದ್ದಾನೆ. ಅದು ಸಾರ್ವಕಾಲಕವಾಗಿ ಎಲ್ಲರಿಗೂ ಅನ್ವಯಿಸುವ ಹಿತೋಕ್ತಿ! ನಿಮ್ಮ ಪೂರ್ವಿಕರು ಅದನ್ನು ಚೆನ್ನಾಗಿ ಅರಿತು ಅನುಷ್ಠಾನಮಾಡುತ್ತಿದ್ದುದರಿಂದಲೇ ಅವರು ಬ್ರಾಹ್ಮಣ-ವೀರಶೈವ ಎಂಬ ಭೇದವಿಡದೆ ಎರಡು ಪಂಗಡಗಳನ್ನೂ ಸಮಾನವಾಗಿ ಕಂಡು, ಧರ್ಮದಿಂದ ಬಾಳುತ್ತಿದ್ದರು. ಅದೇ ಸರಿಯಾದ ಮಾರ್ಗ. ಯಾವ ಧರ್ಮದವರೇ ಆಗಲಿ, ತಮ್ಮ ತಮ್ಮ ಧರ್ಮದಂತೆ ನಡೆದು ಪರಸ್ಪರ ಸ್ನೇಹದಿಂದ ವರ್ತಿಸುತ್ತ, ಒಗ್ಗಟ್ಟಿನಿಂದಿರಬೇಕು. ಆಗ ರಾಷ್ಟ್ರಕ್ಕೆ ಯಾವ ಭಯವೂ ಇರುವುದಿಲ್ಲ. ಜಾತೀಯ ಕಲಹ, ದ್ವೇಷ ಅಸೂಯೆಗಳು ಬೆಳೆದಲ್ಲಿ ದೇಶದಲ್ಲಿ ಕ್ರಾಂತಿಯುಂಟಾಗಿ, ಅದರಿಂದ ಸಮಗ್ರ ರಾಷ್ಟ್ರಕ್ಕೆ ಹಾನಿಯಾಗುವುದು. ಕೆಲ ಅಸೂಯಾಪರರು ಚಾಡೀ ಹೇಳಿ ಜಾತಿದ್ವೇಷದ ಹೊಗೆಯೆಬ್ಬಿಸಿದ್ದಾರೆಂದು ನಾವು ಭಾವಿಸುತ್ತೇವೆ. ಇದು ಶ್ರೇಯಸ್ಕರವಲ್ಲ. ನೀವು ನಿಮ್ಮ ಪೂರ್ವಿಕರ ಮೇಲ್ಪಂಕ್ತಿಯನ್ನು ಅನುಸರಿಸಿ, ಧರ್ಮದಿಂದ ನಡೆದು ಶ್ರೇಯೋವಂತರಾಗಬೇಕೆಂದು ನಾವು ಬಯಸುತ್ತೇವೆ. ನೀವು ನ್ಯಾಯದಿಂದ ವರ್ತಿಸಿ ಕೀರ್ತಿ ಪಡೆಯಿರಿ” ಎಂದು ಉಪದೇಶಿಸಿದರು.
ದೇಶಾಯಿ : (ನಕ್ಕು) ನಾನು ನ್ಯಾಯದಿಂದಲೇ ವರ್ತಿಸಿದ್ದೇನೆ ಸ್ವಾಮಿ! ವೇದ-ಮಂತ್ರಗಳು, ಇವೆಲ್ಲಾ ಕಟ್ಟುಕಥೆ! ಅದರಲ್ಲಿ ಸತ್ವವಿಲ್ಲ, ಸತ್ಯವಿಲ್ಲ! ಮೈಗಳ್ಳರಿಗೆ ಅವೊಂದು ಜೀವನಸಾಧನ. ಅವು ಮಹತ್ವಪೂರ್ಣವಾಗಿದ್ದಲ್ಲಿ ಅದನ್ನು ತೋರಿಕೊಡಲು ಅವರಿಗೆ ಅವಕಾಶವನ್ನೂ ಕೊಟ್ಟೆ ! ಆದರೆ ನಿಮ್ಮ ವೇದಗಳಲ್ಲಿ ಮಹತ್ವವಿಲ್ಲದ್ದರಿಂದಲೋ, ಆ ಬ್ರಾಹ್ಮಣರಿಗೆ ಯೋಗ್ಯತೆ ಇಲ್ಲದ್ದರಿಂದಲೋ ನಾನು ಕಾಣೆ. ಅವರದಕ್ಕೆ ಸಮ್ಮತಿಸಲಿಲ್ಲ. ಇಲ್ಲಿ ಜಾತೀಯ ಪ್ರಶ್ನೆಯೇ ಏಳುವುದಿಲ್ಲ. ಇದರಲ್ಲಿ ನನ್ನ ತಪ್ಪೇನಿದೆ ?
ಶ್ರೀಗಳವರು : ದೇಶಾಯಿಗಳೇ, ದೇವರು, ವೇದಶಾಸ್ತ್ರಗಳು ಸುಳ್ಳಲ್ಲ. ಅವೆಲ್ಲ ಸತ್ಯವೇ. ಅದನ್ನ ಪರೀಕ್ಷಿಸಹೋಗುವುದು ಸರಿಯಲ್ಲ.
ದೇಶಾಯಿ : ಸ್ವಾಮಿಗಳೇ, ಬರೀ ಮಾತಿಗೆ ನಾನೊಪ್ಪಲಾರೆ. ಆ ಬ್ರಾಹ್ಮಣರು ಬೇಡ. ಅವರ ಪರವಾಗಿ ನೀವಾದರೂ ನಿಮ್ಮ ಮಾತಿನ ಸತ್ಯತೆಯನ್ನು ಸಿದ್ಧಪಡಿಸುವಿರಾ?
ಶ್ರೀಗಳವರು : (ನಸುನಕ್ಕು) ದೇವರ ದಯವಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಿಲ್ಲ !
ದೇಶಾಯಿ : ಸಂತೋಷ ಸ್ವಾಮಿ, ದೇವರ ಅನುಗ್ರಹ ನಿಮ್ಮಲ್ಲಿ ಇದೆ ಎಂದು ತೋರಿಸಿಕೊಡಬಲ್ಲಿರಾ?
ಶ್ರೀಗಳವರು : (ಗಂಭೀರರಾಗಿ) ಅವಶ್ಯವಾಗಿ ! ಹೇಳಿ ನಿಮ್ಮನ್ನು ನಂಬಿಸಲು ನಾವಾವ ಪರೀಕ್ಷೆಗೆ ಒಳಗಾಗಬೇಕು ?
ದೇಶಾಯಿ : ಸ್ವಾಮಿ, ನಿಮ್ಮ ವೇದ-ಮಂತ್ರಗಳೆಲ್ಲವೂ ಸತ್ಯವಾಗಿದ್ದರೆ, (ಅಲ್ಲಿಯೇ ಬಿದ್ದಿದ್ದ ಒಂದು ವನಕೆಯನ್ನು ತೋರಿ) ಈ ವನಕೆಯನ್ನು ನಿಮ್ಮ ಮಂತ್ರಶಕ್ತಿಯಿಂದ ಚಿಗುರಿಸಿ ನೋಡೋಣ ! ನೀವೀ ಕಾರ ಮಾಡಿದರೆ ಆ ಬ್ರಾಹ್ಮಣರ ಜಮೀನುಗಳನ್ನು ಅವರಿಗೆ ಪುನಃ ಕೊಡುತ್ತೇನೆ!
ಶ್ರೀಗಳವರು : ಇದೇನಂತಹ ಮಹತ್ವದ ಕಾರವಲ್ಲ, ನಿಮ್ಮ ಇಚ್ಛೆಪೂರೈಸಲು ದೇವರು ಸಮರ್ಥನಿದ್ದಾನೆ. ನಾವು ಈ ಗ್ರಾಮದ ದೇವರ ಗುಡಿಯಲ್ಲಿ ಇಳಿದಿದ್ದೇವೆ. ಈ ವನಕೆಯನ್ನು ನಿಮ್ಮ ನಂಬಿಕೆಯ ನಾಲ್ಕು ಜನರೊಡನೆ ಅಲ್ಲಿಗೆ ಕಳಿಸಿರಿ. ನಮಗೆ ಒಂದು ವಾರದ ಗಡುವು ಕೊಡಿ. ಅಲ್ಲಿಯವರೆಗೆ ನಿಮ್ಮವರೇ ಈ ವನಕೆಯನ್ನು ಕಾಯುತ್ತಿರಲಿ. ನಿಮ್ಮಿಚ್ಛೆ ಪೂರ್ಣವಾಗುವುದು !
ಹೀಗೆ ಹೇಳಿ ಗುರುಗಳು ಮೇನೆಯಲ್ಲಿ ಕುಳಿತು ದೇವರ ಗುಡಿಗೆ ಬಂದರು. ಶ್ರೀಯವರ ಗಾಂಭೀರ್ಯ, ತೇಜಸ್ಸು, ಮಾತಿನ ವೈಖರಿ, ಸೈರಗಳನ್ನು ಕಂಡು ದೇಶಾಯಿ ಬೆರಗಾದ. ಇವರು ದೊಡ್ಡವರೆಂಬ ಭಾವನೆ ಅವನ ಮನದಲ್ಲಿ ಒಡಮೂಡಿತು. ಅವರನ್ನು ಪರೀಕ್ಷಿಸಲು ಯತ್ನಿಸಬಾರದಾಗಿತ್ತೆಂದು ತೋರಿದರೂ, ಹಟಕ್ಕೆ ಬಿದ್ದ ದೇಶಾಯಿ ತನ್ನ ಅಂತರಂಗದ ನಾಲ್ವರು ಸೇವಕರಿಗೆ ವನಕೆಯನ್ನಿತ್ತು ಹಗಲು-ರಾತ್ರಿ ಏಳು ದಿನ ಕಾಯುತ್ತಿರಬೇಕೆಂದು ಹೇಳಿ ಗುರುಗಳ ಕಡೆಗೆ ಕಳಿಸಿದನು.
ರಾಯರು ದೇಶಾಯಿಯ ಸವಾಲನ್ನು ಸ್ವೀಕರಿಸಿ ವೇದಮಂತ್ರಗಳ ಮಹತ್ವವನ್ನು ತೋರಲು ಒಂದು ವನಕೆಯನ್ನು ಏಳು ದಿನಗಳಲ್ಲಿ ಚಿಗುರಿಸುವರಂತೆ ! ಎಂಬ ವಾರ್ತೆ ಹಬ್ಬಿ ನೂರಾರು ಜನರು ಕುತೂಹಲದಿಂದ ಗುಡಿಯ ಹತ್ತಿರ ಬಂದು ಸೇರಿದರು. ಶ್ರೀರಾಯರು ಸ್ನಾನಾಕ-ದೇವಪೂಜಾದಿಗಳನ್ನು ಮಾಡಿ ದೇವರ ತೀರ್ಥವನ್ನು ಕಮಂಡಲುವಿನಲ್ಲಿ ತುಂಬಿ ಅದರೊಡನೆ ಹೊರಭಾಗಕ್ಕೆ ಬಂದರು. ಬಾಗಿಲ ಮುಂದೆ ಇಟ್ಟಿದ್ದವನಕೆಯ ಸಮೀಪದಲ್ಲಿ ಕೃಷ್ಣಾಜಿನದ ಮೇಲೆ ಕುಳಿತು, ವೇದಮಂತ್ರಗಳನ್ನು ಜಪಿಸುತ್ತಾ, ಭಗವಂತನನ್ನು ಧ್ಯಾನಿಸುತ್ತಾ ಗುರುಗಳು ಕಮಂಡಲದಲ್ಲಿದ್ದ ಶ್ರೀವಿಷ್ಣುಪಾದೋದಕವನ್ನು ವನಕೆಯ ಮೇಲೆ ಪ್ರೋಕ್ಷಿಸಹತ್ತಿದರು. ಸುಮಾರು ಒಂದು ಘಳಿಗೆ ಮಂತ್ರೋಚ್ಚಾರಣಪೂರ್ವಕ ಪ್ರೇಕ್ಷಣ ನಡೆಸಿ, ಅಲ್ಲಿದ್ದ ದೇಶಾಯಿ ಸೇವಕರಿಗೆ “ನಾಳೆ ಮಧ್ಯಾಹ್ನದವರಿಗೆ ಈ ವನಕೆಯನ್ನು ನೀವು ಮುಟ್ಟದೆ ಕಾಪಾಡಿರಿ” ಎಂದು ಹೇಳಿ, ಗುಡಿಗೆ ತೆರಳಿ ಭೀಕ್ಷೆಯನ್ನು ಸ್ವೀಕರಿಸಿ ವಿಶ್ರಾಂತಿ ಪಡೆದರು.
ಹೀಗೆ ಒಂದೆರಡು ದಿನಗಳಾದ ಮೇಲೆ ಕಪ್ಪು ವರ್ಣವಾಗಿದ್ದ ಶುಷ್ಕ ವನಕೆಯು ಹಸಿರು ಬಣ್ಣಕ್ಕೆ ತಿರುಗಿ ಹಸಿಯಾಯಿತು! ಜನರು ಅಚ್ಚರಿಯಿಂದ ಅದನ್ನು ಬಂದು ನೋಡಿ ಹೋಗಲಾರಂಭಿಸಿದರು. ಈ ವಿಚಾರ ತಿಳಿದು ದೇಶಾಯಿ ಸ್ವತಃ ಬಂದು ನೋಡಿ ಚಕಿತನಾದ. ಮೂರನೆಯ ದಿನ ವನಕೆಯ ಮಧ್ಯಭಾಗವು ಸ್ವಲ್ಪ ದಪ್ಪವಾಯಿತು. ನಾಲ್ಕನೆಯ ದಿನ ಆ ಮಧ್ಯಭಾಗದಲ್ಲಿ ಸಣ್ಣ ಮೊಳಕೆ ಒಡೆಯಿತು ! ಐದನೆಯ ದಿವಸ ಅದು ಒಂದಡಿ ಎತ್ತರವಾಯಿತು. ಆರನೆಯ ದಿನ ವಣಗಿದ ಮಾವಿನ ಮರದಿಂದ ಮಾಡಿದ್ದ ಆ ವನಕೆಯ ಮಧ್ಯಭಾಗದಿಂದ ಎರಡಡಿಯ ಮಾವಿನ ಮರ ಮೇಲೆದ್ದು ಹಚ್ಚಹಸುರಾದ ಎಳೆಯ ಎಲೆಗಳಿಂದ ಶೋಭಿಸಿತು ! ಏಳನೆಯ ದಿವಸ ಹೂವುಗಳಿಂದ ರಂಜಿಸಿತು! ಶ್ರೀರಾಯರ ಮಂತ್ರಸಿದ್ಧಿಯ ಪ್ರಭಾವದಿಂದ ವನಕೆಯು ಚಿಗುರಿತು !
ಆ ಪರಮಾದ್ಭುತವನ್ನು ಕಂಡು ಜನರು ಗುರುಗಳನ್ನು ಹೊಗಳಹತ್ತಿದರು. ಬ್ರಾಹ್ಮಣ ಸಮುದಾಯವು ಜಯಜಯ
ಆ ರಾಘವೇಂದ್ರಗುರುರಾಜ ! ವೇದಪ್ರಭಾವ ಸಂಸ್ಥಾಪನಾಚಾರ್ಯ” ಎಂದು ಜಯಘೋಷ ಮಾಡಿತು. ಶಿರಸಂಗಿಯ ದೇಶಾಯಿ ತನ್ನ ಕಣ್ಣನ್ನೇ ತಾನು ನಂಬದಾದ! ಗುರುಗಳು ಹೇಳಿದಂತೆ ಮಾಡಿತೋರಿಸಿದ್ದಾರೆ. ದೇಶಾಯಿ ಹೆದರಿದ. “ನಾನೆಂಥ ಮೂಢ? ಮಹಾತ್ಮರನ್ನು ಪರೀಕ್ಷಿಸಲು ಹೋದೆನಲ್ಲ! ಅವರು ಕುಪಿತರಾದರೆ ನನಗೇನು ಕೇಡಾಗುವುದೋ?” ಎಂದು ಪೇಚಾಡಿದ. ಮಂದಹಾಸದಿಂದ ಕೃಷ್ಣಾಜಿನದ ಮೇಲೆ ಕುಳಿತದ್ದ ಶ್ರೀಯವರಲ್ಲಿಗೆ ಬಂದು ದೇಶಾಯಿ ನಮಸ್ಕಾರ ಮಾಡಿ “ಮಹಾಸ್ವಾಮಿ, ನೀವು ಮಹಾತ್ಮರು, ಮಂತ್ರಸಿದ್ದರು! ವೇದ, ಮಂತ್ರ, ಶಾಸ್ತ್ರಗಳು ಸುಳ್ಳಲ್ಲ! ಸತ್ಯ, ಪರಮಸತ್ಯ ! ನಿಮ್ಮಂಥ ಜ್ಞಾನಿಗಳಿರುವುದರಿಂದಲೇ ಮಳೆ ಬೆಳೆಗಳಾಗುತ್ತಿದೆ. ನಿಮ್ಮನ್ನು ಪರೀಕ್ಷಿಸಿದ ಈ ಮಂದಭಾಗ್ಯನನ್ನು ಕ್ಷಮಿಸಿರಿ, ನಿಮಗೆ ನಮೋ ನಮಃ” ಎ೦ದು ವಿಜ್ಞಾಪಿಸಿದ.
ಶ್ರೀರಾಯರು ದರಹಾಸಬೀರಿ “ದೇಶಾಯಿಗಳೇ, ನೀವಾಡಿದ ಮಾತು ಕೇಳಿ ನಮಗೆ ಆನಂದವಾಗಿದೆ. ನಿಮಗೊಂದು ಹಿತನುಡಿ ಹೇಳಬಯಸುತ್ತೇವೆ. ಸೂರಚಂದ್ರರು, ನಾವು, ನೀವು, ಈ ಜಗತ್ತಿನಂತೆಯೇ ವೇದಾದಿಶಾಸ್ತ್ರಗಳೂ ಸತ್ಯಭೂತವಾದವು, ವೇದ ಓದಿದವನು, ಮಂತ್ರ ಪಠಿಸಿದವನು, ಜನಿವಾರ ಹಾಕಿದವರೆಲ್ಲರೂ ಮಂತ್ರಸಿದ್ದರಾಗಿರಲು ಸಾಧ್ಯವಿಲ್ಲ. ನೀವು ಪರೀಕ್ಷಿಸಿದಿರಿ ಎಂದು ನಮಗೆ ಅಸಮಾಧಾನವಿಲ್ಲ. ನಿಮ್ಮಂಥವರಿದಿದ್ದರಿಂದಲೇ ಇಂದು ಮತ್ತೊಮ್ಮೆ ದೇವರ ಅಸ್ತಿತ್ವ, ವೇದಶಾಸ್ತ್ರಗಳ ಮಹತ್ವ ಸಿದ್ಧವಾದಂತಾಯಿತು! ನೀವು ಸ್ವಾಭಾವಿಕವಾಗಿ ನಾಸ್ತಿಕರಲ್ಲವೆಂದು ನಿಮ್ಮನ್ನು ಕಂಡ ದಿನವೇ ನಾವು ತಿಳಿದೆವು, ನಿಮ್ಮಲ್ಲಿ ದೇವರಲ್ಲಿ ನಂಬಿಕೆ, ಆಸ್ತಿಕಗಳಿವೆ. ಇಂದು ಅದು ಪ್ರಕಟವಾಗಿ, ಮುಂದೆ ನಿಮಗೆ ಶ್ರೇಯಸ್ಸಾಗಬೇಕು, ನಿಮ್ಮಿಂದ ಅನೇಕ ಧರ್ಮಕಾರಗಳು ಜರುಗಬೇಕೆಂಬುದು ಪರಮಾತ್ಮನ ಸಂಕಲ್ಪ ! ಆದ್ದರಿಂದಲೇ ಆ ದೇವನು ತನ್ನ ಲೀಲಾವಿಲಾಸ ನಾಟಕದ ಒಂದು ದೃಶ್ಯವನ್ನು ಸೂತ್ರಧಾರನಾಗಿ ಹಿಂದೆ ನಿಂತು ನಮ್ಮ-ನಿಮ್ಮಿಂದ ಆಡಿಸಿತೋರಿದ್ದಾನೆ! ನಮ್ಮನ್ನು ಪರೀಕ್ಷಿಸಿದಂತೆ ಎಲ್ಲರನ್ನು ಪರೀಕ್ಷಿಸಲು ಹೋಗಬೇಡಿ. ಇನ್ನೊಬ್ಬರಿಂದ ಈ ಕಾರವಾಗಲಿಲ್ಲವೆಂದು ದೇವರು-ಧರ್ಮ-ವೇದಾದಿಗಳು ಸುಳ್ಳೆಂದು ಹೇಳಬೇಡಿ ಇದೇ ನಮ್ಮ ಉಪದೇಶ” ಎಂದರು.
ದೇಶಾಯಿ ಶ್ರೀಯವರಿಗೆ ಕೈಮುಗಿದು “ನನಗೀಗ ಬುದ್ದಿ ಬಂತು ಸ್ವಾಮಿ' ನಿಮ್ಮ ಅಪ್ಪಣೆಯಂತೆ ವರ್ತಿಸುತ್ತೇನೆ. ಬ್ರಾಹ್ಮಣರ ಜಮೀನುಗಳನ್ನು ವಾಪಸ್ಸು ಕೊಡುತ್ತೇನೆ. ಇನ್ನೂ ಸ್ವಲ್ಪ ಜಮೀನನ್ನು ಸೇರಿಸಿಕೊಡುತ್ತೇನೆ” ಎಂದರುಹಿ ಅಲ್ಲಿಯೇ ಇದ್ದ ಭೂಸರರನ್ನು ಕರೆದು ಸ್ವಾಮಿ, ನಿಮ್ಮ ಜಮೀನುಗಳನ್ನು ನಿಮಗೇ ಕೊಟ್ಟಿದ್ದೇನೆ. ನಾಳೆಯ ದಿನ ಇನ್ನೂ ಕೆಲ ಜಮೀನುಗಳನ್ನು ದಾನ ಕೊಡುತ್ತೇನೆ. ಸಂತೋಷದಿಂದ ಅನುಭವಿಸುತ್ತಾ ಸುಖವಾಗಿರಿ” ಎಂದು ಹೇಳಿದನು.
ಆಗ ಗುರುರಾಜರು “ದೇಶಾಯಿಗಳೇ ನಾವು ಬಂದ ಕಾರ್ಯವಾಯಿತು, ನಾವಿನ್ನು ಹೊರಡುತ್ತೇವೆ” ಎಂದೆನಲು ದೇಶಾಯಿ ಗುರುಗಳಿಗೊಂದಿಸಿ, “ಗುರುವರ್ಯ, ತಾವು ಹಾಗೇ ಹೊರಡಬಾರದು! ನನ್ನ ಆತಿಥ್ಯ ಸ್ವೀಕರಿಸಿ ತೆರಳಬೇಕು” ಎಂದು ವಿಜ್ಞಾಪಿಸಿದನು.
ಶ್ರೀರಾಯರು “ದೇಶಾಯಿಗಳೇ, ನಿಮ್ಮ ಕೋರಿಕೆಯಂತೆ ನಾಳೆ ನಿಮ್ಮ ಆತಿಥ್ಯವನ್ನು ಶ್ರೀಮೂಲರಾಮ್ ಸ್ವೀಕರಿಸುವನು. ಅವನ ಪ್ರಸಾದವನ್ನು ಪಡೆದು ನಾವು ಪ್ರಯಾಣ ಬೆಳೆಸುತ್ತೇವೆ” ಎಂದು ಹೇಳಿದರು.
ಮರುದಿನ ದೇಶಾಯಿ ಭಕ್ತಿಯಿಂದ ಆತಿಥ್ಯ ನೆರವೇರಿಸಿದನು. ದೇವರದರ್ಶನ ಮಾಡಿ, ಶ್ರೀಯವರು ಭಿಕ್ಷೆ ಸ್ವೀಕರಿಸಿದ ಮೇಲೆ ತೀರ್ಥಪ್ರಸಾದ ಸ್ವೀಕರಿಸಿ ಧನ್ಯನಾದ. ಗುರುರಾಜರು ದೇಶಾಯಿಯನ್ನು ಆಶೀರ್ವದಿಸಿದರು.
ಶ್ರೀಯವರು ಹೊರಟು ನಿಂತಾಗ ದೇಶಾಯಿ ಅವರಿಗೆ ನಮಸ್ಕರಿಸಿ, “ಗುರುವರ್ಯ ! ನನ್ನ ಅಪರಾಧವನ್ನು ಮನದಲ್ಲಿಡದೆ ನನ್ನ ವಂಶವು ಅಭಿವೃದ್ದವಾಗುವಂತೆ ಆಶೀರ್ವದಿಸಬೇಕು” ಎಂದು ಪ್ರಾರ್ಥಿಸಿದನು.
ಗುರುರಾಜನು ಸುಪ್ರೀತರಾಗಿ “ಇಂದಿನಿಂದ ನೀನೂ ನಮ್ಮ ಶಿಷ್ಯ, ಭಕ್ತರ ಗುಂಪಿಗೆ ಸೇರಿರುವೆ. ನೀನಾವ ಅಪರಾಧವನ್ನೂ ಮಾಡಿಲ್ಲ. ಇನ್ನು ಸ್ವಲ್ಪ ವೇಳೆಯಲ್ಲಿಯೇ ನಿಮ್ಮ ವಂಶಾಭಿವೃದ್ಧಿಯ ಮಂಗಳವಾರ್ತೆಯನ್ನು ನೀನೇ ಕೇಳುವೆ!” ಎಂದು ಹೇಳುತ್ತಿರುವಂತೆಯೇ ಕುದುರೆ ಸವಾರನೊಬ್ಬನು ಬಂದು “ಧಣಿಯರೇ, ಸಣ್ಣಯಜಮಾನತಿ ಗಂಡುಮಗುವನ್ನು ಹಡೆದಿದ್ದಾರೆ ! ಸಣ್ಣ ಧಣಿಗಳು ಈ ಸಂತೋಷದ ಸಂಗತಿಯನ್ನು ತಮಗೆ ತಿಳಿಸಲು ನನ್ನನ್ನು ಕಳಿಸಿದ್ದಾರೆ!” ಎಂದು ಹೇಳಿದನು, ಸೇವಕನ ಮಾತುಕೇಳಿ ದೇಶಾಯರಿಗೆ ಪರಮಾನಂದವಾಯಿತು! ದೇಶಾಯಿ “ಸ್ವಾಮಿ, ಜ್ಞಾನಿಗಳಾದ ನಿಮ್ಮ ಭವಿಷ್ಯ ಸತ್ಯವಾಯಿತು, ಮಹಾತ್ಮ,” ಎಂದು ಗುರುಗಳಿಗೆ ನಮಸ್ಕಾರಮಾಡಿದನು. ಶ್ರೀಪಾದಂಗಳವರು ನಸುನಕ್ಕು ದೇಶಾಯಿಗಳಿಗೆ ಫಲಮಂತ್ರಾಕ್ಷತೆ ಅನುಗ್ರಹಿಸಿ ಪ್ರಯಾಣ ಬೆಳೆಸಿದರು.
ಶ್ರೀಪಾದಂಗಳವರು ಮಹಾಸಂಸ್ಥಾನದೊಡನೆ ಇಂದಿನ ಭಾಗ್ಯನಗರ (ಹೈದರಾಬಾದ್) ಪ್ರಾಂತ್ಯದ ಕಡೆ ಸಂಚಾರಹೊರಟರು. ಆ ಪ್ರಾಂತ್ಯದಲ್ಲೆಲ್ಲಾ ಬಹುಕಾಲ ಸಂಚಾರಮಾಡಿ ಲೋಕಕಲ್ಯಾಣವೆಸಗುತ್ತಾ ಚಿತ್ರಾಮಿತ್ರಗಡ್ಡೆಗೆ ಬಂದು ಶ್ರೀಜಿತಾಮಿತ್ರತೀರ್ಥರು ಸನ್ನಿಹಿತರಾಗಿರುವ ವೃಕ್ಷದರ್ಶನಮಾಡಿ, ಮೂಲರಾಮರ ಪೂಜಾರಾಧನೆಮಾಡಿ ವೃಕ್ಷದ ಮೇಲೆ ದೇವರನ್ನು ಮಂಡಿಸಿ ಕನಕಾಭಿಷೇಕಮಾಡಿ ಹಸ್ತೋದಕ ಸಮರ್ಪಿಸಿ, ಪ್ರಸಾದಮಂತ್ರಾಕ್ಷತೆ ಸ್ವೀಕರಿಸಿ ಅಲ್ಲಿಂದ ರಾಯಚೂರಿಗೆ ದಿಗ್ವಿಜಯ ಮಾಡಿದರು.
ಅಲ್ಲಿ ಕೆಲದಿನವಿದ್ದು ಅಲ್ಲಿಂದ ರಾಯರು ಮಾನವಿಗೆ ಸಮೀಪದಲ್ಲಿರುವ ಶ್ರೀ ಪ್ರಾಣದೇವರ ಸನ್ನಿಧಿಗೆ ಬಂದು ಅಲ್ಲಿ ಚಾತುರ್ಮಾಸ್ಯವ್ರತ ಸಂಕಲ್ಪಕ್ಕೆ ಕುಳಿತರು.