|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೦೯. ನವಾಬನ ಮಗನಿಗೆ ಪ್ರಾಣದಾನ

ಶ್ರೀರಾಯರು ವೆಂಕಟಗಿರಿದೇಶಾಯಿಯ ಪುತ್ರನ ಅಪಮೃತ್ಯು ಪರಿಹರಿಸಿದ ವಿಚಾರ ಎಲ್ಲೆಡೆ ಹರಡಿ ಶ್ರೀಯವರ ಕೀರ್ತಿ ದಿಗಂತವಿಶ್ರಾಂತವಾಯಿತು. ದುಃಖಾರ್ತರಿಗೆ ರಾಯರು ಭವರೋಗ ವೈದ್ಯರೆನಿಸಿದರು. ಸಂಜೀವಿನಿಯಂತಾದರು. ಹೋದ ಹೋದಲ್ಲಿ ಗುರುಗಳು ದೈಹಿಕ-ಮಾನಸಿಕಾದಿ ವಿವಿಧರೋಗಗಳನ್ನು ಪರಿಹರಿಸಿ ಜನತೆಯ ದುಃಖವನ್ನು ದೂರಮಾಡಬೇಕಾಯಿತು. ಇದೆಲ್ಲವೂ ಶ್ರೀಹರಿಯ ಸಂಕಲ್ಪ ಇಚ್ಛೆಯೆಂದು ಭಾವಿಸಿ ರಾಯರು ಈ ಬಗೆಯ ಲೋಕಕಲ್ಯಾಣಗಳನ್ನು ಮಾಡುತ್ತಾ ಮಹಿಮೆ ಬೀರುತ್ತಿದ್ದರು; ಕಿರೀಟಗಿರಿಯಿಂದ ಹೊರಟು ರಾಯರು ಹುಬ್ಬಳ್ಳಿಗೆ ದಯಮಾಡಿಸಿದರು. ಅಲ್ಲಿ ಅವರಿಗೆ ಸಂಭ್ರಮದ ಸ್ವಾಗತ ದೊರಕಿತು. ಪ್ರತಿದಿನ ತಂಡೋಪತಂಡವಾಗಿ ಎಲ್ಲ ಮತೀಯಜನರೂ ಬಂದು ಗುರುಗಳ ದರ್ಶನ-ಉಪದೇಶಗಳಿಂದ ಆನಂದಿತರಾಗಿ ತಮ್ಮ ಜೀವನ ಸಾರ್ಥಕವಾಯಿತೆಂದು ಭಾವಿಸುತ್ತಿದ್ದರು. 

ಒಂದುದಿನ ಸ್ವಾಮಿಗಳು ಹುಬ್ಬಳ್ಳಿಗೆ ಸಮೀಪದ ಗ್ರಾಮವೊಂದರಲ್ಲಿದ್ದ ಭಕ್ತನೊಬ್ಬನ ಮನೆಗೆ ಹೋಗಿ ಸತ್ಕಾರಸ್ವೀಕರಿಸಿ ವಾಪಸ್ಸು ಬರುತ್ತಿರುವಾಗ ಮೇನೆಯನ್ನು ಹೊತ್ತ ಬೋವಿಗಳು ಬಿಸಿಲಿನತಾಪದಿಂದ ಶ್ರಾಂತವಾಗಿ ಅಲ್ಲಿಯೇ ಗಿಡಮರಗಳ ನೆರಳಿದ್ದ ಒಂದು ಆರಾಮದಲ್ಲಿ ಆಗತಾನೆ ಕಟ್ಟಿದಂತೆ ಕಾಣುತ್ತಿದ್ದ ಕಟ್ಟೆಯಮೇಲೆ ಮೇನಯನ್ನಿಳಿಸಿ ಶ್ರಮಪರಿಹಾರ ಮಾಡಿಕೊಳ್ಳುತ್ತಿರಲು ದೂರದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ ಗೊಲ್ಲನೊಬ್ಬನು ಓಡಿಬಂದು “ಮೇನೆಯನ್ನಿಟ್ಟಿರುವ ಸ್ಥಳವು ಅಂದೇ ಹಾವುಕಡಿದು ಮೃತನಾದ ಸವಣೂರು ನವಾಬನ ಮಗನ ಗೋರಿಯೆಂದೂ ಸೈನಿಕರು ನೋಡಿದರೆ ಅನರ್ಥವಾಗುವುದೆಂದೂ, ಬೇಗನೆ ಮೇನೆಯನ್ನು ಆ ಸ್ಥಳದಿಂದ ತೆಗೆಯಿರಿ ಎಂದೂ ಹೇಳಿದರು. ಅದೇ ಹೊತ್ತಿಗೆ ನಾಲ್ವರು ಕುದುರೆಸವಾರರು ಬಂದು ಗೋರಿಯಮೇಲೆ ಮೇನೆಯಿರುವುದನ್ನು ಕಂಡು ಕುಪಿತರಾಗಿ ಬೋವಿಗಳನ್ನು ಗದರಿಸಿದರು. ಶ್ರೀರಾಯರು ಸೈನಿಕರನ್ನು ಕರೆದು ಸಮಾಧಾನಹೇಳಿ ನಿಮ್ಮ ನವಾಬರ ಮಗನು ಮೃತನಾಗಿಲ್ಲ! ಬದುಕಿರುವಾಗಲೇ ಗೋರಿಮಾಡಿರುವಿರಿ. ಸೂರ್ಯಾಸ್ತಮಾನವಾಗುವುದರೊಳಗೆ ಯುವರಾಜನ ಶರೀರವನ್ನು ತೆಗೆದರೆ ದೇವರು ಅವನನ್ನು ಬದುಕಿಸಬಹುದು. ಸೂರ್ಯಾಸ್ತಮಾನವಾದಮೇಲೆ ಬದುಕಿಸಲು ಸಾಧ್ಯವಿಲ್ಲ! ಈ ವಿಚಾರವನ್ನು ನವಾಬನಿಗೆ ತಿಳಿಸಿ ಅವನನ್ನು ಕರೆದುಕೊಂಡು ಬನ್ನಿರಿ” ಎಂದು ಹೇಳಿದರು. ಕುಪಿತರಾಗಿದ್ದ ಸೈನಿಕರು ಶ್ರೀಗಳವರ ವರ್ಚಸ್ಸು. ಮಾತಿನ ಧಾಟಿಗಳಿಂದ ಪ್ರಭಾವಿತರಾದರು. ನವಾಬಪುತ್ರ ಜೀವಿಸುವ ಸಾಧ್ಯತೆಯಿರುವುದನ್ನು ಅರಿತು ಅವರಿಗೆ ಆನಂದವಾಯಿತು. ಗುರುಗಳು ಹೇಳಿದ ವಿಷಯವನ್ನು ನವಾಬನಿಗೆ ತಿಳಿಸಿ ಕರೆತರಲು ಓರ್ವ ಸೈನಿಕ ಕುದುರೆಯನ್ನು ಡೌಲಾಯಿಸಿಕೊಂಡು ಹೊರಟ. ಬೋವಿಗಳು ಮೇನೆಯನ್ನು ಬೇರೊಂದು ಸ್ಥಳದಲ್ಲಿಟ್ಟು ನಿಂತರು. 

ಒಂದು ಘಳಿಗೆಯ ಹೊತ್ತಿಗೆ ನಾಲ್ಕಾರುಜನ ಸರದಾರರೊಡನೆ ನವಾಬ ಕುದುರೆ ಯೇರಿಬಂದ ರಾಯರ ದರ್ಶನವಾದೊಡನೆ ಅವನಿಗೆ ಅವರಲ್ಲಿ ತನಗರಿವಿಲ್ಲದಂತೆಯೆ ಒಂದು ವಿಧ ಭಕ್ತಿಗೌರವಗಳುದಯಸಿದವು ಕುದುರೆಯಿಂದಿಳಿದು, ತನ್ನ ಸಂಪ್ರದಾಯದಂತೆ ನವಾಬ ಬಗ್ಗೆ ಮೂರುಬಾರಿ ನಮಿಸಿದ. ಗುರುರಾಜರು ಅವನನ್ನು ನೋಡಿ “ನವಾಬರೇ, ನಿಮಗೆ ಮಂಗಳವಾಗಲಿ! ನಿಮ್ಮ ಪುತ್ರನ ಪ್ರಾಣವಿನ್ನೂ ಹೋಗಿಲ್ಲ! ಅವನ ದೇಹವನ್ನು ಗೋರಿಯಿಂದ ಹೊರತೆಗೆಸಿರಿ, ದೇವರ ಅನುಗ್ರಹದಿಂದ ನಿಮ್ಮ ಯುವರಾಜನನ್ನು ಬದುಕಿಸಲು ಪ್ರಯತ್ನಿಸುತ್ತೇವೆ. ಸೂರನು ಮುಳುಗುವುದರೊಳಗೆ ಈ ಕಾರವಾಗಬೇಕು ತರೆಮಾಡಿ” ಎಂದು ಅಪ್ಪಣೆಮಾಡಿದರು. 

ಶ್ರೀಯವರ ನುಡಿ ನವಾಬನಿಗೆ ಅಮೃತಪ್ರಾಶನಮಾಡಿಸಿದಂತಾಯಿತು. ಮುಸ್ಲಿಂ ರಾಜನಾದರೂ ನವಾಬನಿಗೆ ಹಿಂದೂದೇವರಲ್ಲಿ ಸಾಧು-ಸಂತರಲ್ಲಿ ನಂಬಿಕೆ, ಆದರಗಳಿದ್ದವು. ತಮ್ಮ ಮುಸ್ಲಿಂ ಸಂತರಂತೆ ಹಿಂದೂ ಸಂತರೂ ಅಲ್ಲಾನ (ದೇವರ) ದೂತರೆಂದೂ, ಅವರಿಗೆ ಅಸಾಧ್ಯವಾದುದು ಯಾವುದು ಇಲ್ಲವೆಂದು ಅವನು ನಂಬಿದ್ದನು. ಅಂತೆಯೇ ರಾಯರ ವಚನವನ್ನಾಲಿಸಿ, ನವಾಬನು ಗೋರಿಯನ್ನು ಒಡೆದು ರಾಜಕುಮಾರನ ದೇಹವನ್ನು ಹೊರತೆಗೆಯುವಂತೆ ಸೇವಕರಿಗೆ ಹುಕುಂಮಾಡಿದನು. ಸ್ವಲ್ಪ ಹೊತ್ತಿನಲ್ಲಿಯೇ ಸೇವಕರು ನವಾಬಪುತ್ರನ ದೇಹವನ್ನು ಹೊರತೆಗೆದು ಒಂದು ಶುಭ್ರವಸ್ತ್ರದ ಮೇಲೆ ಮಲಗಿಸಿದರು. ಏಳೆಂಟು ವರ್ಷದ ಆ ಬಾಲಕನ ದೇಹವೆಲ್ಲಾ ನೀಲಿಬಣ್ಣಕ್ಕೆ ತಿರುಗಿದ್ದರೂ, ಕುಮಾರ ಬಹಳ ಲಕ್ಷಣವಾಗಿ ಕಾಣಿಸುತ್ತಿದ್ದ, ಆಬಾಲಕನನ್ನು ನೋಡಿ ಸ್ವಾಮಿಗಳು ಕಾರುಣ್ಯಪೂರ್ಣರಾಗಿ ಅವನನ್ನು ಬದುಕಿಸಲು ಸಂಕಲ್ಪಸಿದರು. 

ಶ್ರೀಯವರು ಕೈಕಾಲು ತೊಳೆದು ಬಾಲಕನ ಶರೀರದ ಸನಿಹದಲ್ಲಿ ಕೃಷ್ಣಾಜಿನದ ಮೇಲೆ ಕುಳಿತು ಆಚಮನಮಾಡಿ “ನವಾಬರೇ, ನಾವು ಧ್ಯಾನಸ್ಥರಾಗುತ್ತೇವೆ. ಪುನಃ ನಾವು ಬಹಿರ್ಮುಖರಾಗುವವರೆಗೆ ಇಲ್ಲಿ ಏನು ನಡೆದರೂ ಯಾರೂ ಕದಲದೆ ನಿಂತಿರಬೇಕು. ಅಂದರೆ ದೇವರು ನಿಮ್ಮ ಮಗನನ್ನು ಉಜ್ಜಿವನಗೊಳಿಸಿ ಅನುಗ್ರಹಿಸುವನು” ಎಂದು ಹೇಳಿ ಧ್ಯಾನಸ್ಥರಾದರು. ಗುರುಗಳು ಮನದಲ್ಲಿಯೇ ಆಕರ್ಷಣ ಮಂತ್ರವನ್ನೂ ಗರುಡಮಂತ್ರ ಹಾಗೂ ಶ್ರೀಕೃಷ್ಣನ ಮಂತ್ರಗಳನ್ನು ಜಪಿಸಲಾರಂಭಿಸಿದರು. ಒಂದು ಘಳಿಗೆ ಕಳೆಯುವುದರೊಳಗೆ ಎಲ್ಲಿಂದಲೋ ಒಂದು ಘಟಸರ್ಪವು ಭರಭರನೆ ಬಂದು ನವಾಬಕುಮಾರನ ಪಾದದ ಒಂದು ಭಾಗದಲ್ಲಿ ಹೆಡೆಯಿಟ್ಟಿತು! ಆ ಸೋಜಿಗವನ್ನು ನವಾಬ, ಸರದಾರರು, ಸೈನಿಕರು ಬೋವಿಗಳು ನೋಡುತ್ತಾ ದಂಗುಬಡಿದವರಂತೆ ಭಯ-ಆಶ್ಚರ್ಯಮಗ್ನರಾಗಿ ಚಿತ್ರಸ್ಥ ಪ್ರತಿಮೆಗಳಂತೆ ನಿಂತರು! ಸರ್ಪವು ವಿಷವನ್ನೆಲ್ಲಾ ಎಳೆದುಕೊಂಡು ಹೆಡೆಯಪ್ಪಳಿಸುತ್ತಾ ಅಲ್ಲಿಂದ ಕದಲಿತು. ಆಶ್ಚರ್ಯದ ಮೇಲಾಶ್ಚರ್ಯ. ಅದೇ ವೇಳೆಗೆ ಎಲ್ಲಿಂದಲೋ ಒಂದು ಗರುಡ ಪಕ್ಷಿಯು ಬಂದು ಆ ಸರ್ಪವನ್ನು ಕಚ್ಚಿಕೊಂಡು ಹಾರಿಹೋಯಿತು! ಸರ್ವರೂ ಈ ಅದ್ಭುತ ಪವಾಡವನ್ನು ನೋಡುತ್ತಾ ನಿಂತಿರುವಾಗ ಗುರುಗಳು ಕಣ್ಣು ತೆರೆದು ಮಂದಾಸಬೀರುತ್ತಾ ಕಮಂಡಲೋದಕವನ್ನು ಅಭಿಮಂತ್ರಿಸಿ, ಮಂತ್ರಪೂಜಿತ ಜಲವನ್ನು ರಾಜಪುತ್ರನ ಶರೀರದ ಮೇಲೆ ಪ್ರೋಕ್ಷಿಸಿದರು. 

ಆಗೊಂದು ಕೌತುಕದ ಘಟನೆ ನಡೆಯಿತು. ನೀಲವರ್ಣವಾಗಿದ್ದ ನವಾಬಪುತ್ರನ ಶರೀರ ಮೊದಲಿನಂತಾಯಿತು ! ದೇಹದಲ್ಲಿ ಪ್ರಾಣವಾಯು ಸಂಚರಿಸಹತ್ತಿತು! ಇದಕ್ಕಿದಂತೆ ನವಾಬಪುತ್ರ ಮೇಲೆದ್ದು ಕುಳಿತ ! ಪರಮಾಶ್ಚರ್ಯದಿಂದ ಈ ಮಹಿಮೆಯನ್ನು ನೋಡುತ್ತಿದ್ದ ಜನರು “ಮಹಾನುಭವರು, ಮಹಾತ್ಮರು, ಅದ್ಭುತ” ಎಂದು ಉದ್ದರಿಸಿದರು. ನವಾಬಕುಮಾರ ಹತ್ತಿರದಲ್ಲಿದ್ದ ತಂದೆಯನ್ನು ನೋಡಿ 'ಅಬ್ಬಾಜಾನ್' ಎಂದು ತಂದೆಯನ್ನಾಲಿಂಗಿಸಿದನು. ನವಾಬನ ಕಣ್ಣುಗಳಿಂದ ಸಂತೋಷದಿಂದ ನೀರು ಹರಿಯಿತು. “ಬೇಟಾ ಮೇರಾ ಬೇಟಾ” ಎನ್ನುತ್ತಾ ಮಗನನ್ನು ಬಿಗಿದಪ್ಪಿದನು. ಆ ಸಂತೋಷದ ದೃಶ್ಯವನ್ನು ಕಂಡು ಗುರುಗಳೂ ಹರ್ಷಿಸಿದರು, ನವಾಬನ ಮಗನೊಡನೆ ಗುರುಗಳಿಗೆ ನಮಸ್ಕಾರಮಾಡಿ “ಸಾಧುಮಹಾರಾಜ್‌ ! ತಾವು ದೊಡ್ಡ ಮಹಾತ್ಮರು, ಅಲ್ಲಾನ ಬಳಿಗೆ ಹೋಗಿದ್ದ ನನ್ನ ಮಗನನ್ನು ಮತ್ತೆ ಕರೆತಂದು ನನಗೆ ನೀಡಿದಿರಿ, ನೀವು ನನ್ನ ಭಾಗದ ದೇವರು ! ನಿಮ್ಮ ಈ ಉಪಕಾರವನ್ನು ನಾನೆಂದೂ ಮರೆಯಲಾರೆ. ಗುರೂಜಿ, ನೀವು ನಮ್ಮೂರಿಗೆ ಬಂದು ಈ ಸೇವಕನು ನೀಡುವ ಸೇವೆಯನ್ನು ಸ್ವೀಕರಿಸಿ ನಮ್ಮನ್ನು ಹರಸಬೇಕು” ಎಂದು ಬಿನ್ನವಿಸಿದ. 

ನವಾಬನ ಶ್ರದ್ಧಾಭಕ್ತಿಗಳಿಂದ ಸುಪ್ರೀತರಾದ ರಾಯರು ನಸುನಕ್ಕು “ನವಾಬರೇ ನಿಮ್ಮ ಕುಮಾರನನ್ನು ಬದುಕಿಸಿದವರು ಭಗವಂತ ! ನಾವಲ್ಲ, ನಾವು ಕೇವಲ ನಿಮಿತ್ತ ಮಾತ್ರರು. ನಿಮ್ಮ ಸೇವೆಯನ್ನು ಸಂತೋಷದಿಂದ ಸ್ವೀಕರಿಸುತ್ತೇವೆ” ಎಂದು ಹೇಳಿ ನವಾಬನಿಗೂ, ಅವರ ಬಾಲಕನಿಗೂ ಫಲಮಂತ್ರಾಕ್ಷತೆ ನೀಡಿ ಮೇನೆಯಲ್ಲಿ ಕುಳಿತು ಹುಬ್ಬಳ್ಳಿಯತ್ತ ಹೊರಟರು. 

ಸವಣೂರು ನವಾಬನಿಗೆ ವಚನವಿತ್ತಂತೆ ರಾಯರು ಮಿತಪರಿವಾರದೊಡನೆ ದಯಮಾಡಿಸಿದರು. ನವಾಬ ವಾದ್ಯವೈಭವದೊಡನೆ ಗುರುಗಳನ್ನು ಎದುರುಗೊಂಡು ಸ್ವಾಗತಿಸಿ ಒಂದು ಭವಭವನದಲ್ಲಿ ಅವರಿಗೆ ಬಿಡಾರಮಾಡಿಸಿದನು. ಮತ್ತು ಪೂಜಾರಾಧನೆಗೆ ವಿಶೇಷ ವ್ಯವಸ್ಥೆ ಮಾಡಿ, ಓರ್ವ ಭೂಸುರರಿಂದ ರಾಯರಿಗೆ ಪಾದಪೂಜೆಮಾಡಿಸಿದನು. ಪೂಜಾರಾಧನೆ- ಯಾದ ಮೇಲೆ ಮೃತನಾಗಿದ್ದ ತನ್ನ ಮಗನನ್ನು ಉಜ್ಜಿವನಗೊಳಿಸಿ ವಂಶವನ್ನುಳಿಸಿದ ಗುರುಗಳಿಗೆ ಗ್ರಾಮ ಮತ್ತು ಅನೇಕ ಭೂಸ್ವಾಸ್ತಿಗಳನ್ನು ದಾನಮಾಡಬಯಿಸಿ, ತನ್ನಿಚ್ಛೆಯನ್ನು ರಾಯರಲ್ಲಿ ನಿವೇದಿಸಿದನು. ರಾಯರು “ಇವೆಲ್ಲಾ ಏತಕ್ಕೆ ನವಾಬರೇ ?” ಎಂದಾಗ ನವಾಬನು “ಗುರುಮಹಾರಾಜ್, ನೆನ್ನೆ ರಾತ್ರಿ ನನ್ನ ಸ್ವಪ್ನದಲ್ಲಿ ಒಬ್ಬ ದಿವ್ಯಪುರುಷ ದರ್ಶನವಿತ್ತನು. ಏಳೆಂಟು ವರ್ಷಗಳ ಆ ದೇವ ಸುಂದರನಾಗಿದ್ದ, ಅವನ ತೇಜಸ್ಸನ್ನು ನೋಡಲು ನನ್ನಿಂದಾಗಲಿಲ್ಲ ! ಅಷ್ಟು ಪ್ರಖರಕಾಂತಿಯಿಂದವನು ರಾಜಿಸುತ್ತಿದ್ದನು ಸರ್ವಾಭರಣಭೂಷಿತನಾಗಿ ಕೈಯಲ್ಲಿ ಬಂಗಾರದ ಕೊಳಲನ್ನು ಹಿಡಿದಿದ್ದನು. ಆ ದೇವ ನನ್ನನ್ನು ನೋಡಿನಗುತ್ತಾ “ನಿನ್ನ ಮಗನನ್ನು ಉಳಿಸಿದ ಗುರುಗಳಿಗೆ ನನ್ನ ಹೆಸರಿನ ಗ್ರಾಮ-ಭೂಮಿಗಳನ್ನು ದಾನ ಮಾಡು. ನಿನಗೆ ಮಂಗಳವಾಗುವುದು” ಎಂದು ಹೇಳಿ ಮಾಯವಾದನು! ಆ ದೇವನ ಹೆಸರೇನೋ ನನಗೆ ತಿಳಿಯದು. ನೀವು ಮಹಾತ್ಮರು, ನೀವೇ ಹೇಳಬೇಕು, ಮತ್ತು ಗ್ರಾಮದಾನವನ್ನು ಸ್ವೀಕರಿಸಬೇಕು” ಎಂದು ವಿಜ್ಞಾಪಿಸಿದನು.

ಶ್ರೀಗುರುರಾಜರು ಇದು ಶ್ರೀಕೃಷ್ಣಲೀಲೆಯೆಂದರಿತ, ಆನಂದಪರವಶರಾಗಿ ನವಾಬರೇ, ನಿಮ್ಮ ರಾಜ್ಯದಲ್ಲಿ 'ಕೃಷ್ಣ ಎಂಬ ಹೆಸರಿನ ಯಾವುದಾದರೂ ಗ್ರಾಮವಿದೆಯೇ?” ಎಂದು ಪ್ರಶ್ನಿಸಲು ನವಾಬ “ನಿಜ ಗುರೂಜಿ! ನನಗೆ ಸೇರಿದ ಗ್ರಾಮಗಳಲ್ಲಿ 'ಕೃಷ್ಣಾಪುರ' ಎಂಬ ಒಂದು ಗ್ರಾಮವಿದೆ” ಎಂದು ಹೇಳಿದನು. ಶ್ರೀರಾಯರು ನಗುಮೊಗದಿಂದ “ನೀವು ಭಾಗ್ಯಶಾಲಿಗಳು. ನವಾಬರೇ, ನಮ್ಮ ದೇವರು ನಿಮಗೆ ದರ್ಶನಕೊಟ್ಟಿದ್ದಾನೆ. ಅವನ ನಾಮ ಅನಂತವಾಗಿದೆ. ಕೃಷ್ಣ ಎಂಬುದು ಅವುಗಳಲ್ಲೊಂದು 'ಕೃಷ್ಣಾಪುರ' ಅವನ ಹೆಸರಿನ ಗ್ರಾಮ! ಅದನ್ನು ಅವನು ನಮಗೆ ಕೊಡಿಸಲಿಚ್ಛಿಸಿದ್ದಾನೆ! ಅವನ ಚಿತ್ತವಿದ್ದಂತಾಗಲಿ” ಎಂದರು. 

ನವಾಬ ಪರಮಸಂತುಷ್ಟನಾಗಿ 'ಕೃಷ್ಣಾಪುರ ಗ್ರಾಮವನ್ನು ಮತ್ತು ಕೆಲ ಭೂಮಿಗಳನ್ನು ಶ್ರೀಗಳವರಿಗೆ ದಾನಮಾಡಿ ಕೃತಾರ್ಥನಾದ.

ವಿಧರ್ಮಿಯನಾದ ನವಾಬನ ಮಗನನ್ನು ಬದುಕಿಸಿ ಅವನಿಗೆ ಹಿಂದೂಧರ್ಮದ ಹಿರಿಮೆಗಳನ್ನು ತೋರಿದ ಶ್ರೀರಾಯರ ಸರ್ವಜನೋದಾರದೀಕ್ಷೆ, ಮಾನವೀಯತೆ ಮುಂತಾದ ಸದ್ಗುಣಗಳನ್ನು ಎಲ್ಲಜನರೂ ಕೊಂಡಾಡಹತ್ತಿದರು.