ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೦೭. ಮೃತ್ತಿಕೆ ಮದುವೆ ಮಾಡಿಸಿತು !
ಶ್ರೀರಾಯರ ಸವಾರಿಯು ಹಾವೇರಿ ಮಾರ್ಗವಾಗಿ ಗದಗಿಗೆ ಚಿತ್ತೆಸಿತು. ರಾಯರು ಶ್ರೀವೀರನಾರಾಯಣನ ಸನ್ನಿಧಿಯಲ್ಲಿ ಕೆಲಕಾಲ ಸ್ವಾಶ್ರಮೋಚಿತಕರ್ಮಾನುಷ್ಠಾನಿಷ್ಠರಾಗಿ ದೇವರ ದರ್ಶನ-ಸೇವಾದಿಗಳಿಂದ ಮೋದಗೊಂಡರು. ಗುರುಗಳ ದರ್ಶನ-ಸೇವಾದಿಗಳಿಗೆ ಎಂದಿನಂತೆ ಇಲ್ಲಿಯೂ ಜನಜಂಗುಳಿಯು ನೆರೆಯುತ್ತಿತ್ತು. ಶ್ರೀಯವರ ಉಪದೇಶದಿಂದ ಸಹಸ್ರಾರು ಜನರು ಕೃತಾರ್ಥರಾಗುತ್ತಿದ್ದರು. ರೋಗಾಧ್ರುಪದ್ರವ ಪೀಡಿತರು, ದರಿದ್ರರು, ದುಃಖಾರ್ತರು, ವಿವಿಧಕಾಮಿತಗಳನ್ನು ಅಪೇಕ್ಷಿಸುವ ಧಾರ್ಮಿಕರು, ತಮ್ಮ ಉದ್ಧಾರವನ್ನು ಬಯಸುವ ದೀನದಲಿತರಿಗೆ ಶ್ರೀಯವರಿಗೆ ಸನ್ನಿಧಾನ ಒಂದು ಯಾತ್ರಾಸ್ಥಳವಾಗಿತ್ತು. ರಾಯರ ಕರುಣೆ, ಅನುಗ್ರಹಗಳಿಂದ ಸರ್ವರೂ ತಂತಮ್ಮ ಇಷ್ಟಾರ್ಥಗಳನ್ನು ಹೊಂದಿ ಕೃತಾರ್ಥರಾಗಿ, ನೂತನೋತ್ಸಾಹ, ಸುಖ-ಶಾಂತಿ-ಸಮಾಧಾನಗಳನ್ನು ಪಡೆಯುತ್ತಿದ್ದರು.
ರಾಯರಿಗೆ ಅಚ್ಚುಮೆಚ್ಚಾಗಿದ್ದ ರಾಮಚಂದ್ರ ಎಂಬ ಯುವಕ ಶ್ರೀಯವರ ದ್ವಾರಪಾಲಕನಾಗಿದ್ದನು. ಶ್ರೀಯವರಿಗೂ ಅವನಲ್ಲಿ ಒಂದು ಬಗೆಯ ವಾತ್ಸಲ್ಯವಿತ್ತು, ಗುರುರಾಜರು “ರಾಮಚಂದ್ರ, ನಿನಗೇನು ಬೇಕು?” ಎಂದು ಕೇಳಿದಾಗಲೆಲ್ಲ ಅವನು “ಸ್ವಾಮಿ, ತಮ್ಮ ಸೇವೆಯೊಂದು ಸಾಕು. ನನಗೆ ಮತ್ತೇನೂ ಬೇಡ” ಎಂದು ಹೇಳುತ್ತಿದ್ದನು. ಒಂದು ದಿನ ಮೃತ್ತಿಕಾಶೌಚ (ಕೆಮ್ಮಣ್ಣಿನಿಂದ ಕೈಕಾಲು ತೊಳೆದುಕೊಳ್ಳುವುದು) ಮಾಡಿಕೊಳ್ಳುತ್ತಿರುವಾಗ ರಾಯರು ನಗುತ್ತಾ ರಾಮಚಂದ್ರ, ನಾವೆಷ್ಟು ಸಲ ಕೇಳಿದರೂ ನನಗೇನೂ ಬೇಡ ಎನ್ನುತ್ತಿದ್ದಿಯೇ ! ಆದರೆ ! ಈ ದಿನ ನೀನು ನಮ್ಮಿಂದ ಏನಾದರೂ ಬೇಡಿ ಸ್ವೀಕರಿಸಲೇಬೇಕು !” ಎಂದರು. ಇತ್ತೀಚೆಗೆ ಅವನಿಗೆ ವಿವಾಹವಾಗುವ ಅಭಿಲಾಶೆಯುಂಟಾಗಿತ್ತು. ಇಂದು ಮತ್ತೆ ಗುರುಗಳು ಪ್ರಶ್ನಿಸಿದಾಗ ಅವನು “ಮಹಾಸ್ವಾಮಿ, ತಾವು ಅನುಗ್ರಹಮಾಡುವುದಾದರೆ....” ಎಂದು ಅರ್ಧೋಕ್ತಿಯಲ್ಲಿಸುಮ್ಮನಾದಾಗ, ರಾಯರು ಮಂದಹಾಸಬೀರಿ “ಹೂಂ ಕೇಳು ರಾಮಚಂದ್ರ” ಎಂದು ಪ್ರೋತ್ಸಾಹಿಸಲು ರಾಮಚಂದ್ರನು ತಲೆತಗ್ಗಿಸಿ, “ಸ್ವಾಮಿ ನನಗೆ, ನನಗೆ ಮದುವೆಯಾಗಲು ಇಷ್ಟವಾಗಿದೆ. ದಯಮಾಡಿ ನನಗೆ ಲಗ್ನಮಾಡಿಸಬೇಕು” ಎಂದು ಪ್ರಾರ್ಥಿಸಿದನು.
ರಾಯರು ನಕ್ಕು “ರಾಮಚಂದ್ರ, ನಿನ್ನಾಸೆ ಯುಕ್ತವಾಗಿದೆ, ಸಂತೋಷ. ನೀನು ಲಗ್ನಮಾಡಿಸಿರಿ ಎಂದು ಕೇಳುತ್ತಿರುವೆ. ಈಗ ನಮ್ಮ ಕೈಯಲ್ಲಿರುವುದು ಈ ಮೃತ್ತಿಕೆ ಮಾತ್ರ ! ಬೇಕಾದರೆ ಇದನ್ನು ಕೊಡುತ್ತೇವೆ” ಎಂದು ವಿನೋದವಾಗಿ ಹೇಳಿದರು. ಕೂಡಲೇ ರಾಮಚಂದ್ರನು ರಾಯರಿಗೆ ವಂದಿಸಿ “ಮಹಾಪ್ರಸಾದ, ಗುರುವರ್ಯ, ಪ್ರಸನ್ನಚಿತ್ತರಾಗಿ ತಾವು ಏನು ಅನುಗ್ರಹಿಸಿದರೂ ಅದು ನನ್ನ ಭಾಗ್ಯ! ಅದರಿಂದಲೇ ನನ್ನಾಶೆಗಳೆಲ್ಲಾ ಪೂರೈಸುವುದೆಂದು ನಂಬಿದ್ದೇನೆ! ಮೃತ್ತಿಕೆಯನ್ನೇ ದಯಪಾಲಿಸೋಣವಾಗಲಿ!” ಎ೦ದು ತಾನು ಹೊದ್ದಿದ್ದ ವಸ್ತ್ರವನ್ನು ಮುಂದೊಡ್ಡಿದನು. ಅವನ ಪರಿಪಕ್ವಭಕ್ತಿ, ಪರಿಶುದ್ಧ ಮನಸ್ಸುಗಳನ್ನು ಕಂಡು ರಾಯರಿಗೆ ಪರಮಾನಂದವಾಯಿತು. ಶ್ರೀಯವರು ರಾಮಚಂದ್ರನ ಉಡಿಗೆ ಮೂರು ಬೊಗಸೆ ಮೃತ್ತಿಕೆಯನ್ನು ಹಾಕಿ “ರಾಮಚಂದ್ರ, ನಿನ್ನ ಭಕ್ತಿಗೆ ಮೆಚ್ಚಿದ್ದೇವೆ. ಭಕ್ತಿಯಿಂದಿದನ್ನು ಸ್ವೀಕರಿಸು, ಇದೇ ನಿನಗೆ ಮದುವೆ ಮಾಡಿಸುವುದು” ಎಂದಾಜ್ಞಾಪಿಸಿದರು. ಸಂತಸದಿಂದ ರಾಮಚಂದ್ರನು ಗುರುಗಳ ಪಾದಸ್ಪರ್ಶಮಾಡಿ “ಧನ್ಯನಾದೆ ಗುರುದೇವ. ಹಾಗಾದರೆ ನಾನು ಲಗ್ನಕ್ಕೆ ಹೊರಡಲೇ?” ಎಂದು ಪ್ರಶ್ನಿಸಿದ. ಗುರುಗಳೂ ನಗುತ್ತಾ "ಶುಭಸ್ಯ ಶೀಘ್ರಂ ! ಹೋಗಿಬಾ, ನಿನಗೆ ಮಂಗಳವಾಗಲಿ, ಲಗ್ನವಾದ ಮೇಲೆ ಪತ್ರೀಸಹಿತನಾಗಿ ಬಂದು ಆಶೀರ್ವಾದಪಡೆ ! ಈಗ ನಿನ್ನ ವಿವಾಹಕ್ಕಾಗಿ ಈ ಫಲಮಂತ್ರಾಕ್ಷತೆಯನ್ನು ಸ್ವೀಕರಿಸು” ಎಂದು ಫಲಮಂತ್ರಾಕ್ಷತೆಯ ತಟ್ಟೆಯನ್ನು ತರಿಸಿ ಪೂರ್ಣಫಲಮಂತ್ರಾಕ್ಷತೆಗಳನ್ನಿತ್ತು ಹರಸಿ ಕಳುಹಿಸಿದರು.
ರಾಯರ ಅನುಗ್ರಹವನ್ನು ಪಡೆದ ರಾಮಚಂದ್ರ ತನ್ನ ಊರಿನ ಕಡೆಗೆ ಪ್ರಯಾಣಬೆಳೆಸಿದ. ಕಾಲುನಡಿಗೆಯಿಂದ ಪ್ರಯಾಣಮಾಡುತ್ತಿದ್ದ ಅವನು ಒಂದು ದಿನ ರಾತ್ರಿ ಒಂದು ಗ್ರಾಮವನ್ನು ತಲುಪಿದ. ರಾತ್ರಿ ಕಳೆಯಲು ಎಲ್ಲಿ ವಿಶ್ರಮಿಸುವುದೆಂದು ಯೋಚಿಸುತ್ತಿರುವಾಗ ಅವನಿಗೆ ಹತ್ತಿರದಲ್ಲಿದ್ದ ಒಂದು ವಿಶಾಲಗ್ರಹ ಗೋಚರಿಸಿತು. ಅತ್ತ ನಡೆದ ರಾಮಚಂದ್ರ, ರಾತ್ರಿಯಾದ್ದರಿಂದ ಮನೆಯ ಗೃಹಸ್ಥರನ್ನು ಎಬ್ಬಿಸುವುದು ಯುಕ್ತವಲ್ಲವೆಂದು ಭಾವಿಸಿ ಮನೆಯ ಮುಖ್ಯದ್ವಾರದ ವಿಸ್ತಾರವಾದ ಜಗಲಿಯನ್ನು ನೋಡಿ ಮುಖ್ಯದ್ವಾರದ ಬಾಗಿಲಿನ ಹೊಸ್ತಿಲಿನ ಮೇಲೆ ತನ್ನ ಗಂಟನ್ನಿಟ್ಟು ತಲೆಕೊಟ್ಟು ಮಲಗಿದ. ಪ್ರಯಾಣದ ಆಯಾಸದಿಂದ ಬಳಲಿದ ಅವನಿಗೆ ಮಲಗಿದೊಡನೆಯೇ ನಿದ್ರೆ ಬಂದಿತು.
ಅಪರಾತ್ರಿಯಲ್ಲಿ ಅವನನ್ನು ಯಾರೋ ಕರೆಯುತ್ತಿರುವಂತೆ ಭಾಸವಾಗಿ ತಟ್ಟನೆ ಎದ್ದು ಕುಳಿತು ಸುತ್ತ ನಿರೀಕ್ಷಿಸಿದ. ಆಗ ಅವನು ಒಂದು ದೃಶ್ಯವನ್ನು ಕಂಡು ಹೆದರಿ ನಡುಗಹತ್ತಿದ. ಜಗಲಿಯ ಕೆಳಗೆ ಅಕರಾಳವಿಕರಾಳರೂಪದ ಒಂದು ಬ್ರಹ್ಮರಾಕ್ಷಸ ಅಂತರಾಳದಲ್ಲಿ ನಿಂತು “ಏ ಬ್ರಾಹ್ಮಣ ದಾರಿಬಿಡು” ಎಂದು ಗರ್ಜಿಸುತ್ತಿದೆ ! ಏನು ಮಾಡಲೂ ತೋಚದೆ ರಾಮಚಂದ್ರ ಮನಸ್ಸಿನಲ್ಲೇ ಗುರುರಾಯರನ್ನು ಸ್ಮರಿಸಿ 'ಕಾಪಾಡಿ ಗುರುಗಳೇ' ಎಂದು ಪ್ರಾರ್ಥಿಸಿದ. ಗುರುಗಳ ನಾಮಸ್ಮರಣೆ ಅವನಲ್ಲಿ ಒಂದು ಬಗೆಯ ಧೈಯ್ಯ-ಶಕ್ತಿಗಳನ್ನು ಹುಟ್ಟಿಸಿತು ! ಧೈರ್ಯವಹಿಸಿ ಬ್ರಹ್ಮರಾಕ್ಷಸನತ್ತ ನೋಡುತ್ತಿರುವಾಗ ಅದು “ಎಲವೋ ಬ್ರಾಹ್ಮಣ ! ಹೇಳಿದ್ದು ಕೇಳಿಸಲಿಲ್ಲವೇ ? ನನಗೆ ದಾರಿಬಿಡು” ಎಂದಿತು. ಗುರುನಾಮಜಪಮಾಡುತ್ತಾ ರಾಮಚಂದ್ರ ಕೇಳಿದ “ನೀನಾರು ? ನಿನಗೇಕೆ ದಾರಿಕೊಡಬೇಕು ?” “ಓಹೋ ನನ್ನನ್ನೇ ಪ್ರಶ್ನಿಸುವಷ್ಟು ಧೈರ್ಯವೇ ನಿನಗೆ ? ನಾನಾರಾದರೇನು? ಒಳಗೆ ಹೋಗಲು ದಾರಿಬಿಡು” ಎಂದು ಬ್ರಹ್ಮ ರಾಕ್ಷಸ ಗರ್ಜಿಸಿತು. “ನೀನೇಕೆ ಒಳಗೆ ಹೋಗಬೇಕು ? ಅದನ್ನು ಮೊದಲು ತಿಳಿಸು” ಎಂದು ರಾಮಚಂದ್ರ. “ನೀನೋಳೇ ಹಟಮಾರಿ ಬ್ರಾಹ್ಮಣ ! ಕೇಳು ಈ ಮನೆಯ ಯಜಮಾನನಿಗೆ ಈಗ ಪುತ್ರನೊಬ್ಬನು ಜನಿಸಲಿದ್ದಾನೆ. ಆ ಶಿಶುವನ್ನು ನಾನು ಬಲಿತೆಗೆದುಕೊಳ್ಳಬೇಕು ! ಗೊತ್ತಾಯಿತೇ?” ಎಂದಿತು ಬ್ರಹ್ಮರಾಕ್ಷಸ, ರಾಮಚಂದ್ರ ಅಚ್ಚರಿಯಿಂದ “ಏನೆಂದೆ ? ಶಿಶುವನ್ನು ಸಂಹರಿಸಬೇಕೆ ? ಆಹಾ, ಎಂಥ ಘನಕಾರ್ಯಮಾಡಹೊರಟಿದ್ದೀಯೆ ! ಶಿಶುಹತ್ಯೆ ಪಾಪವೆಂದು ನಿನಗೆ ತಿಳಿಯದೇ ?” ಎಂದ. ಆಗ ಬ್ರಹ್ಮರಾಕ್ಷಸ `ಗೊತ್ತಿದೆಯಯ್ಯ, ಈತ ನನಗೆ ಮಾಡಿರುವ ಅನ್ಯಾಯಕ್ಕೆ ಇಬ್ಬರು ಮಕ್ಕಳನ್ನು ಬಲಿತೆಗೆದುಕೊಂಡಿದ್ದೇನೆ. ಈಗ ಜನಿಸಲಿರುವ ಮೂರನೆಯ ಸಂತಾನವನ್ನೂ ಕೊಂದರೆ ತನ್ನ ಹಗೆ ತೀರುವುದು. ಹೂಂ, ದಾರಿಬಿಡು” ಎಂದವಸರಿಸಿತು. “ಸ್ವಲ್ಪ ತಡೆಯಪ್ಪಾ, ಈ ಮನೆಯಾತನ ಮೇಲೇಕೆ ನಿನಗೆ ದ್ವೇಷ ?” ಎಂದ ರಾಮಚಂದ್ರನ ಮಾತು ಕೇಳಿ ಬ್ರಹ್ಮರಾಕ್ಷಸ ಹೇಳತೊಡಗಿತು -
“ಅಯ್ಯಾ ವಿಪ್ರ, ದಾರಿಬಿಡುವುದನ್ನು ಬಿಟ್ಟು ಕಾಲಹರಣಮಾಡುತ್ತಿರುವೆಯಲ್ಲ ! ಹೋಗಲಿ, ಕೇಳು, ಹಿಂದಿನ ಜನ್ಮದಲ್ಲಿ ಈ ಮನೆಯ ಯಜಮಾನ ನನ್ನ ಮೂವರು ಮಕ್ಕಳ ನಾಶಕ್ಕೆ ಕಾರಣನಾಗಿದ್ದಾನೆ! ಆಗ ನಾನು ಅನುಭವಿಸಿದ ದುಃಖ ಎಷ್ಟು ಹೇಳಿದರೂ ತೀರದು. ಅಗ ನಾನು ಕೋಪ-ತಾಪಗಳಿಂದ ಹುಚ್ಚನಂತಾಗಿ ಇವನ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಆತ್ಮಘಾತಮಾಡಿಕೊಂಡೆ, ಅದರ ಫಲವಾಗಿ ಈ ರೂಪ ಪ್ರಾಪ್ತವಾಗಿದೆ. ನನ್ನ ಮಕ್ಕಳ ನಾಶಕ್ಕೆ ಕಾರಣನಾದ ಇವನನ್ನು ಎಂದೋ ಸಂಹರಿಸಬಹುದಾಗಿತ್ತು. ಅದು ನನ್ನ ಇಚ್ಛೆಯಲ್ಲ. ಮಕ್ಕಳನ್ನು ಕಳೆದುಕೊಂಡು ನಾನು ದುಃಖಿಸಿದಂತೆಯೇ ಇವನೂ ಪತ್ರಶೋಕದಿಂದ ದುಃಖಿಸಬೇಕು. ಆಗಲೇ ನನಗೆ ತೃಪ್ತಿ, ದಾರಿಬಿಡು, ನನ್ನ ಕಾರಮುಗಿಸಿಹೋಗುತ್ತೇನೆ.”
ಆಗ ರಾಮಚಂದ್ರನು “ಶಿಶುಹತ್ಯೆ ಮಹಾಪಾಪ, ದೀರ್ಘದ್ವೇಷ ಒಳಿತಲ್ಲ. ಈ ಮನೆಯಾತ ಹಿಂದಿನಜನ್ಮದಲ್ಲಿ ನಿನ್ನ ಪುತ್ರರ ಮರಣಕ್ಕೆ ಕಾರಣನೆಂದು ನಿನ್ನಷ್ಟಕ್ಕೆ ನೀನೇ ತಿಳಿದು ಆತ್ಮಹತ್ಯೆಮಾಡಿಕೊಂಡು ಈ ಹೇಯವಾದ ಬ್ರಹ್ಮರಾಕ್ಷಸನಾಗಿ ಅಂಡಲೆಯುತ್ತಿದ್ದೀಯೆ. ಮಗ ಶಿಶುಹತ್ಯೆಮಾಡಿ ಈ ಕ್ಷುದ್ರರೂಪ ಶಾಶ್ವತವಾಗಿ ಉಳಿಯುವಂತೆ ಮಾಡಿಕೊಳ್ಳಬೇಡ! ಆದದ್ದಾಯಿತು. ಈ ಒಂದು ಸಂತಾನವಾದರೂ ಆತನಿಗೆ ಉಳಿದು ಅವನ ವಂಶ ಬೆಳೆಯಲಿ ! ನೀನು ಹೊರಟು ಹೋಗು” ಎಂದು ಹೇಳಲು ಕೋಪೋದ್ರೇಕದಿಂದ “ನನಗೆ ಬುದ್ದಿ ಹೇಳುವಷ್ಟು ಧೈಯ್ಯವೇ ನಿನಗೆ ? ದಾರಿಬಿಟ್ಟುಬಿಡು. ಇಲ್ಲದಿದ್ದರೆ ನಿನ್ನವಸ್ಥೆ ನೆಟ್ಟಗಾಗಲಿಕ್ಕಿಲ್ಲ!” ಎಂದು ಬ್ರಹ್ಮ ರಾಕ್ಷಸ ಗರ್ಜಿಸಿತು. ರಾಮಚಂದ್ರ ಶಾಂತನಾಗಿಯೇ ಹೇಳಿದ “ಮಹಾಸಮರ್ಥನಯ್ಯ ನೀನು ! ನೀನು ಒಳಗೆ ಹೋಗಲು ನಾನೇಕೆ ದಾರಿಕೊಡಬೇಕು ? ನಾನೇನೂ ನಿನ್ನನ್ನು ತಡೆಯುತ್ತಿಲ್ಲವಲ್ಲ ! ನಿನಗೆ ಶಕ್ತಿಯಿದ್ದರೆ ಒಳಗೆ ಹೋಗು. ಅದಕ್ಕೆ ನನ್ನೇಕೆ ಪೀಡಿಸುವೆ ?”
“ನೀನೇನೂ ನನ್ನನ್ನು ತಡೆಯುತ್ತಿಲ್ಲ, ನಿಜ. ಆದರೆ ನಾನು ಒಳಗೆ ಹೋಗದಂತೆ ನೀನು ಹೊಸ್ತಿಲಿನ ಮೇಲೆ ಬೆಂಕಿಯ ಗಂಟನ್ನು ಇಟ್ಟಿರುವೆಯಲ್ಲ ! ಅದನ್ನು ತೆಗೆದುಕೊಂಡು ಇತ್ತ ಸರಿ, ಸಾಕು” ಎಂದು ಬ್ರಹ್ಮರಾಕ್ಷಸ ಹೇಳಲು ರಾಮಚಂದ್ರ ವಿಸ್ಮಿತನಾದ, ಆಗವನಿಗೆ ಅರಿವಾಯಿತು. ಹೊಸ್ತಿಲಿನ ಮೇಲೆ ತಾನು ಶ್ರೀಯವರು ಅನುಗ್ರಹಿಸಿದ ಮೃತ್ತಿಕೆಯ ಗಂಟನ್ನಿಟ್ಟಿರುವುದು ! ಬ್ರಹ್ಮರಾಕ್ಷಸನಿಗೆ ಅದು ಬೆಂಕಿಯಂತೆ ಕಾಣಿಸುತ್ತಿದೆ ! ಆಶ್ಚರ, ಇದು ಮೃತ್ತಿಕೆಯ ಮಹಿಮೆ ! ಗುರುರಾಜರು ಜ್ಞಾನಿಗಳು. ಮುಂದಿನ ವಿಚಾರವರಿತವರು. ಅಂತೆಯೇ ಅವರು ಈ ಮೃತ್ತಿಕೆಯನ್ನು ನನಗೆ ಕೊಟ್ಟು ಕಳಿಸಿದ್ದಾರೆ, ಶಿಶುಹತ್ಯೆಯನ್ನು ತಡೆದು ಈ ಮನೆಯಾತನ ವಂಶಾಭಿವೃದ್ಧಿಯಾಗುವಂತೆ ಮಾಡುವುದೇ ಅವರ ಉದ್ದೇಶವಿರಬೇಕು. ಈ ಮೃತ್ತಿಕೆಯು ನನ್ನಲ್ಲಿ ಇರುವವರೆಗೆ ಬ್ರಹ್ಮರಾಕ್ಷಸ ನನ್ನನೇನೂ ಮಾಡಲಾರದು. ಹೇಗಾದರೂ ಮಾಡಿ ಜನಿಸಲಿರುವ ಶಿಶುವನ್ನು ರಕ್ಷಿಸಬೇಕು - ಮುಂತಾಗಿ ಮನದಲ್ಲೇ ಯೋಚಿಸಿದ ರಾಮಚಂದ್ರ ಒಂದು ಹಿಡಿ ಮೃತ್ತಿಕೆಯನ್ನು ಕರದಲ್ಲಿ ಹಿಡಿದು “ಓಂ ಶ್ರೀರಾಘವೇಂದ್ರಾಯ ನಮಃ” ಎಂದು. ಉಚ್ಚರಿಸಿ ಧೈರವಾಗಿ ಮೃತ್ತಿಕೆಯನ್ನು ಬ್ರಹ್ಮರಾಕ್ಷಸನ ಮೇಲೆ ಎರಚಿಬಿಟ್ಟ !
ಆಗೊಂದು ಅದ್ಭುತವೇ ನಡೆದುಹೋಯಿತು ! ಮೃತ್ತಿಕಾಸ್ಪರ್ಶವಾಗುತ್ತಲೂ ಬ್ರಹ್ಮರಾಕ್ಷಸ “ಅಯ್ಯೋ ಸತ್ತೆ, ಬೆಂಕಿ, ಉರಿ ಉರಿ” ಎಂದು ಅರಚುತ್ತಾ ಧಗಧಗನೆ ಉರಿದು ಭಸ್ಮವಾಗಿ ಹೋಯಿತು !
ಅಷ್ಟು ಹೊತ್ತಿಗಾಗಲೇ ಮನೆಯಲ್ಲಿ ಯಜಮಾನನ ಪತ್ನಿಯು ಗಂಡುಮಗುವನ್ನು ಪ್ರಸವಿಸಿದ್ದಳು. ಮನೆಯವರೆಲ್ಲರೂ ಯಾವಾಗ ಬ್ರಹ್ಮರಾಕ್ಷಸ ಬಂದು ಮಗುವನ್ನು ಕೊಲ್ಲುವುದೋ ಎಂದು ಭಯಗ್ರಸ್ತರಾಗಿದ್ದರು. ಅದೇ ಸಮಯಕ್ಕೆ ರಾಮಚಂದ್ರ ಬ್ರಹ್ಮರಾಕ್ಷಸರ ವಾಗ್ವಾದ ಕೇಳಿ ಮನೆಯ ಯಜಮಾನ “ಮಗುವು ಇನ್ನೂ ಜೀವಿಸಿಯೇ ಇದೆ ! ಇದೇನು ಹೊರಗೆ ಯಾರೋ ವಾದಿಸುತ್ತಿರುವಂತಿದೆಯಲ್ಲ, ಅದೇನಿರಬಹುದು” ಎಂದು ಕುತೂಹಲದಿಂದ ವಾತಾಯನದಿಂದ ಇಣಿಕಿನೋಡಿದ. ಅದೇ ಕಾಲಕ್ಕೆ ರಾಮಚಂದ್ರ ಮೃತ್ತಿಕೆಯನ್ನು ಎರಚಿದ್ದು, ಬ್ರಹ್ಮರಾಕ್ಷಸ ಅರಚುತ್ತಾ ಉರಿದು ಭಸ್ಮವಾದುದನ್ನು ಕಂಡು ಆತ ಅಚ್ಚರಿಗೊಂಡ, ಸ್ವಲ್ಪ ಸಮಯವಾದ ಮೇಲೆ ಮನೆಯ ಬಾಗಿಲು ತೆರೆದು ಹೊರಬಂದ ಯಜಮಾನ ರಾಮಚಂದ್ರನಿಗೆ ಕೈಮುಗಿದು “ನೀವಾರೋ ಮಹಾನುಭಾವರು, ನನ್ನ ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದ್ದ ಬ್ರಹ್ಮಪಿಶಾಚಿಯನ್ನೇ ನಾಶಪಡಿಸಿ ನನ್ನ ಸಂತಾನವನ್ನು ರಕ್ಷಿಸಿದ್ದೀರಿ. ನಿಮಗೆ ನಮೋ ನಮಃ” ಅಂದರು.
ರಾಮಚಂದ್ರ, “ಸ್ವಾಮಿ, ನನಗೇಕೆ ನಮಸ್ಕರಿಸುವಿರಿ ? ಇದರಲ್ಲಿ ನನ್ನ ಶಕ್ತಿಯೇನೂ ಇಲ್ಲ. ಇದೆಲ್ಲಾ ಮಹಾತ್ಮರಾದ ನನ್ನ ಗುರುಗಳಿತ್ತ ಮೃತ್ತಿಕೆಯ ಪ್ರಭಾವ !' ಎಂದನು.
ಮನೆಯ ಯಜಮಾನ ವಿಸ್ಮಿತನಾಗಿ “ಸ್ವಾಮಿ, ನಿಮ್ಮ ಗುರುಗಳಾರು ? ಅವರು ನಿಜವಾಗಿ ಮಹಾತ್ಮರು” ಎಂದೆನಲು ರಾಮಚಂದ್ರನು “ಸ್ವಾಮಿ, ಜಗತ್ವಸಿದ್ದರಾದ ಶ್ರೀರಾಘವೇಂದ್ರಸ್ವಾಮಿಗಳೇ ನನ್ನ ಗುರುಗಳು ! ಅವರೇ ನಿಮ್ಮ ಸಂತಾನ ರಕ್ಷಕರೆಂದು ತಿಳಿಯಿರಿ” ಎಂದು ಹೇಳಿದನು. ಆಗ ಆ ಗೃಹಸ್ಥನು ಆಶ್ಚರದಿಂದ “ಏನು? ಶ್ರೀರಾಯರು, ನಮ್ಮ ಕುಲಗುರುಗಳಾದ ಶ್ರೀರಾಘವೇಂದ್ರಸ್ವಾಮಿಗಳವರ ಶಿಷ್ಯರೇ ನೀವು?” ಎಂದು ಹೇಳಿ ರಾಮಚಂದ್ರನನ್ನು ಮನೆಯೊಳಗೆ ಕರೆದುಕೊಂಡು ಬಂದು ಉಪಚರಿಸಿದನು. ರಾಮಚಂದ್ರನು ಸುಖವಾಗಿ ಮಲಗಿ ನಿದ್ರಿಸುತ್ತಿರುವ ಗಂಡುಶಿಶುವನ್ನು ಕಂಡು “ಆಹಾ, ಗುರುಗಳು ನನ್ನಿಂದ ಇಂಥ ಒಂದು ಜೀವ ಉಳಿಸಿ ಕೀರ್ತಿ ನೀಡಿದರು” ಎಂದು ಆನಂದಿಸಿದನು.
ರಾಮಚಂದ್ರ ಸ್ನಾನ-ಸಂಧ್ಯಾವಂದನಾದಿಗಳನ್ನು ನೆರವೇರಿಸಿದ ಮೇಲೆ ತನ್ನ ಸಮಸ್ತ ವಿಚಾರಗಳನ್ನೂ ಮನೆಯ ಯಜಮಾನರಾದ ಗೋವಿಂದರಾಯರಿಗೆ ತಿಳಿಸಿದನು. ಅದನ್ನಾಲಿಸಿದ ಗೋವಿಂದರಾಯರು ಗುರುಗಳ ಮಹಾಮಹಿಮೆಯನ್ನು ಕೊಂಡಾಡಿದರು. ಮತ್ತು ರಾಮಚಂದ್ರನು ವಿವಾಹಕ್ಕಾಗಿ ಹೊರಟಿರುವ ವಿಷಯ ತಿಳಿದು ಕುಲ-ಗೋತ್ರಗಳನ್ನು ಕೇಳಿ ಅರಿತು ಸಂತೋಷದಿಂದ ಹೀಗೆ ಹೇಳಿದರು - “ನೋಡಿ, ನಮ್ಮ ಗುರುಗಳು ಭೂತಭವಿಷ್ಯದ್ವರ್ತಮಾನಗಳನ್ನರಿತ ಜ್ಞಾನಿಗಳು ಅವರು ನಮ್ಮ ವಂಶದಕುಡಿಯನ್ನು ರಕ್ಷಿಸಿ, ನಿಮ್ಮ ವಿವಾಹವೂ ಆಗುವಂತೆ ಅನುಗ್ರಹಿಸಿದ್ದಾರೆಂದೇ ನಾನು ಭಾವಿಸುತ್ತೇನೆ. ಗಂಡನನ್ನು ಕಳೆದುಕೊಂಡ ಒಬ್ಬ ಅಕ್ಕ ನನಗಿದ್ದಾಳೆ. ಅವಳಿಗೆ ವಿವಾಹಯೋಗ್ಯಳಾದ ಮಗಳಿದ್ದಾಳೆ. ನೀವು ಒಪ್ಪುವುದಾದರೆ, ನನ್ನ ಸೋದರಸೊಸೆಯನ್ನು ಕೊಟ್ಟು ವಿವಾಹಮಾಡಿಸುತ್ತೇನೆ. ಇದು ಗುರುಗಳ ಆಜ್ಞೆ-ಸೇವೆಯೆಂದೇ ಭಾವಿಸುತ್ತೇನೆ” ಎಂದರು.
ರಾಮಚಂದ್ರನಿಗೆ ಅವರ ಮಾತು ಕೇಳಿ ಬಹು ಸಂತೋಷವಾಯಿತು. ಅವನು “ಸ್ವಾಮಿ ಗೋವಿಂದರಾಯರೇ, ನಿಮ್ಮದು ದೊಡ್ಡ ಮನಸ್ಸು. ನಾನೊಬ್ಬ ಅನಾಥ ನನಗೆ ಆಸ್ತಿ-ಪಾಸ್ತಿ, ಬಂಧು-ಬಳಗ ಏನೂ ಇಲ್ಲ. ನನ್ನಂಥವನಿಗೆ ನೀವು ಹೆಣ್ಣು ಕೊಡುವಿರಾ?” ಎನಲು ಗೋವಿಂದರಾಯರು “ನೋಡಿ ರಾಮಚಂದ್ರ, ಅನಾಥರಿಗೆ ನಾಥರಾದ ಶ್ರೀರಾಯರು ನಿಮ್ಮಲ್ಲಿ ಸುಪ್ರೀತರಾಗಿ ಅನುಗ್ರಹಿಸುತ್ತಿರುವಾಗ ಬೇರೇನು ಬೇಕು ? ಆಸ್ತಿ-ಪಾಸ್ತಿಗಳನ್ನು ನೋಡಿ ನಾವು ಹೆಣ್ಣು ಕೊಡುತ್ತೇವೆಂದು ಹೇಳುತ್ತಿಲ್ಲ! ಗುರ್ವನುಗ್ರಹವೇ ನಿಮ್ಮ ದೊಡ್ಡ ಆಸ್ತಿ, ನೀವು ಮಾಡಿರುವ ಉಪಕಾರಕ್ಕೆ ಏನು ಕೊಟ್ಟರೂ ಸಾಲದು. ನನ್ನ ಅಕ್ಕನಿಗೆ ಮನೆ-ಜಮೀನುಗಳಿವೆ. ಅವಳಿಗೆ ಒಬ್ಬಳೇ ಮಗಳು. ನೀವು ಅವಳ ಕರಪಿಡಿದರೆ ಆ ಆಸ್ತಿಗೆ ನೀವೇ ಒಡೆಯರಾಗುತ್ತೀರಿ! ಇದರಿಂದ ರಾಯರ ಭವಿಷ್ಯವಾ ಸತ್ಯವಾಗಿ ಅವರಕಾರುಣ್ಯ ನಮ್ಮೆಲ್ಲರ ಮೇಲಾಗುವುದು. ನೀವು ಬೇರೇನೂ ಯೋಚಿಸದೆ ನನ್ನ ಸೋದರಸೊಸೆಯನ್ನು ವಿವಾಹವಾಗಿ ಸುಖವಾಗಿರಿ” ಎಂದು ಹೇಳಿದರು. ರಾಮಚಂದ್ರ ಇದೆಲ್ಲಾಗುರುಗಳ ಅನುಗ್ರಹವೆಂದು ನೆನೆಯುತ್ತಾ ಸಂತೋಷದಿಂದ ವಿವಾಹಕ್ಕೆ ತನ್ನ ಸಮ್ಮತಿಸೂಚಿಸಿದ.
ಕೆಲದಿನಗಳಲ್ಲಿಯೇ ಒಂದು ಶುಭಮುಹೂರ್ತದಲ್ಲಿ ರಾಮಚಂದ್ರನಿಗೆ ಸೋದರಸೊಸೆಯನ್ನು ಕೊಟ್ಟು ಗೋವಿಂದರಾಯರು ವಿವಾಹಮಾಡಿಸಿದರು. ಕೆಲಕಾಲವಾದ ಮೇಲೆ ರಾಮಚಂದ್ರನು ಪತ್ನಿಸಮೇತನಾಗಿ ಹುಬ್ಬಳಿಯಲ್ಲಿ ಬಿಡಾರಮಾಡಿದ್ದ ಶ್ರೀರಾಯರ ದರ್ಶನಮಾಡಿ ಸಮಸ್ತವಿಚಾರವನ್ನೂ ವಿಜ್ಞಾಪಿಸಿದ. ಮಠದ ಜನರು ರಾಯರ ಅಗಾಧ ಮಹಿಮೆ, ಅವರಿತ್ತ ಮೃತ್ತಿಕೆಯು ಮದುವೆಮಾಡಿಸಿದ ವೈಚಿತ್ರಾದಿಗಳನ್ನು ಮನಸಾರ ಹೊಗಳಿದರು. ರಾಮಚಂದ್ರ ಮಡದಿಯೊಡನೆ ಗುರುಗಳಿಗೆ ಪಾದಪೂಜೆಮಾಡಿ ಮಂತ್ರಮುದ್ರಾಧಾರಣೆ, ಫಲಮಂತ್ರಾಕ್ಷತೆ ಪಡೆದು ಊರಿಗೆ ಹಿಂದಿರುಗಿ ಬಹುಕಾಲ ದಾಂಪತ್ರಜೀವನವನ್ನು ನಡೆಸಿ ಸುಖದಿಂದ ಬಾಳಿದನು.