|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೦೬. ಭೋಜನಪ್ರಿಯರಲ್ಲಿ ಅನುಗ್ರಹ

ಶ್ರೀರಾಯರು ಸಂಚಾರಕ್ರಮದಿಂದ ಹರಿಹರಕ್ಷೇತ್ರಕ್ಕೆ ದಯಮಾಡಿದರು. ತುಂಗಭದ್ರೆಯ ದಂಡೆಯಲ್ಲಿರುವ ಹರಿಹರಕ್ಷೇತ್ರವು ವಿಶೇಷವಾಗಿ ಬ್ರಾಹ್ಮಣರ ಅಗ್ರಹಾರಗಳಿಂದ ಶೋಭಿಸುತ್ತಿತ್ತು. ಊರಿನ ಆಸ್ತಿಕರು ಗುರುಗಳಿಗೆ ಪಾದಪೂಜೆ, ಭಿಕ್ಷೆಗಳನ್ನೇರ್ಪಡಿಸಿ ಸೇವಿಸಿ ಕೃತಾರ್ಥರಾಗುತ್ತಿದ್ದರು. 

ಒಂದು ದಿನ ರಾಯರು ಪಾಠವಾದ ಮೇಲೆ ಮಠದ ಪಾರುಪತ್ತೇದಾರರನ್ನು ಕರೆದು “ಇಂದು ಶ್ರೀರಾಮದೇವರ ನೈವೇದ್ಯಕ್ಕೆ ಕರಿದ ಶಾವಿಗೆ, ಪರಮಾನ್ನ, ಜಿಲೇಬಿ, ಲಡ್ಡುಗಳನ್ನು ಹೆಚ್ಚಾಗಿ ಮಾಡಿಸತಕ್ಕದ್ದು” ಎಂದು ಆಜ್ಞಾಪಿಸಿದರು. ಆನಂತರ ರಾಯರು ಧರ್ಮಾಭಿಮಾನಿಗಳೊಡನೆ ಮಾತನಾಡುತ್ತಿರುವಾಗ ಪಾರುಪತ್ತೇದಾರು ಮೂವರು ಮಾಧ್ವಬ್ರಾಹ್ಮಣರನ್ನು ಕರೆತಂದು ಗುರುಗಳಿಗೆ ಪರಿಚಯ ಮಾಡಿಸಿದರು. ಆ ಬ್ರಾಹ್ಮಣದಲ್ಲಿ ತೇಜಸ್ವಿಯಾದ ಸದಾಚಾರ ಸಂಪನ್ನನಂತೆ ಕಾಣುತ್ತಿದ್ದ ಒಬ್ಬರು ಜೊತೆಗಾರರೊಡನೆ ಗುರುಗಳಿಗೆ ನಮಸ್ಕರಿಸಿ “ಪೂಜ್ಯಗುರುವರ್ಯರ ಕೀರ್ತಿಯನ್ನು ಕೇಳಿ ಮಠದ ಶಿಷ್ಯರಾದ ನಾವು ತಮ್ಮ ದರ್ಶನ, ಮಂತ್ರಮುದ್ರಾಧಾರಣ, ಆಶೀರ್ವಾದಗಳನ್ನು ಪಡೆದು ಪುನೀತರಾಗಲು ಬಂದಿದ್ದೇವೆ. ಶಿಷ್ಯರಲ್ಲಿ ಅನುಗ್ರಹಿಸಬೇಕು ಎಂದು ಬಿನ್ನವಿಸಿದರು. ರಾಯರು ನಗುಮುಖದಿಂದ “ಬಹಳ ಸಂತೋಷ” ಎಂದು ಹೇಳಿ ಅವರಿಗೆ ಮಂತ್ರಮುದ್ರಾಧಾರಣಮಾಡಿ “ಸ್ನಾನ-ಮಾಧ್ಯಾಹ್ನಕಗಳನ್ನು ಮುಗಿಸಿ ಶ್ರೀದೇವರ ದರ್ಶನಕ್ಕೆ ಬೇಗ ಬನ್ನಿ” ಎಂದಾಜ್ಞಾಪಿಸಿ ಶ್ರೀಮೂಲರಾಮರ ಪೂಜಾರಾಧನೆಗಾಗಿ ಸ್ನಾನಕ್ಕೆ ಹೊರಟರು. 

ಮೂವರು ಬ್ರಾಹ್ಮಣರು ಹತ್ತಿರದಲ್ಲಿರುವ ತುಂಗಾನದಿಗೆ ಸ್ನಾನಾರ್ಥವಾಗಿ ತೆರಳಿದರು. ಮಾರ್ಗಮಧ್ಯದಲ್ಲಿ ಒಬ್ಬ ಬ್ರಾಹ್ಮಣ “ಗುರುಗಳು ಮಹಾಮಹಿಮರೆಂದು ಎಲ್ಲರೂ ಹೇಳುತ್ತಾರೆ. ನನಗೆ ಪ್ರಿಯವಾದ ಜಿಲೇಬಿಯನ್ನು ಅವರಿಂದು ನನಗೆ ಭೋಜನಕ್ಕೆ ನೀಡಿದರೆ ಆಗ ಅವರು ಮಹಾತ್ಮರೆಂದು ಒಪ್ಪುತ್ತೇನೆ !' ಎಂದರು. ಆಗ ಮತ್ತೊಬ್ಬರು “ನಾನೂ ಅಷ್ಟೆ! ಲಡ್ಡು ನನಗೆ ಪ್ರಿಯ. ಅದನ್ನು ಗುರುಗಳು ಅನುಗ್ರಹಿಸಲಿ” ಎಂದರು. ಆಗ ತೇಜಸ್ವಿಗಳಾಗಿದ್ದ ಮೂರನೆಯ ಬ್ರಾಹ್ಮಣರು “ನೋಡಿ, ಇದು ಸರಿಯಲ್ಲ. ಮಹಾತ್ಮರನ್ನು ಪರೀಕ್ಷಿಸಲು ಹೋಗಬಾರದು. ಮೇಲಾಗಿ ಜಗನ್ಮಾನ್ಯರೂ, ನಮ್ಮ ಕುಲಗುರುಗಳೂ ಆದ ರಾಯರನ್ನು ಪರೀಕ್ಷಿಸುವುದಂತೂ ಮಹಾಪರಾಧ !” ಎಂದು ಬುದ್ಧಿ ಹೇಳಿದರು. ಆಗ ಆ ಈರ್ವರು ಬ್ರಾಹ್ಮಣರು “ನಾವ ಗುರುಗಳ ಮಹಿಮೆಯನ್ನು ಬಲ್ಲೆವು ಸ್ವಾಮಿ, ಅದರಿಂದಲೇ ನಮ್ಮಲ್ಲೂ ಅನುಗ್ರಹಮಾಡಲಿ ಎಂದು ಅಪೇಕ್ಷಿಸುತ್ತಿದ್ದೇವೆ. ಶಿಷ್ಯರ ಇಚ್ಛೆಯನ್ನು ಪೂರ್ಣಮಾಡಲಿ ಎಂದು ಬಯಸುವುದು ತಪ್ಪೇ?” ಎಂದು ವಾದಿಸಿದರು. 

ತೇಜಸ್ವೀ ಬ್ರಾಹ್ಮಣರು “ಗುರುಗಳನ್ನು ಜ್ಞಾನ-ಭಕ್ತಿ-ವೈರಾಗ್ಯ ಕರುಣಿಸಿರೆಂದು ಬೇಡಬೇಕೇ ವಿನಹ ಬಾಯಿಚಪಲ ತೀರಿಸಿಕೊಳ್ಳಲು ಆಶಿಸಬಾರದು” ಎಂದು ನುಡಿದರು. ಅದರಿಂದ ಅಸಮಾಧಾನವಾದರೂ ಅವರದನ್ನು ತೋರ್ಗೊಡದೆ ಹುಸಿನಗೆ ಬೀರಿ “ನಿಮಗೆ ಯಾವ ಭಕ್ಷ ಪ್ರಿಯವಾಗಿದೆ?” ಎಂದಾಗ “ನನಗೆ ಏನು ಪ್ರಿಯವೆಂಬುದು ರಾಯರು ಬಲ್ಲರು. ಅವರು ಅನುಗ್ರಹಿಸಲಿಚ್ಛಿಸಿದರೆ ನನಗೆ ಪ್ರಿಯವಾದುದನ್ನೇ ನೀಡುವರು. ಆದರೆ ನಾನು ನಿಮ್ಮಂತೆ ಅದು ಬೇಕು, ಇದು ಬೇಕು ಎಂದಾಶಿಸುವುದಿಲ್ಲ. ಶ್ರೀಯವರನ್ನು ಪರೀಕ್ಷಿಸಬೇಕೆಂಬ ದುರ್ಬುದ್ದಿನನಗಿಲ್ಲ!” ಎಂದು ಹೇಳಿದರು. ಹೀಗೆ ಮಾತನಾಡುತ್ತ ಮೂವರೂ ನದೀತೀರಕ್ಕೆ ಬಂದು ಸ್ನಾನಕ್ಕಿಳಿದರು. 

ಅಲ್ಲಿಯೇ ಒಂದು ಬಂಡೆಯ ಮೇಲೆ ಶ್ರೀರಾಯರ ಶ್ರೇಷವಸ್ತ್ರಗಳನ್ನು ಒಗೆಯುತ್ತಿದ್ದ ಮಠದ ಪರಿಚಾರಕನೊಬ್ಬನು ಈ ಬ್ರಾಹ್ಮಣರನ್ನು ನೋಡಿ “ಓಹೋ, ಭೋಜನಪ್ರಿಯರು ಬಂದರು ! ಹೂಂ, ಬೇಗ ಸ್ನಾನಮಾಡಿ ಬನ್ನಿ, ಗುರುಗಳು ನಿಮ್ಮಿಷ್ಟವನ್ನು ಪೂರ್ಣಗೊಳಿಸುವರು !” ಎಂದು ಹೇಳಿದನು. ಆತನ ಮಾತನ್ನು ಕೇಳಿ ಎಲ್ಲರೂ ಚಕಿತರಾದರು. ಬ್ರಾಹ್ಮಣರಲ್ಲೊಬ್ಬನು "ಏನು ಸ್ವಾಮಿ ? ಈಗ ನಮಗೆ ನೀವೇನು ಹೇಳಿದಿರಿ ? ಎಂದು ಪರಿಚಾರಕನನ್ನು ಕೇಳಿದನು. ಅಷ್ಟು ಹೊತ್ತಿಗೆ ಗುರುಗಳ ಕಾಷಾಯವಸ್ತ್ರಗಳನ್ನು ಬಂಡೆಯ ಮೇಲಿಟ್ಟು ಬರಿಗೈಯಲ್ಲಿ ನಿಂತಿದ್ದ ಆ ಪರಿಚಾರಕನು “ಏನಂದಿರಿ? ನಾನು ನಿಮ್ಮೊಡನೆ ಮಾತಾಡಿದೆನೇ ? ನೀವ್ಯಾರೋ ನನಗೆ ತಿಳಿಯದು ನಿಮ್ಮೊಡನೆ ನನಗೇನು ಮಾತು?” ಎಂದು ಮತ್ತೆ ತನ್ನ ಕಾರ್ಯದಲ್ಲಿ ಮಗ್ನರಾದನು. ಆ ಮಾತು ಕೇಳಿ ಮೂವರು ಬ್ರಾಹ್ಮಣರಿಗೂ ಆಶ್ಚರ್ಯವಾಯಿತು. ಬಹುಶಃ ಆತನಿಗೆ ಬುದ್ದಿಭ್ರಮೆಯಿರಬಹುದೆಂದು ಭಾವಿಸಿ ತುಂಗೆಯಲ್ಲಿ ಸ್ನಾನಮಾಡಹತ್ತಿದರು. ಗುರುಗಳ ಶೇಷವಸ್ತ್ರಗಳನ್ನು ತೆಗೆದುಕೊಂಡು ಹೊರಟ ಪರಿಚಾರಕನು ಮತ್ತೆ ಆ ಬ್ರಾಹ್ಮಣರತ್ತ ತಿರುಗಿ “ಏನ್ರಿ, ನಾನು ಹೇಳಿದ್ದು ತಿಳಿಯಿತೇ? ಬೇಗ ಸ್ನಾನಮುಗಿಸಿ ಮಠಕ್ಕೆ ಬನ್ನಿ, ನಿಮ್ಮ ಇಷ್ಟಾರ್ಥವನ್ನು ಗುರುಗಳು ಪೂರ್ಣಮಾಡುವರು ಎಂದು ಹೇಳಿ ಮಠದಕಡೆಗೆ ಹೊರಟುಬಿಟ್ಟನು ! 

ಸ್ನಾನಮಾಡುತ್ತಿದ್ದ ಬ್ರಾಹ್ಮಣರಿಗೆ ಅಚ್ಚರಿಯಾಯಿತು. “ಇದೇನು ಈತ ಹೀಗೆ ಹೇಳುತ್ತಿದ್ದಾನೆ ? ಕೇಳಿದರೆ ನಾವಾರೋ ತಿಳಿಯದೆನ್ನುತ್ತಾನೆ. ನಮ್ಮೊಡನೆ ಮಾತಾಡಲಿಲ್ಲವೆನ್ನುತ್ತಾನೆ! ಈಗ ಹೀಗೆ ಹೇಳುತ್ತಿದ್ದಾನೆ. ಇದರ ಮರ್ಮವೇನಿರಬಹುದು ?” ಎಂದವರು ಯೋಚಿಸಹತ್ತಿದರು. ಆಗ ತೇಜಸ್ವೀ ಬ್ರಾಹ್ಮಣನು “ನಿಮಗೆ ನಾನು ಮೊದಲೇ ಹೇಳಿದೆ. ದೊಡ್ಡವರನ್ನು ಪರೀಕ್ಷಿಸ ಬಾರದೆಂದು ನೋಡಿದಿರಾ ಗುರುಗಳ ಮಹಿಮೆ? ಗುರುಗಳ ವಿಚಾರವಿರಲಿ, ಅವರ ಶೇಷವಸ್ತ್ರದ ಪ್ರಭಾವವೆಂತಹು- ದೆಂಬುದನ್ನಾದರೂ ಗಮನಿಸಿದಿರಾ? ಆ ಪರಿಚಾಲಕನು ವಿರುದ್ಧ ಮಾತುಗಳಾಡುತ್ತಿದುದರ ಸ್ವಾರಸ್ಯವಿಷ್ಟೇ ಶೇಷವಸ್ತ್ರ ಹಿಡಿದಿದ್ದಾಗ “ನಿಮ್ಮ ಮನೋರಥ ಪೂರ್ಣಮಾಡುತ್ತಾರೆ ಬನ್ನಿ' ಎನ್ನುವುದು, ಅದನ್ನು ಕೆಳಗಿಟ್ಟಾಗ 'ನೀವಾರೋ ತಿಳಿಯದು' ಎನ್ನುವುದನ್ನು ನಾನು ಗಮನಿಸಿದೆ. ಅದು ಶ್ರೀರಾಯರ ಶೇಷವಸ್ತ್ರದ ಮಹಿಮೆ! ಹೋಗಲಿಬಿಡಿ ಇದರಿಂದಾದರೂ ಬುದ್ದಿ ಕಲಿತು ಗುರುಗಳಿಗೆ ಯೋಗ್ಯ ಶಿಷ್ಯರಾಗಲು ಪ್ರಯತ್ನಿಸಿರಿ” ಎಂದು ಹೇಳಿ ಸಂಗಡಿಗರೊಡನೆ ಶ್ರೀಮಠಕ್ಕೆ ಬಂದರು. 

ಇವರು ಮಠಕ್ಕೆ ಬರುವ ಹೊತ್ತಿಗೆ ನೈವೇದ್ಯ ಸಮರ್ಪಣೆಯಾಗಿ ಗುರುಗಳು ದೇವರಿಗೆ ಮಹಾಮಂಗಳಾರತಿ ಮಾಡುತ್ತಿದ್ದರು. ದೇವರ ಪೂಜೆ ಮುಗಿದು ತೀರ್ಥ-ಪ್ರಸಾದ ವಿನಿಯೋಗವಾದಮೇಲೆ, ಗುರುಗಳು ಪಾರುಪತ್ತೇದಾರರನ್ನು ಕರೆದು ಆ ಮೂವರು ಬ್ರಾಹ್ಮಣರನ್ನು ತೋರಿ “ಇವರಿಗೆ ಅಲಂಕಾರ ಬ್ರಾಹ್ಮಣರ ಎದುರಿಗೆ ಎಲೆಗಳನ್ನು ಹಾಕಿ ಕೂಡಿಸಿರಿ” ಎಂದಾಜ್ಞಾಪಿಸಿದರು. ಎಲ್ಲರೂ ಗಂಧಾಕ್ಷತೆಗಳನ್ನು ಧರಿಸಿ ಸಮ್ಮುಖಕ್ಕೆ ಬಂದರು. ಶ್ರೀಯವರು ಮಧ್ಯದಲ್ಲಿ ಮಣೆಯ ಮೇಲೆ ಭಿಕ್ಷೆ ಸ್ವೀಕರಿಸಲು ಕುಳಿತರು. ಪಾರುಪತ್ತೇದಾರರು ಗುರುಗಳ ಅಣತಿಯಂತೆ ಆ ಮೂವರನ್ನೂ ಅಲಂಕಾರ ಬ್ರಾಹ್ಮಣರ ಎದುರುಭಾಗದಲ್ಲಿ ಹಾಕಿದ ಎಲೆಗಳು ತಂದು ಕೂಡಿಸಿದರು. ಭೋಜನ ಪ್ರಾರಂಭವಾಯಿತು. ಅರ್ಧ ಊಟವಾದ ಮೇಲೆ ಶ್ರೀಗಳವರು ಪಾರುಪತ್ತೇದಾರರನ್ನು ಕರೆದು ಆ ಮೂವರು ಬ್ರಾಹ್ಮಣರನ್ನು ತೋರಿ “ಮೊದಲ ಎಲೆಯ ಮುಂದೆ ಕುಳಿತಿದ್ದ ತೇಜಸ್ವಿ ಬ್ರಾಹ್ಮಣನಿಗೆ ಕರಿದ ಶಾವಿಗೆ ಪಾಯಸವನ್ನೂ, ಅವರ ಪಕ್ಕದಲ್ಲಿದ್ದವರಿಗೆ ಕ್ರಮವಾಗಿ ಜಿಲೇಬಿ - ಲಡ್ಡುಗಳನ್ನು, ಯಥೇಚ್ಛವಾಗಿ ಬಡಿಸಿರಿ” ಎಂದು ತಿಳಿಸಿದರು. ಅಡಿಗೆಯವರು ಪಾರುಪತ್ತೇದಾರರ ಸೂಚನೆಯಂತೆ ಮೂವರಿಗೂ ಬಡಿಸಿದರು. ಶ್ರೀಯವರು ಮಂದಹಾಸ ಬೀರುತ್ತಾ ವಿಪ್ರರೇ, ಬಹಳ ದೂರದಿಂದ ನಮ್ಮ ದರ್ಶನಕ್ಕೆ ಬಂದಿದ್ದೀರಿ, ನಿಮಗಿಷ್ಟವಾದ ಪದಾರ್ಥಗಳನ್ನು ಸಾವಕಾಶವಾಗಿ ಸ್ವೀಕರಿಸಿರಿ” ಎಂದರು ! ಶ್ರೀಯವರ ವಚನವನ್ನಾಲಿಸಿ ಆ ಮೂವರು ಬೆವತುಹೋದರು ! ಭಯದಿಂದ ನಡುಗಹತ್ತಿದರು. ಆಗ ತೇಜಸ್ವೀ ಬ್ರಾಹ್ಮನು “ತಾವು ಮಹಾನುಭಾವರು, ಸ್ವಾಮಿ, ತಮ್ಮನ್ನು ಪರೀಕ್ಷಿಸಲು ಉದ್ಯುಕ್ತರಾದ ಇವರ ಜೊತೆಗೆ ಬಂದು ನಾನೂ ಅಪರಾಧಿಯಾಗಿದ್ದೇನೆ. ನಮ್ಮನ್ನು ಕ್ಷಮಿಸಿ, ಶಿಷ್ಯರಲ್ಲಿ ಅನುಗ್ರಹ ಮಾಡಬೇಕು ಎಂದು ವಿನೀತವಾಗಿ ಪ್ರಾರ್ಥಿಸಿದನು. 

ಆಗ ಸಮ್ಮುಖದಲ್ಲಿದ್ದ ಪಂಡಿತರು ಅಚ್ಚರಿಯಿಂದ ಅವರನ್ನು ಇದೇನು ಸಮಾಚಾರವೆಂದು ಕೇಳಿದಾಗ ಅವರು ನದಿಗೆ ಹೋಗುವಾಗ ತಮ್ಮ ಸಂಗಡಿಗರೊಡನೆ ಜರುಗಿದ ಸಂಭಾಷಣೆ, ಗುರುಗಳ ಶೇಷವಸ್ತ್ರವನ್ನು ಒಗೆಯುತ್ತಿದ್ದ ಪರಿಚಾರಕ ಹೇಳಿದ್ದೇ ಮೊದಲಾಗಿ ಎಲ್ಲವಿಚಾರಗಳನ್ನೂ ನಿವೇದಿಸಿ “ದೊಡ್ಡವರನ್ನು ಪರೀಕ್ಷಿಸಬಾರದೆಂದು ನಾನಿವರಿಗೆ ಹೇಳಿದರೂ ಇವರು ತಮಗಿಷ್ಟವಾದ ಪದಾರ್ಥಗಳನ್ನು ಗುರುಗಳು ಕೊಡಿಸಲಿ ಎಂದು ಅಪೇಕ್ಷಿಸಿದರು. ಇಲ್ಲಿ ಅವರು ಇಷ್ಟಪಟ್ಟಿದ್ದು ಮಾತ್ರವಲ್ಲ ನಾನು ಅಪೇಕ್ಷಿಸದೇ ಇದ್ದರೂ ನನಗೆ ಪ್ರಿಯವಾದ ಪಾಯಸವನ್ನು ಉಣಬಡಿಸಿ ಗುರುರಾಜರು ಮಹಿಮೆ ತೋರಿದ್ದಾರೆ!” ಎಂದು ಉದ್ಗಾರ ತೆಗೆದರು. 

ಭೋಜನವಾದ ಮೇಲೆ ಮೂರುಜನ ಬ್ರಾಹ್ಮಣರೂ ಬಂದು ಶ್ರೀರಾಯರಿಗೆ ನಮಸ್ಕರಿಸಿ ಅಪರಾಧವನ್ನು ಕ್ಷಮಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ಶ್ರೀಯವರು ನಸುನಕ್ಕು ಅವರನ್ನು ಸಮಾಧಾನಪಡಿಸಿ ಫಲಮಂತ್ರಾಕ್ಷತೆ, ಸಂಭಾವನೆಗಳನ್ನು ಕರುಣಿಸಿ ಆಶೀರ್ವದಿಸಿದರು. 

ಆ ಬ್ರಾಹ್ಮಣರಲ್ಲಿ ತೇಜಸ್ವಿಯಾಗಿದ್ದ ಬ್ರಾಹ್ಮಣರ ಹೆಸರು ತಿಮ್ಮಣ್ಣಭಟ್ಟ ಎಂದು, ಗುರುಗಳು “ತಿಮ್ಮಣ್ಣಭಟ್ಟ ! ಇಲ್ಲಿ ಬಾ” ಎಂದು ಹತ್ತಿರ ಕರೆದು “ನೀನು ಭಾಗ್ಯಶಾಲಿ, ಹೀಗಾಗಬೇಕೆಂದು ಭಗವತ್ಸಂಕಲ್ಪ ನೀನು ಹೀಗಾಯಿತೆಂದು ಚಿಂತಿಸಬೇಡ. ಮುಂದೆ ನೀನು ಮತ್ತು ನಿನ್ನ ವಂಶೀಕರು ನಮ್ಮ ಸೇವೆ ಮಾಡುವ ಭಾಗ್ಯ ನಿಮಗೆ ದೊರಕಲಿದೆ” ಎಂದು ಆಶೀರ್ವದಿಸಿ ಕಳಿಸಿದರು.