|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೦೫. ಮೋಕ್ಷ ಕೊಡಿಸಿದ ಮಹಾಮುನಿ

ಚಿತ್ರದುರ್ಗವು ಇತಿಹಾಸ ಪ್ರಸಿದನಗರ, ಅಲ್ಲಿ ಬ್ರಾಹ್ಮಣಸಮಾಜದ ಎಲ್ಲ ಪಂಗಡದವರೂ ಬಹುಸಂಖ್ಯೆಯಲ್ಲಿದ್ದು ಶ್ರೀಮಠದ ಶಿಷ್ಯರ ಮನೆಗಳೂ ಅಧಿಕವಾಗಿದ್ದವು. ಐತಿಹಾಸಿಕವಾಗಿ ಪ್ರಸಿದ್ಧವಾಗಿದ್ದಂತೆ ಚಿತ್ರದುರ್ಗವು ಪೌರಾಣಿಕವಾಗಿಯೂ ಖ್ಯಾತಿಗಳಿಸಿದ್ದಿತು. ದ್ವಾಪರದಲ್ಲಿ ಪಾಂಡವರು ಸಂಚರಿಸಿದ ಪುಣ್ಯಭೂಮಿಯಾಗಿದ್ದಿತು ಆಪ್ರಾಂತ್ಯ, ಚಿತ್ರದುರ್ಗದ ಬೆಟ್ಟದ ಮೇಲಿರುವ ಗೋಪಾಲಕೃಷ್ಣದೇವರನ್ನು ಜನಮೇಜಯರಾಯನು ಪ್ರತಿಷ್ಠಿಸಿದನೆಂದು ಐತಿಹ್ಯವಿದೆ. ಚಿತ್ರದುರ್ಗದ ಶ್ರೀಮಠದಲ್ಲಿರುವ ಪ್ರಾಣದೇವರವಿಗ್ರಹ ಬಹು ಪ್ರಾಚೀನವಾದುದೆಂದು ಹೇಳುವರು. ಐದು ಘಂಟೆಗಳಿಂದ ಯುಕ್ತವಾಗಿರುವುದು ಈ ಪ್ರಾಣದೇವರ ವೈಶಿಷ್ಟ. ಈ ಪ್ರಾಣದೇವರು ಪಾಂಡವರ ಆರಾಧ್ಯದೈವ. ಇದನ್ನು ಬಲ್ಲ ಶ್ರೀರಾಯರು ಪ್ರಾಣದೇವರ ಸನ್ನಿಧಿಯಲ್ಲಿ ವಾಸಮಾಡಿ ಸೇವಿಸುತ್ತಿದ್ದರು. 

ಶ್ರೀರಾಯರ ಪರಿಚಾರಕರಲ್ಲಿ ವೆಂಕಣ್ಣನೆಂಬುಮ್ಮ ಗುರುಗಳನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ಅವನ ಸೇವೆಗೆ ಮೆಚ್ಚಿದ್ದ ರಾಯರು “ವೆಂಕಣ್ಣ, ನಿನಗೇನು ಬೇಕು” ಎಂದು ಕೇಳಿದಾಗಲೆಲ್ಲಾ ಅವನು “ಸ್ವಾಮಿ, ನನಗೆ ಮೋಕ್ಷ ಬೇಕು” ಎಂದು ಕೋರುತ್ತಿದ್ದನು. ಅದನ್ನು ಕೇಳಿ ರಾಯರು ನಸುನಕ್ಕು ಸುಮ್ಮನಾಗುವರು. ಹೀಗೆ ಅನೇಕ ಬಾರಿ ನಡೆದಿತ್ತು. ಚಿತ್ರದುರ್ಗಕ್ಕೆ ಬಂದಮೇಲೂ ಎರಡು ಮೂರು ಸಲ ಶ್ರೀಯವರು ಏನು ಬೇಕೆಂದು ಕೇಳುವುದು, ವೆಂಕಣ್ಣನು ಮುಕ್ತಿಯನ್ನು ಬೇಡುವುದು ಜರುಗಿತು. ಇದು ಮಠದವರಿಗೆ ಒಂದು ವಿನೋದವಾಗಿ ಕಾಣಿಸುತ್ತಿದ್ದು, ಕೆಲವರು “ಏನೋ ವೆಂಕಣ್ಣ ! ನೀನು ಮೋಕ್ಷಕ್ಕೆ ಹೋಗುವುದೆಂದು ?” ಎಂದು ಹಾಸ್ಯಮಾಡುತ್ತಿದ್ದರು. ವೆಂಕಣ್ಣನು ಕೋಪಗೊಳ್ಳದೆ ಗಂಭೀರವಾಗಿ “ಮಹಾಮಹಿಮರಾದ ಗುರುಗಳು ಕಳಿಸಿದಾಗ' ಎಂದುತ್ತರಿಸುತ್ತಿದ್ದನು. ಇದು ರಾಯರಿಗೂ ತಿಳಿದಿತ್ತು. ತ್ರಿಕಾಲಜ್ಞಾನಿಗಳಾದ ರಾಯರು ವೆಂಕಣ್ಣನು ಮುಕ್ತಿಯೋಗ್ಯ ಸುಜೀವಿಯೆಂದು ತಿಳಿದಿದ್ದರು. ಅಂತೆಯೇ ಅವನಲ್ಲಿ ಅನುಗ್ರಹೋನ್ಮುಖರಾದರು ! ಒಂದು ದಿನ ಸೇವೆಮಾಡುತ್ತಿದ್ದ ವೆಂಕಣ್ಣನನ್ನು ಹತ್ತಿರಕರೆದು “ವೆಂಕಣ್ಣ, ನಿನಗೇನು ಬೇಕು?” ಎಂದು ಪ್ರಶ್ನಿಸಿದರು. ಎಂದಿನಂತೆ ಅವನು “ಮಹಾಸ್ವಾಮಿ, ಬಹುದಿನಗಳಿಂದ ನನ್ನ ಬಯಕೆಯೇನೆಂದು ಸನ್ನಿಧಿಯಲ್ಲಿ ವಿಜ್ಞಾಪಿಸುತ್ತಿದ್ದೇನೆ. ಐಹಿಕವಾಗಿ ನಾನು ಏನನ್ನೂ ಬಯಸುವುದಿಲ್ಲ ! ತಾವು ಸುಪ್ರೀತರಾಗಿದ್ದಲ್ಲಿ ನನಗೆ ಮೋಕ್ಷವನ್ನು ಕೊಡಿಸಿ ಉದ್ದರಿಸಬೇಕು” ಎಂದು ಬಿನ್ನವಿಸಿದನು. 

ರಾಯರು : ವೆಂಕಣ್ಣ ! ಮುಕ್ತಿ ಬೇಕೆಂದು ಪ್ರಾರ್ಥಿಸುವುದು ಮಾತ್ರ ಸಾಲದಪ್ಪ, ಅದಕ್ಕೆ ನೀನು ಸರ್ವವಿಧದಿಂದ ಸಿದ್ಧನಾಗಬೇಕು. 

ವೆಂಕಣ್ಣ : ಅಪ್ಪಣೆ ಮಹಾಸ್ವಾಮಿ, ನಾನಾವ ರೀತಿಯಿಂದ ಸಿದ್ದನಾಗಬೇಕೋ ಆಜ್ಞಾಪಿಸೋಣವಾಗಲಿ. ಅದರಂತೆ ನಡೆಯುತ್ತೇನೆ. 

ರಾಯರು : ನಾವು ಹೇಳಿದಂತೆ ಕೇಳುವೆಯಾ ? 

ವೆಂಕಣ್ಣ : ಅವಶ್ಯವಾಗಿ, 

ರಾಯರು : ಅದರಿಂದ ನಿನಗೆ ಪ್ರಾಣಹಾನಿಯಾಗುವುದೆಂದು ತೋರಿದರೂ ನಮ್ಮ ಆಜ್ಞೆಯನ್ನು ಪಾಲಿಸುವೆಯಾ ? ವೆಂಕಣ್ಣ : ತಮ್ಮ ಪಾದಸಾಕ್ಷಿಯಾಗಿಯೂ ಅದರಂತೆ ವರ್ತಿಸುತ್ತೇನೆ. 

ರಾಯರು : ಹಾಗಾದರೆ ಸರಿ, ನಾಳೆ ನಿನಗೆ ಮೋಕ್ಷ ಕೊಡಿಸುತ್ತೇವೆ, ಸಿದ್ಧನಾಗು. 

ಗುರುಗಳ ಮಾತು ಕೇಳಿ ವೆಂಕಣ್ಣ ಹಿಗ್ಗಿದ. ಅಡಿಗಡಿಗೆ ಗುರುಗಳ ಅಡಿದಾವರೆಗಳಿಗೆ ನಮಿಸಿ “ಉದ್ಧತನಾದೆ ! ನಾನೇನು ಮಾಡಬೇಕು ? ಅಪ್ಪಣೆಯಾಗಲಿ” ಎಂದ. ಗುರುಗಳು 'ನಾಳೆ ತಿಳಿಸುತ್ತೇವೆ' ಎಂದರು. 

ಮರುದಿನ ರಾಯರು ವೆಂಕಣ್ಣನು ಸ್ನಾನ-ಸಂಧ್ಯಾಚರಣೆಯನ್ನು ಮಾಡಿದಮೇಲೆ ಅವನಿಗೆ ಪಂಚಗವ್ಯ ಪ್ರಾಯಶ್ಚಿತ್ತಾದಿಗಳನ್ನು ಮಾಡಿಸಿ, ಹೋಮಮಾಡಿಸಿ, ಅಗ್ನಿಕುಂಡವನ್ನು ತಯಾರುಮಾಡಿಸಿ, ಹೋಮಾಗ್ನಿಯಿಂದ ಅಗ್ನಿಕುಂಡವನ್ನು ಪ್ರಜ್ವಲಗೊಳಿಸಿ, ವೆಂಕಣ್ಣನಿಗೆ ರಹಸ್ಯವಾಗಿ ಬೀಜಾಕ್ಷರ ಮಂತ್ರೋಪದೇಶಮಾಡಿ, ಅದನ್ನು ಜಪಿಸುತ್ತಾ ಅಗ್ನಿಕುಂಡದಲ್ಲಿ ಹಾರುವಂತೆ ಅಪ್ಪಣೆ ಮಾಡಿದರು. ಗುರುಗಳ ಮಾತು ಕೇಳಿ ವೆಂಕಣ್ಣನ ದೇಹದಲ್ಲಿ ವಿದ್ಯುತ್ತಂಚಾರವಾದಂತಾಯಿತು ! ಆನಂದಬಾಷ್ಪ ಸುರಿಸುತ್ತಾ ಶ್ರೀಪಾದಂಗಳವರಿಗೆ ಮೂರು ಬಾರಿ ಪ್ರದಕ್ಷಿಣೆ ನಮಸ್ಕಾರ ಮಾಡಿ “ಶ್ರೀರಾಘವೇಂದ್ರಗುರುಸಾರ್ವಭೌಮ ಗೋವಿಂದಾ ಗೋವಿಂದ” ಎಂದುಚ್ಚರಿಸಿ ಶ್ರೀಯವರು ಉಪದೇಶಿಸಿದ್ದ ಬೀಜಾಕ್ಷರ-ಮಂತ್ರಗಳನ್ನು ಜಪಿಸುತ್ತಾ ಅಗ್ನಿಕುಂಡಕ್ಕೆ ಹಾರಿಬಿಟ್ಟನು. 

ಚಿತ್ರದುರ್ಗದ ಬ್ರಾಹ್ಮಣಸಮಾಜದ ಕೆಲಜನರು ಇದೇನು ವಿನೋದವೆಂದು ಜರುಗುತ್ತಿದ್ದ ಘಟನೆಗಳನ್ನೆಲ್ಲಾ ನೋಡುತ್ತಾ ನಿಂತಿದ್ದವರು ವೆಂಕಣ್ಣನು ಅಗ್ನಿಕುಂಡಕ್ಕೆ ಧುಮುಕಿದ್ದನ್ನು ಕಂಡು ಚಕಿತರಾದರು. ಕುಹಕ ಬುದಿಯ ಆ ಜನರು ರಾಯರ ಬಳಿಗೆ ಬಂದು “ಇದೇನನ್ಯಾಯ ಸ್ವಾಮಿ ? ನಿಮ್ಮನ್ನೇ ನಂಬಿದ್ದ ಆ ಬಡಪಾಯಿಗೆ ಮುಕ್ತಿ ಕೊಡಿಸುವುದಾಗಿ ಹೇಳಿ, ಅಗ್ನಿಗೆ ಆಹುತಿಮಾಡಿ ಪ್ರಾಣ ತೆಗೆದುಬಿಟ್ಟರಲ್ಲಾ !” ಎಂದು ಆಕ್ಷೇಪಿಸಿದರು. ಗುರುಗಳು ಮಂದಸ್ಮಿತರಾಗಿ ನಾವು ವೆಂಕಣ್ಣನಿಗೆ ಮೋಕ್ಷ ಕೊಡಿಸಿದ್ದೇವೋ, ಪ್ರಾಣತೆಗೆದೆವೋ ಎಂಬುದು ಇನ್ನೊಂದು ಕ್ಷಣದಲ್ಲೇ ನಿಮಗೇ ಮನವರಿಕೆಯಾಗುವುದು ! ಆಲಿಸಿ ಕೇಳಿರಿ. ವೆಂಕಣ್ಣನು ದೇವವಿಮಾನದಲ್ಲಿ ಕುಳಿತು ಹೋಗುತ್ತಿದ್ದಾನೆ ! ವಿಮಾನದ ಘಂಟಾನಿನಾದವಾಗುತ್ತಿದೆ ! ಕೇಳಿರಿ !” ಎಂದರು. 

ಆಶ್ಚರ್ಯ! ಪರಮಾಶ್ಚರ್ಯ!! ಶ್ರೀಪಾದಂಗಳವರು ಹೇಳಿದಂತೆ ಆಕಾಶದಲ್ಲಿ ಆಶ್ರುತಪೂರ್ವವಾದ ಸುಮಧುರ ನಾದಯುಕ್ತವಾದ ಘಂಟಾನಿನಾದವಾಗುತ್ತಿದೆ! ಆ ದಿವ್ಯನಾದವು ಸ್ಪಷ್ಟವಾಗಿ ಕೇಳಿಸುತ್ತಿದೆ! ಸರ್ವರೂ ಆಶ್ಚರ್ಯ-ಆನಂದ-ಭಕ್ತಿಗಳಿಂದ ಆಕಾಶದತ್ತ ತಲೆಯೆತ್ತಿ ಘಂಟಾನಿನಾದವನ್ನು ಕೇಳುತ್ತಿರುವಾಗಲೆ ಶ್ರೀಯವರ ಶಿರದ ಮೇಲೆ ಅಂಬರದಿಂದ ಪುಷ್ಪವೃಷ್ಟಿಯಾಯಿತು. “ಅಬ್ಬಾ, ಇದೇನದ್ಭುತ ! ಎಂತಹ ಮಹಿಮೆ ! ಗುರುಗಳು ಶಿಷ್ಯನಿಗೆ ಮೋಕ್ಷಕೊಡಿಸಿದ ಮಹಾನುಭಾವರು! ಇಂತಹ ಅಪೂರ್ವ ಮಹಿಮೆಯನ್ನು ಕಣ್ಣಾರೆ ಕಂಡ ನಾವೇ ಧನ್ಯರು” ಎಂದು ಉದ್ಧರಿಸುತ್ತಾ ಕುಹಕಿಗಳು ಶ್ರೀರಾಯರಿಗೆ ಅಡ್ಡಬಿದ್ದು “ಮಹಾನುಭಾವ! ತಮ್ಮ ಅಗಾಧಮಹಿಮೆಯನ್ನರಿಯಲಾಗದೆ ಜರಿದೆವು. ನಮ್ಮ ಅಪರಾಧವನ್ನು ಮನ್ನಿಸಿ ಕಾಪಾಡಬೇಕು, ಅಜ್ಜರಾದ ನಮಗೆ ಘಂಟಾನಿನಾದವನ್ನು ಕೇಳಿಸಿ, ಪುಷ್ಪವೃಷ್ಟಿಯಾಗುವುದನ್ನು ತೋರಿಕೊಟ್ಟು ನಿಮ್ಮ ಮಹಿಮೆಯನ್ನು ಮನದಟ್ಟು ಮಾಡಿಕೊಟ್ಟಿರಿ. ಮೋಕ್ಷಕೊಡಿಸಿದ ಮಹಾಮುನಿಗಳಾದ ನಿಮಗೆ ಅನಂತ ನಮಸ್ಕಾರಗಳು” ಎಂದು ಶ್ರೀಯವರ ಗುಣಗಾನಮಾಡಿ ಶ್ರೀಯವರ ಜಯ ಜಯಕಾರಮಾಡಿದರು.

ಇಂದಿಗೂ ಚಿತ್ರದುರ್ಗದಲ್ಲಿ ರಾಯರು ವೆಂಕಣ್ಣನಿಗೆ ಮೋಕ್ಷಕೊಡಿಸಿದ ಸ್ಥಳವನ್ನು ಅಲ್ಲಿನ ಜನರು ತೋರಿ, ಗುರುರಾಜರ ಅಗಮ್ಯಮಹಿಮೆಯನ್ನು ಕೊಂಡಾಡುತ್ತಾರೆ. ಮೋಕ್ಷ ಕೊಡಿಸಿದ ಸ್ಥಳಕ್ಕೆ ಹೊಂದಿಕೊಂಡ ಪವಿತ್ರ ಸ್ಥಳದಲ್ಲಿಯೇ ಇಂದು ರಾಯರ ಬೃಂದಾವನವು ವಿರಾಜಿಸುತ್ತಿದೆ. ಗುರುಗಳ ಅನುಗ್ರಹಕ್ಕೆ ಪಾತ್ರನಾದ ವೆಂಕಣ್ಣನ ವಂಶೀಕರಾದ ಭಟ್ಟರಹಳ್ಳಿ ನಾರಾಯಣರಾಯರು ಮತ್ತು ಅವರ ಸುಪುತ್ರರೇ ಇಂದಿನ ಶ್ರೀರಾಯರ ಗುಡಿಯ ಕಟ್ಟಡವನ್ನು ಕಟ್ಟಿಸಿ ಶ್ರೀರಾಯರ ಉಭಯವಂಶಾಭಿಚಂದ್ರಮರಾದ ಪೂಜ್ಯ ಶ್ರೀಸುಯಮೀಂದ್ರತೀರ್ಥ ಶ್ರೀಪಾದಂಗಳವರಿಂದ ಶ್ರೀರಾಯರ ಬೃಂದಾವನ ಪ್ರತಿಷ್ಠೆ ಮಾಡಿಸಿ ಮಠವನ್ನು ಶ್ರೀಯವರಿಗೆ ಒಪ್ಪಿಸಿಕೊಟ್ಟಿರುವುದೂ ಒಂದು ಶ್ರೀರಾಯರ ಪವಾಡವೆಂದು ಹೇಳಬಹುದು.