|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೦೨. ಶ್ರೀರಂಗಪಟ್ಟಣದಲ್ಲಿ ರಾಜಗೌರವ

 ಶ್ರೀರಾಘವೇಂದ್ರಗುರುವರ್ಯರು ದಯಮಾಡಿಸುವರೆಂದು ರಾಜಧಾನಿಯ ಎಲ್ಲೆಯಲ್ಲಿ ನಿರ್ಮಿಸಲಾದ ಅಲಂಕೃತ ಮಂಟಪದಲ್ಲಿ ಸಕಲ ರಾಜಮರಾದೆ, ಬಿರುದು ಬಾವಲಿ ಪೂರ್ಣಕುಂಭ, ವಾದ್ಯವೈಭವದೊಡನೆ ಮಹಾರಾಜರು ಕಾದುಕುಳಿತಿದ್ದರು. ಶ್ರೀರಂಗನಾಥಸ್ವಾಮಿಯ ದೇವಾಲಯದಿಂದ ಪೂರ್ಣಕುಂಭ, ಇಸ್ತಿಕಾಪಾಲುಗಳೊಡನೆ ಅರ್ಚಕರು, ವೇದವಿದ್ಯಾವಿಶಾರದರೂ ಆಗಮಿಸಿದ್ದರು. 

ಶ್ರೀಪಾದಂಗಳವರಿಗಾಗಿ ಮಹಾರಾಜರ ಅಣತಿಯಂತೆ ಮಹಾಸಂಸ್ಥಾನದ ಗೌರವಕ್ಕೆ ತಕ್ಕಂತೆ ಮತ್ತು ಮೈಸೂರು ರಾಜರಯ ಪದ್ಧತಿಯಂತೆ ಆನೆಯ ಮೇಲೆ ಅಂಬಾರಿಯನ್ನಿಟ್ಟು ಅಲಂಕರಿಸಿ, ಅನೇಕ ಆನೆ, ಕುದುರೆ, ಒಂಟೆ, ನಗಾರಿ, ಕಹಳೆ, ವಿವಿಧ ವಾದ್ಯಗಳು ಮಕರಗೋರಣ, ನಡುಚಪ್ಪರ, ಸ್ವರ್ಣರಜತಕೋಲಿನವರು, ಜಿಲ್ಲೆಯವರು ಸಮವಸ್ತ್ರಧರಿಸಿದ ಸೈನಿಕರು-ಸಿದ್ದರಾಗಿ ನಿಂತಿದ್ದರು. ರಾಜಧಾನಿಯ ಪಂಡಿತರು, ಲೌಕಿಕ ವೈದಿಕ, ಧರ್ಮಾಭಿಮಾನಿಗಳು ಸಹಸಂಖ್ಯೆಗಳಲ್ಲಿ ಗುರುಗಳನ್ನು ಸ್ವಾಗತಿಸಲು ಉತ್ಸಾಹದಿಂದ ನಿಂತಿದ್ದರು, ಶ್ರೀಮಠದ ಸಮಸ್ತ ಬಿರುದಾವಳಿಗಳೊಡನೆ ಶ್ರೀಯವರ ಸವಾರಿಯು ಚಿತೈಸಿತು. ಕೂಡಲೇ ಮಂಗಳವಾದ್ಯಗಳು ಮೊಳಗಿದವು. ವೇದಘೋಷವಾಗಹತ್ತಿತ್ತು. ಶ್ರೀದೊಡ್ಡದೇವರಾಜ ಒಡೆಯರು ದರ್ಬಾರಿನ ಪ್ರಮುಖರೊಡನೆ ಸ್ವಾಗತಿಸಿ ಮಾಲಾರ್ಪಣೆ ಮಾಡಿ ಗುರುಗಳನ್ನು ಅಂಬಾರಿಯಲ್ಲಿ ಮಂಡಿಸಿ ಮೆರವಣಿಗೆ ಹೊರಡಿಸಿದರು. ಅತಿ ವೈಭವದಿಂದ ಸಾಗಿದ ಮೆರವಣಿಗೆಯು ರಾಜಧಾನಿಯ ಪ್ರಮುಖ ಬೀದಿಗಳನ್ನು ಹಾದು ಶ್ರೀಯವರಿಗಾಗಿ ಏರ್ಪಡಿಸಿದ್ದ ಭವ್ಯ ಮಂದಿರದತ್ತ ಬಂದಿತು. ಅಲ್ಲಿ ಅನೇಕ ಸುವಾಸಿನಿಯರು ದೇವರಿಗೆ ಗುರುಗಳಿಗೆ ಆರತಿ ಬೆಳಗಿದರು. ಜನರು ಪುಷ್ಪವೃಷ್ಟಿ ಮಾಡಿದರು. 

ಅಂಬಾರಿಯಿಂದ ಇಳಿದ ಶ್ರೀಪಾದಂಗಳವರಿಗೆ ಮಹಾಜನರು ಹಸ್ತಲಾಘವವಿತ್ತು ಮಂದಿರ ಪ್ರವೇಶಮಾಡಿಸಿ ಭದ್ರಾಸನದಲ್ಲಿ ಕೂಡಿಸಿದರು. ಆನಂತರ ಶ್ರೀಯವರು ಕುಶಲಪ್ರಶ್ನೆಮಾಡಿ ಪ್ರಭುಗಳಿಗೆ ಫಲಮಂತ್ರಾಕ್ಷತೆ ಅನುಗ್ರಹಿಸಿ ಕಳಿಸಿ ಕೊಟ್ಟಮೇಲೆ, ದರ್ಬಾರಿನ ಪ್ರಮುಖರ ಮತ್ತು ಪೌರಜಾನಪದರ ಪರಿಚಯವನ್ನು ಗುರುಗಳಿಗೆ ಮಾಡಿಕೊಡಲಾಯಿತು. ಎಲ್ಲರೊಡನೆಯೂ ನಸುನಗುತ್ತಾ ಮಾತನಾಡಿದ ಗುರುಪಾದರು ಸಕಲರಿಗೂ ಫಲಮಂತ್ರಾಕ್ಷತೆಯನ್ನು ದಯಪಾಲಿಸಿದರು. 

ಆಷಾಢ ಕೃಷ್ಣ ಪಂಚಮೀ ದಿವಸ ಜಯತೀರ್ಥಗುರುವರೇಣ್ಯರ ಪುಣ್ಯದಿನದಂದು ಶ್ರೀಗಳವರು ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪ ಪೂರ್ವಕ ಸ್ವೀಕಾರಮಾಡಿದರು. ಅಂದು ಮಹಾಪ್ರಭುಗಳ ಪ್ರತಿನಿಧಿಗಳಾಗಿ ಶ್ರೀಚಿಕ್ಕದೇವರಾಜ ಒಡೆಯರು ದರ್ಬಾರು ಭಕ್ಷಿಗಳು, ರಾಜಪುರೋಹಿತರು ಬಂದು ಶ್ರೀಯವರಿಗೆ ಕಾಣಿಕೆ ಸಮರ್ಪಿಸಿ ಸಂಕಲ್ಪಕ್ಕೆ ಕೂಡಿಸಿದರು. ಅಂದು ಶ್ರೀಟೀಕಾರಾಯರ ಪುಣ್ಯದಿನವನ್ನು ಭಕ್ತಿಯಿಂದ ಆಚರಿಸಲಾಯಿತು.

ಶ್ರೀದೊಡ್ಡ ದೇವರಾಜರ ಪ್ರಾರ್ಥನೆಯಂತೆ ಆಷಾಢಕೃಷ್ಣದಶಮೀ ಏಕಾದಶೀ, ದ್ವಾದಶೀ ದಿನತ್ರಯಗಳಲ್ಲಿ ಅರಮನೆಯಲ್ಲಿ ಪೂಜಾರಾಧನೆ ಮಾಡಿ ಅನುಗ್ರಹಿಸಲು ಗುರುರಾಜರು ಸಂತೋಷದಿಂದ ಸಮ್ಮತಿಸಿದರು. ದಶಮೀದಿವಸ ಬೆಳಿಗ್ಗೆ ರಾಜಪ್ರತಿನಿಧಿಗಳಾಗಿ, ಸಮಸ್ತ ವೈಭವದಿಂದ ಚಿಕ್ಕದೇವರಾಜ ಒಡೆಯರು ಗುರುಗಳನ್ನು ಸ್ವರ್ಣಪಾಲಿಕೆಯಲ್ಲಿ ಮಂಡಿಸಿ, ವಾದ್ಯವೈಭವದೊಡನೆ ಅರಮನೆಗೆ ಕರೆತಂದರು. ರಾಜದ್ವಾರದಲ್ಲಿ ಗುರುಗಳನ್ನು ಸ್ವಾಗತಿಸಿದ ಮಹಾರಾಜರು ಹಸ್ತಲಾಘವಿತ್ತು ಗುರುರಾಜರನ್ನು ಸಭಾಮಂದಿರಕ್ಕೆ ಕರೆತಂದು ಭದ್ರಾಸನದಲ್ಲಿ ಕೂಡಿಸಿ ಪಾದಪೂಜೆಮಾಡಿ ಕಾಣಿಕೆ ಸಮರ್ಪಿಸಿದರು. ಅಂದು ಅರಮನೆಯಲ್ಲಿ ಶ್ರೀಮೂಲರಾಮರ ಪೂಜೆಯು ವೈಭವದಿಂದ ಜರಗಿತು. ಮಹಾರಾಜರು ಶ್ರೀದೇವರ ದರ್ಶನಮಾಡಿ ಶ್ರೀಮೂಲರಾಮರ ಇತಿಹಾಸವನ್ನು ಕೇಳಿ ತಿಳಿದು ಪರಮಸಂತೋಷಗೊಂಡರು. ತೀರ್ಥಪ್ರಸಾದ ವಿತರಣೆಯಾಗಿ ಗುರುಗಳು ಭಿಕ್ಷಾಸ್ವೀಕರಿಸಿದ ಮೇಲೆ ಮಹಾರಾಜರು ಗುರುಸನ್ನಿಧಿಗೆ ಬಂದು ಶ್ರೀತೀರ್ಥ-ತುಳಸೀ ಪ್ರಸಾದ ಮಂತ್ರಾಕ್ಷತೆಗಳನ್ನು ಪಡೆದು ಪಾವನರಾದರು. 

ಮರುದಿನ ಆಷಾಢಕೃಷ್ಣ ಏಕಾದಶಿ ಸೋಮವಾರ ದಿನಾಂಕ ೦೬-೦೭-೧೬೬೩ರಂದು ದೇವರ ಪೂಜಾರಾಧನೆಯು ಮುಗಿದ ಮೇಲೆ ತೀರ್ಥಕಾಲದಲ್ಲಿ ದೊಡ್ಡದೇವರಾಜ ಒಡೆಯರು ಸರಗೂರು ಸ್ಥಳದಲ್ಲಿರುವ ನಲ್ಲೂರು” ಅಥವಾ “ದೇವರಾಜಪುರ” ಎಂಬ ಸಂಪದ್ಭರಿತವಾದ ಗ್ರಾಮವನ್ನು ಶ್ರೀರಾಘವೇಂದ್ರತೀರ್ಥರಿಗೆ ಸಹಿರಣೋದಕ ಧಾರಾಪುರಸ್ಸರವಾಗಿ ದಾನಮಾಡಿ ಶ್ರೀಪಾದಂಗಳವರಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. ಮರುದಿನ ದ್ವಾದಶಿ ದೇವರಪೂಜೆ, ಪಾರಣೆಯಾದ 

ಮೇಲೆ ಅರಮನೆಯ ಪರಿವಾರ, ರಾಜಬಂಧುಗಳು, ಅಂತಃಪುರದ ಸ್ತ್ರೀಜನರುಗಳಿಗೆ ತೀರ್ಥಪ್ರಸಾದಮಂತ್ರಾಕ್ಷತೆ ದಯಪಾಲಿಸಿದರು. ಅಂದು ಸಾಯಂಕಾಲ ದರ್ಬಾರಿನಲ್ಲಿ ಶ್ರೀಯವರನ್ನು ಭದ್ರಪೀಠದಲ್ಲಿ ಮಂಡಿಸಿ, ಮಹಾರಾಜರು ರಾಜಖಿಲ್ಲತ್ತು, ಧನಕನಕ ವಜ್ರವೈಢರಾಭರಣಗಳನ್ನೂ, ಶ್ವೇತಛತ್ರ, ಚಾಮರಗಳು, ಅಪ್ತಾಗಿರಿ, ಹಗಲುದೀವಟಿಕೆ - ಸ್ವರ್ಣದಂಡಗಳ ಮಹಾಗೌರವ, ಬಿರುದಾವಳಿಗಳನ್ನು ಸಮರ್ಪಿಸಿ ಗೌರವಿಸಿದರು.11 ಶ್ರೀಯವರು ಹರ್ಷಚಿತ್ತರಾಗಿ ಮಹಾಪ್ರಭುಗಳಿಗೆ ರಾಜಯೋಗ್ಯರೀತಿಯಲ್ಲಿ ರಾಜಖಿಲ್ಲತ್ತು, ಮುಕ್ತಾಹಾರ, ದೇವರ ಪ್ರಸಾದ, ಫಲಮಂತ್ರಾಕ್ಷತೆಗಳನ್ನು ಕರುಣಿಸಿ ಆಶೀರ್ವದಿಸಿ, ರಾಜರಿಂದ ಬೀಳ್ಕೊಂಡು ಬಿಡಾರಕ್ಕೆ ದಯಮಾಡಿಸಿದರು.